ಶನಿವಾರದಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಮೊದಲ ದಿನ ಮೂರು ಪಂದ್ಯಗಳು ನಡೆಯಲಿವೆ. ಭಾರತ ಮೊದಲ ದಿನವೇ ಅಖಾಡಕ್ಕೆ ಇಳಿಯಲಿದೆ. ಸೂರ್ಯಕುಮಾರ್ ಯಾದವ್ ಪಡೆ ಶನಿವಾರ ಯುಎಸ್ಎ ವಿರುದ್ಧ ಮೈದಾನ ಪ್ರವೇಶಿಸಲಿದೆ. ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಶುಭಾರಂಭ ಮಾಡುವ ಕನಸು ಭಾರತ ತಂಡದ್ದಾಗಿದೆ. ಈ ಪಂದ್ಯಕ್ಕಾಗಿ ಅಂತಿಮ ಹಂತದ ತಯಾರಿಗಳು ನಡೆದಿವೆ.
ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಭರವಸೆಯ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕಣಕ್ಕೆ ಇಳಿಯುವುದಿಲ್ಲ ಎಂದು ತಿಳಿದು ಬಂದಿದೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ್ದ ಸಂಜು ಸ್ಯಾಮ್ಸನ್ ಮೊದಲ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ಹೇಳಲಾಗುತ್ತಿದೆ. ಇವರ ಸ್ಥಾನದಲ್ಲಿ ಎಡಗೈ ಬ್ಯಾಟರ್ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿಯ ಅನುಸಾರ ಜಸ್ಪ್ರೀತ್ ಬುಮ್ರಾ ಅವರ ಆರೋಗ್ಯದಲ್ಲಿ ಏರುಪೇರು ಆಗಿದೆ. ಹೀಗಾಗಿ ಅವರು ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯುವುದು ಅನುಮಾನವಾಗಿದೆ. ಇನ್ನು ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಹರ್ಷಿತ್ ರಾಣಾ ಗಾಯದಿಂದ ಬಳಲುತ್ತಿದ್ದು ಇವರು ಟಿ20 ವಿಶ್ವಕಪ್ನಿಂದ ಹೊರ ನಡೆದಿದ್ದಾರೆ. ಹೀಗಾಗಿ ಇವರ ಬದಲಿಗೆ ಮೊಹಮ್ಮದ್ ಸಿರಾಜ್ ತಂಡ ಸೇರಿಕೊಂಡಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಹೀಗಾಗಿ ಸಿರಾಜ್ ಯುಎಸ್ಎ ವಿರುದ್ಧದ ಮೊದಲ ಪಂದ್ಯದಲ್ಲಿ ಅಂಗಳಕ್ಕೆ ಇಳಿಯುವ ಸಾಧ್ಯತೆ ಇದೆ.
ವರದಿಗಳ ಅನುಸಾರ ಜಸ್ಪ್ರೀತ್ ಬುಮ್ರಾ ಅವರಿಗೆ ಜ್ವರ ಕಂಡು ಬಂದಿದೆ. ಟೀಮ್ ಮ್ಯಾನೇಜ್ಮೆಂಟ್ ಸಹ ಈ ಪರಿಸ್ಥಿತಿಯಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಇವರು ಯುಎಸ್ಎ ವಿರುದ್ಧ ಕಣಕ್ಕೆ ಇಳಿಯುವುದು ಅನುಮಾನ. ಇವರು ಅಭ್ಯಾಸಕ್ಕೂ ಹಾಜರಾಗಿರಲಿಲ್ಲ. ಹೀಗಾಗಿ ಅವರ ಸ್ಥಾನವನ್ನು ಸಿರಾಜ್ ತುಂಬವ ಸಾಧ್ಯತೆ ಇದೆ.
ಯುಎಸ್ಎ ವಿರುದ್ಧದ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಇಶಾನ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ರಿಂಕು ಸಿಂಗ್, ಅಕ್ಷರ್ ಪಟೇಲ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್.