
ಬೆಂಗಳೂರು, ಜುಲೈ 23: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೆಲ ದಿನಗಳ ಹಿಂದಷ್ಟೇ ಟೀಮ್ ಇಂಡಿಯಾದ ಮುಖ್ಯ ಕೋಚ್ ಮತ್ತು ಸಹಾಯಕ ಸಿಬ್ಬಂದಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಹಾಲಿ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದ ವಿಶ್ವ ಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿದೆ. ಆದರೆ, ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸ್ತ್ರಿ ಮತ್ತು ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳಿಗೆ ವಿಸ್ತರಿಸಿತ್ತು. ಈ ಸರಣಿ ಬಳಿಕ ಟೀಮ್ ಇಂಡಿಯಾದ ನೂತನ ಕೋಚ್ ನೇಮಕದ ಕಾರ್ಯ ಚುರುಕಾಗಲಿದೆ.
ಈಗಾಗಲೇ ಹಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾಸ್ತ್ರಿ ಮತ್ತು ಬಳಗವೂ ಕೂಡ ಮರಳಿ ಕೋಚ್ ಹುದ್ದೆಗೆ ನೇರವಾಗಿ ಸ್ಪರ್ಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ 1983ರ ವಿಶ್ವಕಪ್ ವಿನ್ನರ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿಯು ನೂತನ ಕೋಚ್ ನೇಮಕ ಪ್ರಕ್ರಿಯೆ ನಡೆಸಿಕೊಡಲಿದೆ.
ಕೋಚ್ ಹುದ್ದಗೆ ಆಸಕ್ತಿ ಹೊಂದಿರುವವರಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಮಹೇಲಾ ಜಯವರ್ಧನೆ ಕೂಡಾ ಒಬ್ಬರು ಎಂದು ವರದಿಯಾಗಿದೆ. ಕೋಚಿಂಗ್ ವಿಚಾರದಲ್ಲಿ ಜಯವರ್ಧನೆಗೆ ಭಾರಿ ಬೇಡಿಕೆ ಇದ್ದು, ಈಗಾಗಲೇ ಅಲ್ಪಾವಧಿಗೆ ಇಂಗ್ಲೆಂಡ್ ತಂಡಕ್ಕೆ ತರಬೇತಿ ನೀಡಿದ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಸ್ಪರ್ಧಿಸುತ್ತಿರುವವರಲ್ಲಿ ಜಯವರ್ಧನೆ ಹೆಸರು ಮುಂಚೂಣಿಯಲ್ಲಿದೆ ಎಂದೇ ಹೇಳಲಾಗುತ್ತಿದೆ.
ಜಯವರ್ಧನೆ ಕೋಚಿಂಗ್ ಅನುಭವ
ಫೈನಾನ್ಷಿಯಲ್ ಎಕ್ಸ್ಪ್ರೆಸ್ನ ವರದಿ ಪ್ರಕಾರ ರವಿ ಶಾಸ್ತ್ರಿ ಅವರನ್ನು ಹಿಂದಿಕ್ಕಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಪಡೆಯಲು ಜಯವರ್ಧನೆ ಎದುರು ನೋಡುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿರುವ ತಂಡವಾದ ಮುಂಬೈ ಇಂಡಿಯನ್ಸ್ಗೆ ಮಾರ್ಗದರ್ಶನ ನೀಡಿದ ಅನುಭವ ಜಯವರ್ಧನೆ ಅವರಿಗಿದೆ. ಜಯವರ್ಧನೆ ಕೋಚ್ ಆಟದ ಬಳಿಕ ಮುಂಬೈ ತಂಡ ಮೂರು ವರ್ಷಗಳಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿದೆ ಎಂಬುದು ವಿಶೇಷ.
"ಗ್ಯಾರಿ ಕರ್ಸ್ಟನ್, ಮಹೇಲಾ ಜಯವರ್ಧನೆ ಹಾಗೂ ಟಾಮ್ ಮೂಡಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆ ಪಡೆಯುವ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ," ಎಂದು ಫೈನಾನ್ಷಿಲ್ ಎಕ್ಸ್ಪ್ರೆಸ್ ತನ್ನ ವರದಿಯಲ್ಲಿ ತಿಳಿಸಿದೆ.