
ಮುಂಬೈ, ಡಿಸೆಂಬರ್ 25: ಗುರುವಾರ (ಡಿಸೆಂಬರ್ 25) ಸೂರತ್ನ ಲಾಲ್ ಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ನಡೆಯಲಿರುವ ಕೇರಳ vs ಗುಜರಾತ್ ನಡುವಿನ ರಣಜಿ ಟ್ರೋಫಿ ಪಂದ್ಯ ಕಳೆಗಟ್ಟಲಿದೆ ಎನ್ನಲಾಗುತ್ತಿತ್ತು. ಯಾಕೆಂದರೆ ಈ ಪಂದ್ಯದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಮೈದಾನಕ್ಕಿಳಿಯುವುದರಲ್ಲಿದ್ದರು. ಆದರೆ ಈಗಿನ ಮಾಹಿತಿಯಂತೆ ಬೂಮ್ರಾಗೆ ಈ ಪಂದ್ಯದಲ್ಲಿ ಆಡಲಾಗುತ್ತಿಲ್ಲ.
ಬೆನ್ನು ನೋವಿಗೆ ತುತ್ತಾಗಿ ತಂಡದಿಂದ ಹೊರ ಬಿದ್ದಿದ್ದ ಬೂಮ್ರಾ ಈ ವರ್ಷ ಆಗಸ್ಟ್ನಲ್ಲಿ ವೆಸ್ಟ್ ಇಂಡೀಸ್ಗೆ ಭಾರತ ಪ್ರವಾಸ ಕೈಗೊಂಡಾಗಿನಿಂದ ಯಾವುದೇ ಪಂದ್ಯಗಳನ್ನಾಡಿಲ್ಲ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ. ಟೀಮ್ ಇಂಡಿಯಾಕ್ಕೆ ಮರಳುವ ಮೊದಲು ಬೂಮ್ರಾರನ್ನು ರಣಜಿಯಲ್ಲಿ ಆಡಿಸಲು ಯೋಚಿಸಲಾಗಿತ್ತು. ಆದರೆ ಆ ಯೋಚನೆಗೆ ಹಿನ್ನಡೆಯಾಗಿದೆ.
ರಣಜಿಯಲ್ಲಿ ಗುಜರಾತ್ ಪ್ರತಿನಿಧಿಸುವ ಜಸ್ಪ್ರೀತ್ ಅವರಲ್ಲಿ ಕೇರಳ ವಿರುದ್ಧದ ಪಂದ್ಯವಾಡುವಂತೆ ಕೇಳಲಾಗಿತ್ತು. ಅದಕ್ಕೆ ಬೂಮ್ರಾ ಒಪ್ಪಿದ್ದರು ಕೂಡ. ಆದರೆ ಬೂಮ್ರಾಗೆ ದಿನವೊಂದರಲ್ಲಿ 4-8 ಓವರ್ ಮಾತ್ರ ಎಸೆಯಲು ಬಿಸಿಸಿಐ ಅನುಮತಿ ನೀಡಿತ್ತು.
ಬೂಮ್ರಾ ಅವರನ್ನು ಆಡಿಸುವ ಬಗೆಯಲ್ಲಿ ಬಿಸಿಸಿಐ ವಿಧಿಸಿದ್ದ ನಿರ್ಭಂಧ ಗುಜರಾತ್ಗೆ ಒಪ್ಪಿಗೆಯಾಗಿಲ್ಲ. ಹೀಗಾಗಿ ಬೂಮ್ರಾ ಅವರನ್ನು ನೇರವಾಗಿ ಅಂತಾರಾಷ್ಟ್ರೀಯ ಪಂದ್ಯದಲ್ಲೇ ಮೈದಾನಕ್ಕಿಳಿಸಲು ಸೌರವ್ ಗಂಗೂಲಿ ಮುಂದಾಳತ್ವದ ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
2020ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಗಮನದಲ್ಲಿಟ್ಟುಕೊಂಡು ಗಾಯಗೊಂಡಿದ್ದ ಬೂಮ್ರಾ ಸಂಪೂರ್ಣ ಚೇತರಿಕೊಳ್ಳುವುವವರೆಗೂ ಬಿಸಿಸಿಐ ಕಾದಿತ್ತು. ಮುಂಬರಲಿರುವ ಶ್ರೀಲಂಕಾ ವಿರುದ್ಧದ ಟಿ20 ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಗೆ ಬೂಮ್ರಾ ಅವರನ್ನು ಹೆಸರಿಸಲಾಗಿದೆ. ಶ್ರೀಲಂಕಾ ಸರಣಿ ಜನವರಿ 5ರಿಂದ ಆರಂಭಗೊಳ್ಳಲಿದೆ.