ಟೀಮ್ ಇಂಡಿಯಾದ ಅಭಿಮಾನಿಗಳು ಬಹುದಿನಗಳ ಕಾಯುತ್ತಿದ್ದ ಸುದ್ದಿ ಅಂತು ಬಂದಿದೆ. ಜಸ್ಪ್ರಿತ್ ಬುಮ್ರಾ ಅವರು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಕುತೂಹಲ ಕಾರಿ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ, ಚಾಂಪಿಯನ್ಸ್ ಟ್ರೋಫಿ ತಂಡದಿಂದ ಹೊರ ನಡೆದಿದ್ದಾರೆ. ಈ ಬಗ್ಗೆ ಬಿಸಿಸಿಐ ಮಂಗಳವಾರ ರಾತ್ರಿ ಮಾಹಿತಿ ಬಹಿರಂಗ ಪಡಿಸಿದೆ. ಬಹುದಿನಗಳಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಬುಮ್ರಾ ಇನ್ನು ಚೇತರಿಕೆ ಆಗದಿರುವ ಸುದ್ದಿಯನ್ನು ಬಿಸಿಸಿಐ ತಿಳಿಸಿದೆ.
ಇನ್ನು ಯಾರ್ಕರ್ ಸ್ಪೇಷಲಿಸ್ಟ್ ಬದಲಿಗೆ ಟೀಮ್ ಇಂಡಿಯಾ ಹರ್ಷಿತ್ ರಾಣಾ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿದೆ. ಇದಲ್ಲದೆ ಇನ್ನೊಬ್ಬ ಸ್ಟಾರ್ ಪ್ಲೇಯರ್ರನ್ನು ಹೊರಗಿಟ್ಟುರವ ಬಿಸಿಸಿಐ ಆಯ್ಕೆ ಸಮಿತಿ, ಈ ಸ್ಥಾನದಲ್ಲಿ ಭರವಸೆಯ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ನೀಡಿದೆ. ಈ ಮೂಲಕ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಎರಡು ದೊಡ್ಡ ಬದಲಾವಣೆಗಳನ್ನು ಬಿಸಿಸಿಐ ಮಂಗಳವಾರ ರಾತ್ರಿ ಮಾಡಿದೆ.

ಈಗಾಗಲೇ ಭಾರತದ ಪರ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿ ಮಿಂಚು ಹರಿಸಿರುವ ದೆಹಲಿಯ ಹರ್ಷಿತ್ ರಾಣಾ, ದುಬೈ ಫ್ಲೈಟ್ ಹತ್ತಲಿದ್ದಾರೆ. ಇವರು ಜಸ್ಪ್ರಿತ್ ಬುಮ್ರಾ ಅವರ ಸ್ಥಾನವನ್ನು ತುಂಬಲಿದ್ದಾರೆ. ಮೊಹಮ್ಮದ್ ಶಮಿಯ ಜೊತೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೊಸ ಚೆಂಡನ್ನು ಹಂಚಿಕೊಳ್ಳಲಿದ್ದಾರೆ.
ಇನ್ನು ಬಿಸಿಸಿಐ ಮತ್ತೊಂದು ಮಹತ್ವದ ಬದಲಾವಣೆಯನ್ನು ಮಾಡಿದೆ. ಈಗಾಗಲೇ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್ ಆಟಗಾರ ಯಶಸ್ವಿ ಜೈಸ್ವಾಲ್ ಅವರಿಗೆ ತಂಡದಿಂದ ಕೈ ಬಿಟ್ಟಿದ್ದು ಇವರ ಸ್ಥಾನದಲ್ಲಿ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರಿಗೆ ಅವಕಾಶ ನೀಡಲಾಗಿದೆ. ವರುಣ್ ಚಕ್ರವತ್ತಿ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಅಲ್ಲದೆ ಆಡಿದ 5 ಪಂದ್ಯಗಳಲ್ಲಿ 14 ವಿಕೆಟ್ ಪಡೆದು ಅಬ್ಬರಿಸಿದ್ದರು. ಹೀಗಾಗಿ ಇವರಿಗೆ ಅವಕಾಶ ನೀಡಬೇಕು ಎಂಬ ಕೂಗು ಕೇಳಿ ಬಂದಿತ್ತು. ಅದರಂತೆ ಇವರಿಗೆ ಅವಕಾಶ ಕಲ್ಪಿಸಲಾಗಿದೆ.

ಈಗಾಗಲೇ ವರುಣ್ ಚಕ್ರವರ್ತಿ ಕಟಕ್ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತದ ಪರ ಏಕದಿನ ಕ್ರಿಕೆಟ್ಗೆ ಪದಾರ್ಪಣೆಯನ್ನು ಮಾಡಿದ್ದಾರೆ. ಅಲ್ಲದೆ ತಮ್ಮ ಬಿಗುವಿನ ದಾಳಿಯ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಾಡಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಟೀಮ್ ಇಂಡಿಯಾದ ಭರವಸೆಯ ಬೌಲರ್ ಜಸ್ಪ್ರಿತ್ ಬುಮ್ರಾ ಅಮೋಘ ಪ್ರದರ್ಶನ ನೀಡಿದ್ದರು. ಇವರು ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ 32 ವಿಕೆಟ್ ಕಬಳಿಸಿದ್ದರು. ಆದರೆ ಸಿಡ್ನಿ ಟೆಸ್ಟ್ ವೇಳೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಇವರು, ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಆಗಿನಿಂದ ಇವರು ಗಾಯದ ಸಮಸ್ಯೆಯಿಂದ ಎದುರಿಸುತ್ತಿದ್ದಾರೆ.