ಇಂಗ್ಲೆಂಡ್ ತಂಡದ ವೇಗಿ ಜೋಫ್ರಾ ಆರ್ಚರ್ ಜೈವಿಕ ಸುರಕ್ಷತಾ ವಲಯವನ್ನು ಬೇಧಿಸಿದ ಕಾರಣದಿಂದಾಗಿ ವಿವಾದಕ್ಕೊಳಗಾಗಿದ್ದಾರೆ. ಕಟ್ಟುನಿಟ್ಟಿನ ಕ್ರಮದ ಹೊರತಾಗಿಯೂ ಜೋಫ್ರಾ ಆರ್ಚರ್ ನಡೆ ಸಾಕಷ್ಟು ಪ್ರಶ್ನೆಗೀಡು ಮಾಡಿದೆ. ಈ ಬಗ್ಗೆ ಆರ್ಚರ್ ಕ್ಷಮಾಪಣೆಯನ್ನೂ ಕೇಳಿದ್ದಾರೆ. ಆದರೆ ಇಂಗ್ಲೆಂಡ್ ವೇಗಿ ಕೃತ್ಯಕ್ಕೆ ಇಸಿಬಿ ನಿರ್ದೇಶಕ ಕೆಂಡಕಾರಿದ್ದಾರೆ.
ಆರ್ಚರ್ ಮಾಡಿದ ಎಡವಟ್ಟಿನಿಂದ ದೊಡ್ಡ ದುರಂತ ಸಂಭವಿಸುವುದಿತ್ತು. ಇದರಿಂದಾಗಿ ಇಡೀ ಕ್ರಿಕೆಟ್ ಋತುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿತ್ತು. ಹೀಗಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ಗೆ(ECB) ಹತ್ತು ಮಿಲಿಯನ್ ಪೌಂಡ್ಸ್ನಷ್ಟು ನಷ್ಟವಾಗುವ ಸಂಭವವಿತ್ತು ಎಂದು ECB ನಿರ್ದೇಶಕ ಆಶ್ಲೆ ಗಿಲ್ಸ್ ಹೇಳಿಕೆಯನ್ನು ನೀಡಿದ್ದಾರೆ.
ಇಂಗ್ಲೆಂಡ್ vs ವಿಂಡೀಸ್ ಟೆಸ್ಟ್: 2ನೇ ಪಂದ್ಯಕ್ಕೂ ಮೊದಲೇ ಇಂಗ್ಲೆಂಡ್ಗೆ ಆರ್ಚರ್ ಆಘಾತ
ಜೋಫ್ರಾ ಆರ್ಚರ್ ಯಾವ ರೀತಿಯಲ್ಲಿ ಜೈವಿಕ ಸುರಕ್ಷತಾ ವಲಯದ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕೃತವಾಗಿ ತಿಳಿಸಿಲ್ಲ. ಆದರೆ ಮಾಧ್ಯಮಗಳು ವರದಿ ಮಾಡಿದಂತೆ ಆರ್ಚರ್ ಮೊದಲ ಟೆಸ್ಟ್ ಪಂದ್ಯ ಮುಕ್ತಾಯದ ನಂತರ ತಮ್ಮ ಪ್ಲ್ಯಾಟ್ಗೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಿ ಬಂದಿದ್ದರು ಎನ್ನಲಾಗುತ್ತಿದೆ.
ಮೊದಲ ಪಂದ್ಯ ಸೌಥಾಂಪ್ಟನ್ನಲ್ಲಿ ನಡೆದಿತ್ತು. ಆ ಪಂದ್ಯ ಮುಕ್ತಾಯದ ಬಳಿಕ ನಿಯಮದ ಪ್ರಕಾರ ತಂಡದ ಸದಸ್ಯರು ಸುರಕ್ಷತಾ ದೃಷ್ಟಿಯಿಂದ ತಂಡವನ್ನು ಬಿಟ್ಟು ಎಲ್ಲೂ ಹೋಗುವಂತಿಲ್ಲ. ಆದರೆ ಸೌಥಾಂಪ್ಟನ್ನಿಂದ ಎರಡನೇ ಪಂದ್ಯ ನಡೆಯುವ ಮ್ಯಾಂಚೆಸ್ಟರ್ಗೆ ಪ್ರಾಯಾಣಿಸುವ ವೇಳೆ ತಮ್ಮ ಮನೆಗೆ ಭೇಟಿ ನೀಡಿದ್ದರು.
ಕೊರೊನಾ ವೈರಸ್ ಸಂಕಷ್ಟ: ಜೀವನೋಪಾಯಕ್ಕೆ ತರಕಾರಿ ಮಾರಲು ಆರಂಭಿಸಿದ ಫುಟ್ಬಾಲ್ ಕೋಚ್
ಜೋಫ್ರಾ ಆರ್ಚರ್ ಜೈವಿಕ ಸುರಕ್ಷತಾ ವಲ ಬೇಧಿಸಿದ ಕಾರಣದಿಂದಾಗಿ ನಿಯಮದಂತೆ ಅವರನ್ನು 5 ದಿನಗಳ ಕಾಲ ಪ್ರತ್ಯೇಕವಾಗಿರಿಸಲಾಗಿದೆ. ಮತ್ತೆ ತಂಡವನ್ನು ಸೇರ್ಪಡೆಗೊಳ್ಳಯವ ಮುನ್ನ ಆರ್ಚರ್ ಎರಡು ಕೋವಿಡ್-19 ಪರೀಕ್ಷೆಯನ್ನು ಎದುರಿಸಬೇಕಿದೆ. ಹೀಗಾಗಿ ಎರಡನೇ ಪಂದ್ಯದಿಂದ ಆರ್ಚರ್ ಹೊರಗುಳಿದಿದ್ದಾರೆ.