ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ರೋಚಕ ಘಟ್ಟದತ್ತ ಮುಖಮಾಡಿದೆ. ಲೀಗ್ ಹಂತದ ಪಂದ್ಯಗಳು ಮುಕ್ತಾಯದತ್ತ ಮುಖ ಮಾಡಿದ್ದು ಯುವ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ಆದರೆ ಭರವಸೆಯ ಬೌಲರ್ ಜಸ್ಪ್ರೀತ್ ಬುಮ್ರಾ ಮಾತ್ರ 19ನೇ ಆವೃತ್ತಿ ಐಪಿಎಲ್ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ತಮ್ಮ ಬಿಗುವಿನ ದಾಳಿ, ವೇರಿಯೇಷನ್ ಹಾಗೂ ಯಾರ್ಕರ್ಗಳಿಂದ ಸ್ಟಾರ್ ಬ್ಯಾಟರ್ಗಳಿಗೆ ಸಿಂಹ ಸ್ವಪ್ನರಾಗಿ ಕಾಡಿದ್ದ ಬುಮ್ರಾ, ಈ ಬಾರಿ ವಿಕೆಟ್ ಬೇಟೆ ನಡೆಸುವಲ್ಲಿ ಹಿಂದೆ ಬಿದ್ದಿದ್ದಾರೆ. ಜಸ್ಪ್ರೀತ್ ಬುಮ್ರಾ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗುತ್ತಿರುವುದು ಏಕೆ? ಎಂಬ ಬಗ್ಗೆ ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಬೆಳಕು ಚೆಲ್ಲಿದ್ದಾರೆ.
ಐದು ಬಾರಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಪರ ಆಡುವ ಜಸ್ಪ್ರೀತ್ ಬುಮ್ರಾ ಆಡಿದ 10 ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಮಾತ್ರ ಪಡೆದಿದ್ದಾರೆ. ಬುಮ್ರಾ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಇವರು ಬಿಗುವಿನ ದಾಳಿ ನಡೆಸುವಲ್ಲಿ ವಿಫಲರಾಗಿದ್ದು, ತಂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ.

ಜಸ್ಪ್ರೀತ್ ಬುಮ್ರಾ ಅವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿರುವ ಬಗ್ಗೆ ರವಿ ಶಾಸ್ತ್ರಿ ವಿವರಿಸಿದ್ದಾರೆ. ಬುಮ್ರಾ 12 ತಿಂಗಳಿಂದ ವರ್ಕ್ ಲೋಡ್ ಭಾರವನ್ನು ಎದುರಿಸುತ್ತಿದ್ದಾರೆ. ಜಿಯೋ ಹಾಟ್ಸ್ಟಾರ್ನ ಕಾಮೆಂಟರಿ ಶೋನಲ್ಲಿ ಮಾತನಾಡಿದ ರವಿ, ಬುಮ್ರಾ ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಬುಮ್ರಾ ವೇಗದ ಬೌಲಿಂಗ್ ಮುನ್ನಡೆಸಿದಾಗ ಭಾರತ ಏಷ್ಯಾ ಕಪ್, ಐಸಿಸಿ ಟಿ20 ವಿಶ್ವಕಪ್ ಗೆದ್ದಿದೆ. ಇಂತಹ ಪರಿಸ್ಥಿತಿಯಲ್ಲಿ ದೈಹಿಕ ಆಯಾಸ ಮಾತ್ರವಲ್ಲದೆ ಮಾನಸಿಕ ಒತ್ತಡವೂ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಭಾರತವು ಸಾಲು ಸಾಲು ಸವಾಲುಗಳನ್ನು ಎದುರಿಸಲಿದೆ. ಈ ದೃಷ್ಟಿಯಿಂದ ಬುಮ್ರಾ ಅವರ ಫಿಟ್ನೆಸ್ ಮತ್ತು ಕೆಲಸದ ಹೊರೆಯನ್ನು ಎಚ್ಚರಿಕೆಯಿಂದ ನಿರ್ವಹಿಸುವ ಅವಶ್ಯಕತೆ ಇದೆ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಪ್ಲೇಆಫ್ಗೆ ತಲುಪಬೇಕಾದರೆ, ಅವರು ತಮ್ಮ ಉಳಿದ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಮುಂಬೈ ಇಂಡಿಯನ್ಸ್ ಇತ್ತೀಚೆಗೆ ಲಕ್ನೋ ಸೂಪರ್ಜೈಂಟ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿತು. ಮುಂಬೈ 10 ಪಂದ್ಯಗಳಲ್ಲಿ ಕೇವಲ ಮೂರು ಗೆಲುವುಗಳೊಂದಿಗೆ, ತಂಡವು ಪಾಯಿಂಟ್ಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ. ಪ್ಲೇ ಆಫ್ ಪ್ರವೇಶಿಸಲು ಮುಂಬೈ ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.