ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸಲು ಎಲ್ಲ ತಂಡಗಳು ಸಿದ್ಧತೆ ನಡೆಸಿವೆ. ಭಾಗವಹಿಸುತ್ತಿರುವ ಎಂಟು ತಂಡಗಳು ಈಗಾಗಲೇ ತಂಡವನ್ನು ಪ್ರಕಟಿಸಿವೆ. ಟೀಮ್ ಇಂಡಿಯಾ ಸಹ ಈ ಟೂರ್ನಿಗೆ ತಂಡವನ್ನು ಪ್ರಕಟಿಸಿದೆ. ಬಲಿಷ್ಠ ತಂಡವನ್ನು ಪ್ರಕಟಿಸಿರುವ ಭಾರತಕ್ಕೆ, ಈಗ ಆ ಒಂದು ಚಿಂತೆ ಬಹುವಾಗಿ ಕಾಡುತ್ತಿದೆ. ಈ ಪ್ಲೇಯರ್ ಮೈದಾನಕ್ಕೆ ಇಳಿಯುವುದು ಯಾವಾಗ ಎಂಬ ಪ್ರಶ್ನೆಗಳು ಎದ್ದಿವೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಡುವಾಗ ಜಸ್ಪ್ರಿತ್ ಬುಮ್ರಾ ಗಾಯಕ್ಕೆ ತುತ್ತಾಗಿದ್ದರು. ಇವರು ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಕಾರಣ ಎರಡನೇ ಇನಿಂಗ್ಸ್ನಲ್ಲಿ ಬೌಲಿಂಗ್ ಸಹ ಮಾಡಲಿಲ್ಲ. ಹೀಗಾಗಿ ಇವರು ಮೈದಾನಕ್ಕೆ ಇಳಿಯುವ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಇನ್ನು ಸಹ ಯಾವುದೇ ನಿಖರ ಮಾಹಿತಿ ಸಿಗುತ್ತಿಲ್ಲ. ಈಗ ಬರುತ್ತಿರುವ ಮಾಹಿತಿಯಂತೆ ಇವರು ಇಂಗ್ಲೆಂಡ್ ವಿರುದ್ಧ ಮೂರನೇ ಪಂದ್ಯದಿಂದಲೂ ಹೊರ ನಡೆದಿದ್ದಾರೆ. ಇದನ್ನು ಗಮನಿಸಿದರೆ ಇವರ ಗಾಯ ಗಂಭೀರ ರೀತಿಯಲ್ಲಿ ಆಗಿರಬಹುದು ಎಂಬ ಸಂದೇಹಗಳು ಮೂಡಿವೆ.

ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಇವರ ಹೆಸರನ್ನು ಸೇರಿಸಲಾಗಿತ್ತು. ಆದರೆ ಇತ್ತೀಚಿನ ಪ್ರಕಟಣೆಯ ಪ್ರಕಾರ ಇವರನ್ನು ಈ ಸರಣಿಯಿಂದ ಕೈ ಬಿಡಲಾಗಿದ್ದು, ಇವರ ಸ್ಥಾನದಲ್ಲಿ ವರುಣ್ ಚಕ್ರವರ್ತಿ ಸ್ಥಾನ ಪಡೆದಿದ್ದಾರೆ. ಇವರ ಫಿಟ್ನೆಸ್ ಬಗ್ಗೆ ಇನ್ನು ಯಾವುದೇ ಅಪ್ಡೇಟ್ಗಳು ಹೊರ ಬಂದಿಲ್ಲ. ಇನ್ನು ಬಿಸಿಸಿಐ ಸಹ ಗಾಯಾಳು ಆಟಗಾರನನ್ನು ಚಾಂಪಿಯನ್ಸ್ ಟ್ರೋಫಿ ಆಡಲು ಬಿಡುವುದಿಲ್ಲ.
ಇನ್ನು ಇದೇ ವಿಚಾರವಾಗಿ ರೋಹಿತ್ ಶರ್ಮಾ ಅವರಿಗೆ ಇತ್ತಿಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲೂ ಪ್ರಶ್ನೆಗಳನ್ನು ಕೇಳಲಾಯಿತು. ಜಸ್ಪ್ರಿತ್ ಬುಮ್ರಾ ಅವರ ಸ್ಕ್ಯಾನ್ ಹಾಗೂ ಉಳಿದ ತಪಾಸಣೆಗಳ ಬಗ್ಗೆ ನಾವು ಕಾಯ್ತಾ ಇದ್ದೇವೆ. ಇನ್ನೇನು ಕೆಲವೇ ದಿನಗಳಲ್ಲಿ ಅವರು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳ ಪಡಲಿದ್ದಾರೆ. ಅವರು ಸ್ಕ್ಯಾನ್ಗೆ ಒಳ ಪಟ್ಟ ಬಳಿಕವೇ ಬುಮ್ರಾ ಆಡುವ ಬಗ್ಗೆ ಸ್ಪಷ್ಟವಾಗಿ ನಿರ್ಧರಿಸಲಾಗುವುದು ಎಂದು ರೋಹಿತ್ ಶರ್ಮಾ ತಿಳಿಸಿದ್ದಾರೆ.

ಒಂದು ವೇಳೆ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳಿಗೂ ತಂಡದ ಭಾಗವಾಗುವಲ್ಲಿ ಜಸ್ಪ್ರಿತ್ ಬುಮ್ರಾ ವಿಫಲರಾದರೆ, ಇವರ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಇದಕ್ಕೆ ಮೇಲ್ನೋಟಕ್ಕಂತೂ ಎರಡು ಆಯ್ಕೆಗಳು ಲಭ್ಯ ಇವೆ. ಈಗಾಗಲೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿರುವ ಹರ್ಷಿತ್ ರಾಣಾ ಆ ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ದೇಶೀಯ ಟೂರ್ನಿಯಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ, ಆಯ್ಕೆದಾರರ ಗಮನ ಕದ್ದಿರುವ ಮೊಹಮ್ಮದ್ ಸಿರಾಜ್ ಸಹ ದುಬೈ ಫ್ಲೈಟ್ ಏರಲು ತಯಾರಾಗಿದ್ದಾರೆ. ಒಂದು ವೇಳೆ ಬುಮ್ರಾ ಚಾಂಪಿಯನ್ಸ್ ಟ್ರೋಫಿಯನ್ನು ಮಿಸ್ ಮಾಡಿಕೊಂಡರೆ ಇವರಿಬರಲ್ಲಿ ಒಬ್ಬರಿಗೆ ಸ್ಥಾನ ಖಚಿತ ಎಂದು ಹೇಳಲಾಗುತ್ತಿದೆ.