ಪಂಜಾಬ್ ಕಿಂಗ್ಸ್ ಹ್ಯಾಟ್ರಿಕ್ ಗೆಲುವಿನ ಆಸೆ ಕಮರಿದೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಅಬ್ಬರದ ಪ್ರದರ್ಶನ ನೀಡಿ ಫ್ಯಾನ್ಸ್ಗೆ ಖುಷಿ ನೀಡುವ ಶ್ರೇಯಸ್ ಅಯ್ಯರ್ ಅವರ ಯೋಜನೆ ಮಣ್ಣು ಪಾಲಾಗಿದೆ. ರಾಜಸ್ಥಾನ ರಾಯಲ್ಸ್ ಸ್ಥಿರ ಆಟದ ಪ್ರದರ್ಶನ ನೀಡಿ ಪ್ರಸಕ್ತ ಐಪಿಎಲ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ. ಈ ಗೆಲುವು ರಾಜಸ್ಥಾನ ರಾಯಲ್ಸ್ ಆಟಗಾರರ ಜೋಶ್ ಹೆಚ್ಚಿಸರಲಿದೆ. ಈ ಪಂದ್ಯದಲ್ಲಿ ಹಲವು ತಿರುವುಗಳು ಕಂಡು ಬಂದವು. ಆದರೆ ಪಂದ್ಯಕ್ಕೆ ನಿಜಕ್ಕೂ ತಿರುವು ನೀಡಿದ್ದು ಆ ಪ್ಲೇಯರ್.
ಟಾಸ್ ಸೋತರೂ ಧೃತಿ ಗೆಡದೆ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಸವಾಲಿನ ಮೊತ್ತ ಕಲೆ ಹಾಕಿತು. ಈ ಮೊತ್ತವನ್ನು ಸೇರಿಸಲು ಆರಂಭಿಕ ಯಶಶ್ವಿ ಜೈಸ್ವಾಲ್ ಹಾಗೂ ಸಂಜು ಸ್ಯಾಮ್ಸನ್ ಉತ್ತಮ ಬುನಾದಿ ಹಾಕಿಕೊಟ್ಟರು. ಜೈಸ್ವಾಲ್ 67 ಹಾಗೂ ರಿಯಾನ್ ಪರಾಗ್ ಅಜೇಯ 43 ರನ್ಗಳ ನೆರವಿನಿಂದ ರಾಜಸ್ಥಾನ 205 ರನ್ ಗಳನ್ನು 4 ವಿಕೆಟ್ ಕಳೆದುಕೊಂಡು ಕಲೆ ಹಾಕಿತು. ಬೃಹತ್ ಮೊತ್ತವನ್ನು ಹಿಂಬಾಲಿಸಿದ ಪಂಜಾಬ್ ತಂಡಕ್ಕೆ ಆರಂಭದಲ್ಲಿ ಶಾಕ್ ಕಾದಿತ್ತು.

ಪಂಜಾಬ್ ಇನಿಂಗ್ಸ್ನ ಆರಂಭೀಸುವ ಹೊಣೆಯನ್ನು ಹೊತ್ತುಕೊಂಡ ಪ್ರಿಯಾಂಶ್ ಆರ್ಯ ಜೋಫ್ರಾ ಆರ್ಚರ್ ತೋಡಿದ ಖೆಡ್ಡಾಗೆ ಬಲಿಯಾದರು. ಇವರ ವಿಕೆಟ್ ಬಳಿಕ ಮೈದಾನಕ್ಕೆ ಬಂದ ಲೀಗ್ನಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಅಯ್ಯರ್ 2 ಬೌಂಡರಿ ಬಾರಿಸಿ ಭರವಸೆಯನ್ನು ಮೂಡಿಸಿದ್ದರು. ಆದರೆ ಇವರು ಸಹ ವೇಗಿ ಎಸೆದ 148 ಕಿಲೋ ಮೀಟರ್ ವೇಗದ ಚೆಂಡನ್ನು ಎದುರಿಸುವಲ್ಲಿ ವಿಫಲರಾದರು. ಪರಿಣಾಮ ಒಂದೇ ಓವರ್ನಲ್ಲಿ ಎರಡು ವಿಕೆಟ್ಗಳು ಬಿದ್ದವು.
ಪಂಜಾಬ್ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಗ್ಲೇನ್ ಮ್ಯಾಕ್ಸ್ವೆಲ್ ಹಾಗೂ ನೆಹಾಲ್ ವಧೆರಾ ಆಧಾರವಾದರು. ಈ ಜೊಡಿ 52 ಎಸೆತಗಳಲ್ಲಿ 88 ರನ್ ಸೇರಿಸಿತು. ಆದರೆ ಈ ಜೋಡಿ ತಂಡವನ್ನು ಗೆಲುವಿನ ದಡಕ್ಕೆ ಸೇರಿಸುವಲ್ಲಿ ಎಡವಿತು. ಗ್ಲೇನ್ ಮ್ಯಾಕ್ಸ್ವೆಲ್ಗೆ ಮಹೇಶ್ ತೀಕ್ಷಣ ಪೆವಿಲಿಯನ್ ಹಾದಿ ತೋರಿಸಿದರು. ಇವರು ಔಟ್ ಆದ ಬಳಿಕದ ಎಸೆತದಲ್ಲಿ ನೆಹಲ್ ವಧೆರಾ ಔಟ್ ಆದರು. ಇವರು 62 ರನ್ ಬಾರಿಸಿ ಹಸರಂಗಾಗೆ ವಿಕೆಟ್ ಒಪ್ಪಿಸಿದರು. ಈ ಎಲ್ಲ ಅಂಶಗಳನ್ನು ನೋಡಿದಾಗ ಪಂಜಾಬ್ ಸೋಲಿಗೆ ಇದುವೇ ಮುಖ್ಯ ಕಾರಣ ಅನಿಸುತ್ತದೆ.
ಪಂಜಾಬ್ ಕಿಂಗ್ಸ್ ತಂಡದ ಭರವಸೆಯ ಆಟಗಾರರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಸಂದೀಪ್ ಶರ್ಮಾ, ಮಹೀಶ್ ತೀಕ್ಷಣ ಸಹ ಸಫಲರಾಗಿದ್ದಾರೆ. ಆದರೆ ಮೊದಲ ಓವರ್ನಲ್ಲೇ ಎರಡು ವಿಕೆಟ್ ಪಡೆದ ಜೋಫ್ರಾ ಆರ್ಚರ್ ಆರಂಭದಲ್ಲೇ ರಾಜಸ್ಥಾನ ಮೇಲುಗೈ ಸಾಧಿಸಲು ನೆರವು ಮಾಡಿದರು. ಇವರು ತಮ್ಮ ಡೆತ್ ಓವರ್ನಲ್ಲಿ ಅರ್ಷದೀಪ್ ಸಿಂಗ್ ಅವರ ವಿಕೆಟ್ ಸಹ ಪಡೆದರು. ಆದರೆ ಮೊದಲ ಓವರ್ನಲ್ಲಿ ಎರಡು ವಿಕೆಟ್ ಪಡೆದಿದ್ದು, ರಾಯಲ್ಸ್ ಗೆಲುವಿನ ಪ್ರಮುಖ ಕಾರಣ.