ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬೆನ್ನಲ್ಲೇ ಭಾರತ ತಂಡ ಐರ್ಲೆಂಡ್ಗೆ ಪ್ರವಾಸ ಕೈಗೊಂಡು ಟಿ20 ಸರಣಿಯಲ್ಲಿ ಭಾಗುಯಾಗಲಿದೆ. ಏಷ್ಯಾಕಪ್ ಹಾಗೂ ವಿಶ್ವಕಪ್ ದೃಷ್ಟಿಯಿಂದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು ಮೂರು ಪಂದ್ಯಗಳ ಟಿ20 ಸರಣಿಗೆ ಯುವ ಆಟಗಾರರಿಗೆ ಒಂದು ಅದ್ಭುತ ಅವಕಾಶವಾಗಿದೆ. ಸುದೀರ್ಘ ಕಾಲದಿಂದ ಗಾಯದ ಕಾರಣಕ್ಕೆ ತಂಡದಿಂದ ದೂರವಾಗಿದ್ದ ಜಸ್ಸಪ್ರೀತ್ ಬೂಮ್ರಾ ಈ ಸರಣಿಯ ಮೂಲಕ ಕಮ್ಬ್ಯಾಕ್ ಮಾಡಲಿದ್ದು ತಂಡದ ನಾಯಕತ್ವದ ಜವಾಬ್ಧಾರಿಯನ್ನು ಕೂಡ ಬೂಮ್ರಾಗೆ ನೀಡಲಾಗಿದೆ.
ಈ ಸರಣಿಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಅವರ ಕೋಚಿಂಗ್ ಸಿಬ್ಬಂದಿಗಳಿಗೆ ವಿಶ್ರಾಂತಿ ನೀಡಿ ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಈ ಸರಣಿಗೆ ವಿವಿಎಸ್ ಲಕ್ಷ್ಮಣ್ ಕೂಡ ಹಿಂದೆಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ಆಗಸ್ಟ್ 18ರಿಂದ ಆರಂಬವಾಗಬೇಕಿರುವ ಸರಣಿಗೆ ಭಾರತ ಹೆಡ್ ಕೋಚ್ ಇಲ್ಲದೆಯೇ ಪ್ರಯಾಣಿಸಲಿದೆ ಎಂದು ವರದಿಯಾಗಿದೆ.

ಕಳೆದ ಕೆಲ ವರ್ಷಗಳಿಂದ ಮುಖ್ಯ ಕೋಚ್ ವಿರಾಮದಲ್ಲಿದ್ದರೆ ಎನ್ಸಿಎ ಮುಖ್ಯಸ್ಥರೇ ಮುಖ್ಯ ಕೋಚ್ ಆಗಿ ತಂಡದೊಂದಿಗೆ ತೆರಳುವುದು ಸಾಮಾನ್ಯವಾಗಿದೆ. ರವಿ ಶಾಸ್ತ್ರಿ ಕೋಚ್ ಆಗಿದ್ದಾಗ ಎನ್ಸಿಎ ಮುಖ್ಯಸ್ಥರಾಗಿದ್ದ ರಾಹುಲ್ ದ್ರಾವಿಡ್ ಹಲವು ಸಂದರ್ಭದಲ್ಲಿ ಈ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದರು. ನಂತರ ವಿವಿಎಸ್ ಲಕ್ಷ್ಮಣ್ ಕೂಡ ಅದನ್ನು ಮುಂದುವರಿಸಿದ್ದರು.
ಕ್ರಿಕ್ಬಜ್ ವರದಿಯ ಪ್ರಕಾರ ಐರ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಜಸ್ಪ್ರೀತ್ ಬೂಮ್ರಾ ತಂಡದ ಜೊತೆಗೆ ಎನ್ಸಿಎಯ ಸಹಾಯಕ ಕೋಚ್ಗಳಾದ ಸಿತಾನ್ಶು ಕೊಟಕ್ ಮತ್ತು ಸಾಯಿರಾಜ್ ಬಹುತುಳೆ ತೆರಳಲಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಕೂಡ ಈ ಹಿಂದೆ ನ್ಯೂಜಿಲೆಂಡ್ ಹಾಗೂ ಐರ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಸಹಾಯಕ ಕೋಚ್ಗಳಾಗಿ ಸಾಥ್ ನೀಡಿದ್ದರು.
ಇನ್ನು ವಿವಿಎಸ್ ಲಕ್ಷ್ಮಣ್ ಈ ಸರಣಿಯಲ್ಲಿ ಮುಖ್ಯ ಕೋಚ್ ಆಗಿ ಜವಾಬ್ಧಾರಿ ವಹಿಸಿಕೊಳ್ಳದಿರಲು ಜಕಾರಣವೇನುಂಬುದು ಇನ್ನು ಕೂಡ ಬಹಿರಂಗವಾಗಿಲ್ಲ. ಮತ್ತೊಂದೆಡೆ ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾದ ಮುಖ್ಯ ಬಳಗ ಉತ್ತಮ ವಿರಾಮದ ನಂತರ ಆಗಸ್ಟ್ 24ರಂದು ಬೆಂಗಳೂರಿನ ಎನ್ಸಿಎನಲ್ಲಿ ಒಟ್ಟಾಗಲಿದ್ದು ಏಷ್ಯಾಕಪ್ಗೆ ಕೊನೆಯ ಹಂತದ ಸಿದ್ಧತೆ ನಡೆಸಲಿದ್ದಾರೆ.
ಐರ್ಲೆಂಡ್ ಸರಣಿಗೆ ಭಾರತ ತಂಡ: ಜಸ್ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್ , ಪ್ರಸಿದ್ಧ್ ಕೃಷ್ಣ, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಅವೇಶ್ ಖಾನ್