
ಫ್ಲೈಯಿಂಗ್ ಜಾಂಟಿ ಎಂದೇ ಫೇಮಸ್
90ರ ದಶಕದಲ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಜಾಂಡಿ ರೋಡ್ಸ್ ಕೂಡ ಒಬ್ಬರು. ಅದರಲ್ಲೂ 1992ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ಇಂಜಮಾಮ್ ಉಲ್ ಹಕ್ ಅವರನ್ನು ಜಾಂಟಿ ರೋಡ್ಸ್ ರನ್ ಔಟ್ ಮಾಡಿದ ರೀತಿ ಇಡೀ ಕ್ರಿಕೆಟ್ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಅಂದಿನಿಂದ "ಫ್ಲೈಯಿಂಗ್ ಜಾಂಟಿ" ಎಂದೇ ರೋಡ್ಸ್ ಖ್ಯಾತಿ ಪಡೆದಿದ್ದರು.

ಮುಂಬೈ ಇಂಡಿಯನ್ಸ್ಗೆ ಫೀಲ್ಡಿಂಗ್ ಕೋಚ್
ಜಾಂಟಿ ರೋಡ್ಸ್ ಭಾರತದಲ್ಲಿ ವಿವಿವಿಧ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂಗಳೂರಿನ ಪಣಂಬೂರು ಬೀಚ್ನಲ್ಲಿ ನಡೆಯುವ ಸೀ ಸರ್ಫಿಂಗ್ನಲ್ಲಿ ಪಾಲ್ಗೊಳ್ಳುವದೆಂದರೆ ರೋಡ್ಸ್ಗೆ ಅಚ್ಚು ಮೆಚ್ಚು. ಅಲ್ಲದೆ ತಮ್ಮ ಮಗಳಿಗೆ ಇಂಡಿಯಾ ಎಂದೇ ಹೆಸರಿಟ್ಟು ಭಾರತದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಲ್ಕು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ತರಬೇತಿ ನೀಡುವ ಅನುಭವ ರೋಡ್ಸ್ ಅವರಿಗೆ. ಇದರೊಂದಿಗೆ ಭಾರತ ತಂಡ ಕೆಲ ಆಟಗಾರರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ.

ಬೆಸ್ಟ್ ಫೀಲ್ಡರ್ಗಳ ಸಂಖ್ಯೆ ಕಡಿಮೆ
ಇತ್ತೀಚೆಗಷ್ಟೇ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಆಗಿ ಕಂಗೊಳಿಸಿದ್ದು ಆಲ್ರೌಂಡರ್ ರವೀಂದ್ರ ಜಡೇಜಾ. ಅದ್ಭುತ ಕ್ಯಾಚ್ಗಳು ಮತ್ತು ಚುರುಕಿನ ರನ್ಔಟ್ಗಳ ಮೂಲಕ ಜಡೇಜಾ ಮಿಂಚಿದ್ದರು. ಆದರೆ, ಜಡೇಜಾ ಅವರಷ್ಟೇ ಪ್ರಭಾವಯುತ ಫೀಲ್ಡರ್ಗಳು ತಂಡದಲ್ಲಿ ಇಲ್ಲ ಎಂಬುದು ವಿಪರ್ಯಾಸ. ನಾಯಕ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಹೊರತಾಗಿ ಚುರುಕಿನ ಕ್ಷೇತ್ರ ರಕ್ಷಕರು ಇಲ್ಲಾ ಎಂದೇ ಹೇಳಬಹುದು. ಕೊಹ್ಲಿ ಉತ್ತಮ ಫೀಲ್ಡರ್ ಆದರೆ ಇನಿಂಗ್ಸ್ ಅಂತ್ಯದಲ್ಲಿ ನಾಯಕತ್ವದ ಜೊತೆಗೆ ಬೌಂಡರಿ ಗೆರೆ ಬಳಿ ಅನಿವಾರ್ಯವಾಗಿ ಕ್ಷೇತ್ರ ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾರೆ. ಉತ್ತಮ ಫೀಲ್ಡರ್ಗಳಿದ್ದರೆ ಕೊಹ್ಲಿ ಮೇಲಿನ ಹೊರೆ ಕಡಿಮೆಯಾಗುವುದಂತೂ ಖಂಡಿತಾ. ಇದೀಗ ರೋಡ್ಸ್ಗೆ ಅವಕಾಶ ಸಿಕ್ಕಲ್ಲಿ ತಂಡದಲ್ಲಿ ಇಂತಹ ಫೀಲ್ಡರ್ಗಳ ಸಂಖ್ಯೆ ಹೆಚ್ಚಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಧಾನ ಕೋಚ್ ಹುದ್ದೆಗೆ ಜಯವರ್ಧನೆ ಅರ್ಜಿ
ಹಾಲಿ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದ ವಿಶ್ವ ಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿದೆ. ಆದರೆ, ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸ್ತ್ರಿ ಮತ್ತು ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳಿಗೆ ವಿಸ್ತರಿಸಿತ್ತು. ಈ ಸರಣಿ ಬಳಿಕ ಟೀಮ್ ಇಂಡಿಯಾದ ನೂತನ ಕೋಚ್ ನೇಮಕದ ಕಾರ್ಯ ಚುರುಕಾಗಲಿದೆ.
ಈಗಾಗಲೇ ಹಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾಸ್ತ್ರಿ ಮತ್ತು ಬಳಗವೂ ಕೂಡ ಮರಳಿ ಕೋಚ್ ಹುದ್ದೆಗೆ ನೇರವಾಗಿ ಸ್ಪರ್ಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ 1983ರ ವಿಶ್ವಕಪ್ ವಿನ್ನರ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿಯು ನೂತನ ಕೋಚ್ ನೇಮಕ ಪ್ರಕ್ರಿಯೆ ನಡೆಸಿಕೊಡಲಿದೆ. ಅಂದಹಾಗೆ ಈಗಾಲೇ ಮುಖ್ಯ ಕೋಚ್ ಹುದ್ದೆಗೆ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಕೂಡ ಅರ್ಜಿ ಹಾಕಿದ್ದಾರೆ.


Click it and Unblock the Notifications












