ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಇವರು ಐಪಿಎಲ್ನ ಆರಂಭಿಕ ಪಂದ್ಯಗಳಿಗೆ ಗೈರಾಗಲಿದ್ದಾರೆ. ಸ್ಟಾರ್ ಯಾರ್ಕರ್ ಸ್ಪೇಷಲಿಸ್ಟ್ ಏಪ್ರಿಲ್ನಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಕೊನೆಯ ಪಂದ್ಯ ಸಿಡ್ನಿಯಲ್ಲಿ ನಡೆದಿತ್ತು. ಈ ಪಂದ್ಯದ ವೇಳೆ ಜಸ್ಪ್ರಿತ್ ಗಾಯಕ್ಕೆ ತುತ್ತಾಗಿದ್ದರು. ಇವರ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಆಡಿತು. ಸದ್ಯ ಬರುತ್ತಿರುವ ಮಾಹಿತಿಯ ಪ್ರಕಾರ ಇವರ ಚೇತರಿಕೆಗೆ ಇನ್ನು ಸಮಯ ಬೇಕಿದ್ದು, ಇವರು ಆರಂಭಿಕ ಪಂದ್ಯಗಳಿಂದ ದೂರ ಉಳಿದಿದ್ದಾರೆ.
ಮುಂಬೈ ತನ್ನ ಆರಂಭಿಕ ಪಂದ್ಯವನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮಾರ್ಚ್ 23 ರಂದು ಆಡಲಿದೆ. ಗುಜರಾತ್ ಟೈಟಾನ್ಸ್ ವಿರುದ್ಧ (ಮಾರ್ಚ್ 29) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ (ಮಾರ್ಚ್ 31) ಮೊದಲ ತವರು ಪಂದ್ಯವನ್ನು ಆಡಲಿದೆ. ಬುಮ್ರಾ ಅನುಪಸ್ಥಿತಿ ಪಂದ್ಯದ ಆರಂಭಿಕ ಪಂದ್ಯಗಳಲ್ಲಿ ಬಹುವಾಗಿ ಕಾಡಲಿದೆ. ಇವರ ಅನುಪಸ್ಥಿತಿಯಲ್ಲಿ ತಂಡ ಸೇರಿಕೊಳ್ಳಬಹುದಾದ 3 ಆಟಗಾರರ ಪಟ್ಟಿ ಇಲ್ಲಿದೆ.

ಜಸ್ಪ್ರಿತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಮುಂಬೈ ತಂಡದ ಬೌಲಿಂಗ್ ವಿಭಾಗವನ್ನು ಟ್ರೆಂಟ್ ಬೋಲ್ಟ್ ಹಾಗೂ ದೀಪಕ್ ಚಹಾರ್ ಮುನ್ನಡೆಸಲಿದ್ದಾರೆ. ಬುಮ್ರಾ ಸ್ಥಾನವನ್ನು ತುಂಬಲು ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾರ್ಬಿನ್ ಬಾಷ್ ತುದಿಗಾಲಿನಲ್ಲಿ ನಿಂತಿದ್ದಾರೆ. ಇವರು ಇನ್ನು ರಾಷ್ಟ್ರೀಯ ತಂಡದ ಪರ ಆಡಿಲ್ಲ. ಆದರೆ ಇವರ ಅಂಕಿ ಅಂಶಗಳು ಅಮೋಘವಾಗಿವೆ. ಅವರು 86 ಟಿ20 ಪಂದ್ಯಗಳಿಂದ 59 ವಿಕೆಟ್ಗಳನ್ನು ಪಡೆದಿದ್ದಾರೆ. ಕಾರ್ಬಿನ್ ಬಾಷ್ ಅವರನ್ನು ಆಡುವ ಹನ್ನೊಂದರಲ್ಲಿ ಸೇರಿಸಿಕೊಳ್ಳಬಹುದು.
ಇನ್ನು ಜಸ್ಪ್ರಿತ್ ಬುಮ್ರಾ ಸ್ಥಾನದ ಮೇಲೆ ಆಂಧ್ರ ಪ್ರದೇಶದ ಯುವ ವೇಗಿ ವೆಂಕಟ್ ಕಣ್ಣು ನೆಟ್ಟಿದ್ದಾರೆ. ಇವರು ಸ್ಥಳೀಯ ಟಿ20 ಲೀಗ್ನಲ್ಲಿ ಅಮೋಘ ಪ್ರದರ್ಶನ ನೀಡಿದ ಬಳಿಕ ಬೆಳಕಿಗೆ ಬಂದಿದ್ದರು. ಹಾರ್ದಿಕ್ ಮುಂದಾಳತ್ವದ ತಂಡ ವೆಂಕಟ್ ಅವರಿಗೆ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಕಣಕ್ಕೆ ಇಳಿಸುವ ಲೆಕ್ಕಾಚಾರವನ್ನು ಮಾಡಿದೆ. ಒಂದು ವೇಳೆ ಇವರು ಆಡುವ ಅವಕಾಶ ಪಡೆದರೆ, ಇವರು ಚೆನ್ನೈ ತಂಡಕ್ಕೆ ಅಪಾಯಕಾರಿ ಎಂದು ಪರಿಗಣಿಸಬಹುದು. ಏಕೆಂದರೆ, ಈ ತಂಡದ ಯಾವುದೇ ಬ್ಯಾಟರ್ ಇವರ ವಿರುದ್ಧ ಆಡಿದ ಅನುಭವ ಹೊಂದಿಲ್ಲ.

ಚೆನ್ನೈ ಪಿಚ್ ಯಾವಾಗಲೂ ಸ್ಪಿನ್ ಬೌಲರ್ಗಳಿಗೆ ಸಹಾಯ ಮಾಡುತ್ತಿದೆ. ಈ ಪಿಚ್ನಲ್ಲಿ ಸ್ಪಿನ್ ಬೌಲರ್ಗಳು ಪರಿಣಾಮಕಾರಿ ಇದನ್ನು ಗಮನಿಸಿ ಟೀಮ್ ಮ್ಯಾನೇಜ್ಮೆಂಟ್ ಹೆಚ್ಚುವರಿ ಸ್ಪಿನ್ ಬೌಲರ್ ಆಗಿ ಅಫ್ಘಾನಿಸ್ತಾನ ತಂಡದ ಮುಜಿಬ್ ಉರ್ ರೆಹಮಾನ್ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇವರು ಈಗಾಗಲೇ ಐಪಿಎಲ್ನಲ್ಲಿ ಆಡಿ ಸೈ ಎನಿಸಿಕೊಂಡಿದ್ದು, 19 ವಿಕೆಟ್ ಪಡೆದಿದ್ದಾರೆ. ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಇವರಿಗೆ ಅವಕಾಶ ಸಿಗುತ್ತದಾ ಕಾದು ನೋಡಬೇಕಿದೆ.