
ಮುಂಬೈ, ಮಾರ್ಚ್ 21: ವಿಶ್ವದ ಜನರನ್ನು ಆತಂಕಕ್ಕೀಡು ಮಾಡಿರುವ ಕೊರೊನಾವೈರಸ್ (ಕೋವಿಡ್-19) ಸೋಂಕು ಒಬ್ಬರಿಂದ ಒಬ್ಬರಿಗೆ ಹಬ್ಬುವುದನ್ನು ತಡೆಗಟ್ಟಲು ಭಾರತದ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 'ಜನತಾ ಕರ್ಫ್ಯೂ' ಅನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಶ್ಲಾಘಿಸಿದ್ದಾರೆ. ಆದರೆ ಸೋಂಕು ತಡಗಟ್ಟಲು ಬರೀ ಜನತಾ ಕರ್ಫ್ಯೂ ಮತ್ರ ಸಾಲಲ್ಲ ಎಂದೂ ಚೋಪ್ರಾ ಹೇಳಿದ್ದಾರೆ.
ಸಂತೆ, ಬಝಾರು, ಪೇಟೆ ಸುತ್ತಾಟವೆಲ್ಲ ನಿಂತರೆ ಕೊರೊನಾ ಸೋಂಕು ಹಬ್ಬುವುದನ್ನು ಸ್ಪಲ್ಪ ಮಟ್ಟಿಗೆ ತಡೆಗಟ್ಟಬಹುದು. ಒಂದು ವಸ್ತುವಿನ ಮೇಲಿರುವ ವೈರಸ್ 8ರಿಂದ 12 ಗಂಟೆಗಳ ಕಾಲ ಜೀವಂತವಾಗಿದ್ದು ಆ ಬಳಿಕ ಸಾಯುತ್ತದೆ. ಹೀಗಾಗಿ ಜನ ಸಂಚಾರವಿಲ್ಲದೆ ಒಂದೇ ವಸ್ತುವಿನ ಮೇಲಿರುವ ವೈರಸ್ ಅಲ್ಲೇ ಸಾಯುವುದರಿಂದ ಮಾರ್ಚ್ 22ರ ಭಾನುವಾರ ಜನತಾ ಕರ್ಫ್ಯೂ ಜಾರಿಯಲ್ಲಿದೆ.
ಜನತಾ ಕರ್ಫ್ಯೂ ಜಾರಿಯಾಗಿರುವ ಬಗ್ಗೆ ಪ್ರಧಾನಿಯನ್ನು ಶ್ಲಾಘಿಸಿ ಮತ್ತು ಸಲಹೆಯನ್ನಿತ್ತು ಆಕಾಶ್ ಚೋಪ್ರಾ ಸರಣಿ ಟ್ವೀಟ್ಗಳನ್ನು ಮಾಡಿದ್ದಾರೆ. ಮೊದಲ ಟ್ವೀಟ್ನಲ್ಲಿ ಜನತಾ ಕರ್ಫ್ಯೂ ಬಗ್ಗೆ ಮೆಚ್ಚುಗೆ ಸೂಚಿಸಿರುವ ಚೋಪ್ರಾ, ಈ ಕ್ರಮದಿಂದ ಸಾಗರದಲ್ಲಿ ಹನಿಯಷ್ಟರ ಮಟ್ಟಿಗೂ ಪರಿಣಾಮಕಾರಿಯಾಗಿ ಸಾಲಲಾರದು. ಬದಲಿಗೆ ಜನರ ಪ್ರತೀ ಚಟುವಟಿಕೆಯನ್ನೂ ನಿಲ್ಲಿಸುವಂತಾಗಬೇಕು ಎಂದಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, 'ಜನರ ಪ್ರತೀ ಚಟುವಟಿಕೆಗಳೂ ಸ್ತಬ್ಧಗೊಂಡರೆ ಅದಕ್ಕೊಂದು ಮಾತ್ರಸೂಚಿಯನ್ನು ನಾವು ಮಾಡಬೇಕಾಗುತ್ತದೆ. ಅಂದರೆ ಲಕ್ಷಾಂತರ ಜನರು ದೈನಂದಿನ ವೇತನವನ್ನು ಅವಲಂಬಿಸಿರುವ ಈ ದೇಶದಲ್ಲಿ ಅದು ಸುಲಭವಲ್ಲ. ನಾವು ಅವರನ್ನು ಹೇಗೆ ನೋಡಿಕೊಳ್ಳಲಿದ್ದೇವೆ? ಅವರ ತಟ್ಟೆಯಲ್ಲಿ ಆಹಾರ ಹೇಗೆ ಬರಲಿದೆ? ನಮ್ಮ ಆರೋಗ್ಯ ಸೌಲಭ್ಯಗಳು ಹೇಗೆ ತಯಾರಾಗಿದೆ ಎಂಬಿತ್ಯಾದಿಗಳ ಬಗ್ಗೆ ನಾವು ಜನರ ಜೊತೆ ಸರಿಯಾಗಿ ಮತ್ತು ಸ್ಪಷ್ಟವಾಗಿ ಸಂವಹನ ನಡೆಸಬೇಕಾಗುತ್ತದೆ' ಎಂದು ಬರೆದುಕೊಂಡಿದ್ದಾರೆ.