ಹುಬ್ಬಳ್ಳಿ: ನಿರೀಕ್ಷೆಯಂತೆ ಜಮ್ಮು ಮತ್ತು ಕಾಶ್ಮೀರ ತಂಡ ರಣಜಿ ಟ್ರೋಫಿಯ ಫೈನಲ್ನಲ್ಲಿ ಅಮೋಘ ಪ್ರದರ್ಶನ ನೀಡಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ನಿರಾಸೆ ಅನುಭವಿಸಿತು. 9ನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಕನಸು ಕಾಣುತ್ತಿದ್ದ ಕರ್ನಾಟಕ ತಂಡ ನಿರಾಸೆ ಅನುಭವಿಸಿತು. ಶನಿವಾರ ಮಧ್ಯಾಹ್ನದ ಹೊತ್ತಿಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಿದಾಗ ಜಮ್ಮು ಮತ್ತು ಕಾಶ್ಮೀರ ಆಟಗಾರರ ಮುಖದಲ್ಲಿ ಮಂದಹಾಸ ಮೂಡಿಸಿತು. ಅಲ್ಲದೆ ಎಲ್ಲ ಆಟಗಾರರು ಮೈದಾನಕ್ಕೆ ನುಗ್ಗಿ ಸಂಭ್ರಮಿಸಿದರು.
ರಣಜಿ ಟ್ರೋಫಿ ಫೈನಲ್ ಪಂದ್ಯದ ಯಾವುದೇ ಹಂತದಲ್ಲೂ ಜಮ್ಮು ಕಾಶ್ಮೀರ ತಂಡ ತನ್ನ ಹಿಡಿತವನ್ನು ಸಡಿಲ ಮಾಡಲಿಲ್ಲ. ಎಲ್ಲ ಹಂತದಲ್ಲೂ ಕರ್ನಾಟಕಕ್ಕೆ ಸವಾಲು ಎಸೆದ ಜಮ್ಮು ಕಾಶ್ಮೀರ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಎಂದು ಮರೆಯದ ದಿನಕ್ಕೆ ಶನಿವಾರ ಸಾಕ್ಷಿಯಾಯಿತು. ಜಮ್ಮು ಕಾಶ್ಮೀರ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಾಗಿನಿಂದಲೂ ಮಾಡಲಾಗದ ಸಾಧನೆಯನ್ನು ಹುಬ್ಬಳ್ಳಿಯಲ್ಲಿ ಮಾಡಿ ಇತಿಹಾಸದಲ್ಲಿ ತನ್ನ ಹೆಸರನ್ನು ನಮೂದಿಸಿತು. ಈ ಮೂಲಕ ಜಮ್ಮು ಕಾಶ್ಮೀರ ತಂಡ ಹೊಸ ಇತಿಹಾಸವನ್ನು ನಿರ್ಮಿಸಿತು.

ಕೊನೆಯ ದಿನದಾಟದಲ್ಲಿ ಜಮ್ಮು ಕಾಶ್ಮೀರ ತಂಡ 186 ರನ್ಗಳಿಗೆ 4 ವಿಕೆಟ್ ಗಳಿಂದ ಆಟ ಮುಂದುವರೆಸಿತು. ಆದರೆ ಐದನೇ ದಿನದಾಟದಲ್ಲಿ ಜಮ್ಮು ತಂಡ ಒಂದೇ ಒಂದು ವಿಕೆಟ್ ಕಳೆದುಕೊಳ್ಳಲಿಲ್ಲ. ಆರಂಭಿಕ ಕಮ್ರನ್ ಇಕ್ಬಾಲ್ 16 ಬೌಂಡರಿ, 3 ಸಿಕ್ಸರ್ ಸಹಾಯದಿಂದ 160 ರನ್ ಸಿಡಿಸಿದರೆ, ಸಾಹಿಲ್ ಲೋತ್ರಾ 8 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಬಾರಿಸಿ ಮಿಂಚಿದರು. ಚಹಾ ವಿರಾಮದ ವೇಳೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ಶತಕ ಬಾರಿಸಿದ್ದ ಶುಭಂ ಪುಂಡೀರ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಇನ್ನು ರಣಜಿ ಟ್ರೋಫಿಯ ಉದ್ದಕ್ಕೂ ಸಹ ಬಿಗುವಿನ ದಾಳಿ ನಡೆಸ ಎದುರಾಳಿ ಬ್ಯಾಟರ್ಗಳಿಗೆ ಕಂಟಕರಾಗಿದ್ದ ವೇಗದ ಬೌಲರ್ ಅಕಿಬ್ ನಬಿ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಜಮ್ಮು ಕಾಶ್ಮೀರ ತಂಡ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಡುವುದನ್ನು ನೋಡಲು ಜಮ್ಮು ಕಾಶ್ಮೀರ ಮುಖ್ಯ ಮಂತ್ರಿ ಉಮರ್ ಅಬ್ದುಲ್ ಸಹ ಹಾಜರಿದ್ದರು. ಇವರು ಕೆಂಪು ಬಣ್ಣದ ಟೀ ಶರ್ಟ್ ಹಾಗೂ ಸನ್ ಗ್ಲಾಸ್ ಹಾಕಿಕೊಂಡು ಪಂದ್ಯ ವೀಕ್ಷಿಸಿದರು.
ಜಮ್ಮು ಕಾಶ್ಮೀರ ತಂಡ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನಿಂಗ್ಸ್ನಲ್ಲಿ 584 ರನ್ ಕಲೆ ಹಾಕಿತು. ಮೊದಲ ಇನಿಂಗ್ಸ್ನಲ್ಲಿ ಕರ್ನಾಟಕದ ಪರ ಮಯಾಂಕ್ ಅಗರ್ವಾಲ್ ಅವರನ್ನು ಹೊರತು ಪಡಿಸಿದರೆ, ಬೇರೆ ಯಾವ ಬ್ಯಾಟರ್ ನೆಲಕಚ್ಚಿನಿಂತು ಬ್ಯಾಟ್ ಮಾಡಲಿಲ್ಲ. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ 293 ರನ್ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್ನಲ್ಲಿ ಜಮ್ಮು 4 ವಿಕೆಟ್ಗೆ 342 ರನ್ ಸೇರಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಅಲ್ಲದೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.