ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ದಿಗ್ಗಜ

ಬೆಂಗಳೂರು, ಜುಲೈ 24: ವಿಶ್ವ ಕಂಡ ಸಾರ್ವಕಾಲಿಕ ಶ್ರೇಷ್ಠ ಫೀಲ್ಡರ್ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್, ಭಾರತ ಕ್ರಿಕೆಟ್ ತಂಡದ ನೂತನ ಫೀಲ್ಡಿಂಗ್ ಕೋಚ್ ಆಗುವ ಮಹದಾಸೆಯಿಂದ ಅರ್ಜಿ ಸಲ್ಲಿಸಿರುವುದಾಗಿ ವರದಿಯಾಗಿದೆ.
ಕ್ಷೇತ್ರ ರಕ್ಷಣೆ ಮೂಲಕವೂ ಪಂದ್ಯ ಗೆಲ್ಲಬಹುದು ಎಂಬುದನ್ನು ಕ್ರಿಕೆಟ್ ಜಗತ್ತಿಗೆ ತೋರಿಸಿಕೊಟ್ಟ ಮೊತ್ತ ಮೊದಲ ಆಟಗಾರ ರೋಡ್ಸ್. ಒಂದು ಕಾಲದಲ್ಲಿ ಫೀಲ್ಡಿಂಗ್ ಮಾಡಿದರೆ ರೋಡ್ಸ್ ರೀತಿಯಲ್ಲಿ ಮಾಡಬೇಕು ಎಂದೇ ಹೇಳಲಾಗುತ್ತಿತ್ತು ಅಷ್ಟರ ಮಟ್ಟಿಗೆ ಕ್ಷೇತ್ರ ರಕ್ಷಣೆಯ ವಿಚಾರದಲ್ಲಿ ರೋಡ್ಸ್ ತಮ್ಮ ಛಾಪನ್ನು ಮೂಡಿಸಿದ್ದರು.
ಕಳೆದ ದಶಕದಿಂದ ಭಾರತ ತಂಡ ಕ್ಷೇತ್ರ ರಕ್ಷಣೆ ಕಡೆಗೆ ಇನ್ನಿಲ್ಲದ ಒತ್ತು ನೀಡಿದೆ. ಅಂತೆಯೇ ಇತ್ತೀಚೆಗೆ ಅಂತ್ಯಗೊಂಡ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲೂ ಭಾರತ ತಂಡ ತನ್ನ ಫೀಲ್ಡಿಂಗ್ ಮೂಲಕ ಮಿಂಚಿತ್ತು. ಇದೀಗ ಟೀಮ್ ಇಂಡಿಯಾದ ಕ್ಷೇತ್ರ ರಕ್ಷಣೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಉದ್ದೇಶದೊಂದಿಗೆ ರೋಡ್ಸ್ ಅರ್ಜಿ ಸಲಿದ್ದಿದ್ದಾರೆ.
"ಕಳೆದ ಮೂರು ವರ್ಷಗಳ ಅವಧಿಯಲ್ಲಿ ಟೀಮ್ ಇಂಡಿಯಾದ ಸಾಧನೆ ಬಗ್ಗೆ ಅಪಾರ ಗೌರವವಿದೆ. ಕೇವಲ ಕ್ಯಾಚ್ ಡ್ರಾಪ್ ಸರಾಸರಿ ಕಡಿಮೆ ಇರುವ ತಂಡಕ್ಕೆ ಮಾತ್ರವೇ ಟೀಮ್ ಇಂಡಿಯಾ ಸೀಮಿತವಾಗಬಾರದು. ಭಾರತ ತಂಡ ವಿಕೆಟ್ ಪಡೆಯುವ ಅಲ್ಪ ಅವಕಾಶಗಳನ್ನೂ ಪರಿವರ್ತಿಸುವಂತಹ ತಂಡವಾಗಬೇಕು, " ಎಂದು ಜಾಂಟಿ ರೋಡ್ಸ್ ಹೇಳಿದ್ದಾರೆ.
ಕಳೆದ ಐದು ವರ್ಷಗಳಿಂದ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿರುವ ಆರ್ ಶ್ರೀಧರ್ ಅವರ ಜೊತೆಗಿನ ಒಪ್ಪಂದ ಅಂತ್ಯಗೊಂಡಿದ್ದು, ಅವರು ಈ ಹುದ್ದೆಯಲ್ಲಿ ಮುಂದುವರಿಯುವುದು ಅನುಮಾನವಾಗಿದೆ.

ಫ್ಲೈಯಿಂಗ್ ಜಾಂಟಿ ಎಂದೇ ಫೇಮಸ್
90ರ ದಶಕದಲ್ಲಿ ಅತ್ಯಂತ ಜನಪ್ರಿಯ ಕ್ರಿಕೆಟಿಗರಲ್ಲಿ ಜಾಂಡಿ ರೋಡ್ಸ್ ಕೂಡ ಒಬ್ಬರು. ಅದರಲ್ಲೂ 1992ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಸ್ಟಾರ್ ಬ್ಯಾಟ್ಸ್ಮನ್ ಇಂಜಮಾಮ್ ಉಲ್ ಹಕ್ ಅವರನ್ನು ಜಾಂಟಿ ರೋಡ್ಸ್ ರನ್ ಔಟ್ ಮಾಡಿದ ರೀತಿ ಇಡೀ ಕ್ರಿಕೆಟ್ ಜಗತ್ತಿಗೇ ಅಚ್ಚರಿ ಮೂಡಿಸಿತ್ತು. ಅಂದಿನಿಂದ "ಫ್ಲೈಯಿಂಗ್ ಜಾಂಟಿ" ಎಂದೇ ರೋಡ್ಸ್ ಖ್ಯಾತಿ ಪಡೆದಿದ್ದರು.

ಮುಂಬೈ ಇಂಡಿಯನ್ಸ್ಗೆ ಫೀಲ್ಡಿಂಗ್ ಕೋಚ್
ಜಾಂಟಿ ರೋಡ್ಸ್ ಭಾರತದಲ್ಲಿ ವಿವಿವಿಧ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಮಂಗಳೂರಿನ ಪಣಂಬೂರು ಬೀಚ್ನಲ್ಲಿ ನಡೆಯುವ ಸೀ ಸರ್ಫಿಂಗ್ನಲ್ಲಿ ಪಾಲ್ಗೊಳ್ಳುವದೆಂದರೆ ರೋಡ್ಸ್ಗೆ ಅಚ್ಚು ಮೆಚ್ಚು. ಅಲ್ಲದೆ ತಮ್ಮ ಮಗಳಿಗೆ ಇಂಡಿಯಾ ಎಂದೇ ಹೆಸರಿಟ್ಟು ಭಾರತದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತ ಪಡಿಸಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ನಾಲ್ಕು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡಕ್ಕೆ ಫೀಲ್ಡಿಂಗ್ ತರಬೇತಿ ನೀಡುವ ಅನುಭವ ರೋಡ್ಸ್ ಅವರಿಗೆ. ಇದರೊಂದಿಗೆ ಭಾರತ ತಂಡ ಕೆಲ ಆಟಗಾರರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದಾರೆ.

ಬೆಸ್ಟ್ ಫೀಲ್ಡರ್ಗಳ ಸಂಖ್ಯೆ ಕಡಿಮೆ
ಇತ್ತೀಚೆಗಷ್ಟೇ ಅಂತ್ಯಗೊಂಡ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬೆಸ್ಟ್ ಫೀಲ್ಡರ್ ಆಗಿ ಕಂಗೊಳಿಸಿದ್ದು ಆಲ್ರೌಂಡರ್ ರವೀಂದ್ರ ಜಡೇಜಾ. ಅದ್ಭುತ ಕ್ಯಾಚ್ಗಳು ಮತ್ತು ಚುರುಕಿನ ರನ್ಔಟ್ಗಳ ಮೂಲಕ ಜಡೇಜಾ ಮಿಂಚಿದ್ದರು. ಆದರೆ, ಜಡೇಜಾ ಅವರಷ್ಟೇ ಪ್ರಭಾವಯುತ ಫೀಲ್ಡರ್ಗಳು ತಂಡದಲ್ಲಿ ಇಲ್ಲ ಎಂಬುದು ವಿಪರ್ಯಾಸ. ನಾಯಕ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಹೊರತಾಗಿ ಚುರುಕಿನ ಕ್ಷೇತ್ರ ರಕ್ಷಕರು ಇಲ್ಲಾ ಎಂದೇ ಹೇಳಬಹುದು. ಕೊಹ್ಲಿ ಉತ್ತಮ ಫೀಲ್ಡರ್ ಆದರೆ ಇನಿಂಗ್ಸ್ ಅಂತ್ಯದಲ್ಲಿ ನಾಯಕತ್ವದ ಜೊತೆಗೆ ಬೌಂಡರಿ ಗೆರೆ ಬಳಿ ಅನಿವಾರ್ಯವಾಗಿ ಕ್ಷೇತ್ರ ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾರೆ. ಉತ್ತಮ ಫೀಲ್ಡರ್ಗಳಿದ್ದರೆ ಕೊಹ್ಲಿ ಮೇಲಿನ ಹೊರೆ ಕಡಿಮೆಯಾಗುವುದಂತೂ ಖಂಡಿತಾ. ಇದೀಗ ರೋಡ್ಸ್ಗೆ ಅವಕಾಶ ಸಿಕ್ಕಲ್ಲಿ ತಂಡದಲ್ಲಿ ಇಂತಹ ಫೀಲ್ಡರ್ಗಳ ಸಂಖ್ಯೆ ಹೆಚ್ಚಿಸಬಲ್ಲರೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಧಾನ ಕೋಚ್ ಹುದ್ದೆಗೆ ಜಯವರ್ಧನೆ ಅರ್ಜಿ
ಹಾಲಿ ಕೋಚ್ ರವಿ ಶಾಸ್ತ್ರಿ ಮತ್ತು ತರಬೇತಿ ಬಳಗದ ಜೊತೆಗಿನ ಒಪ್ಪಂದ ವಿಶ್ವ ಕಪ್ ಟೂರ್ನಿಯೊಂದಿಗೆ ಅಂತ್ಯಗೊಂಡಿದೆ. ಆದರೆ, ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಸ್ತ್ರಿ ಮತ್ತು ಬಳಗದ ಜೊತೆಗಿನ ಒಪ್ಪಂದವನ್ನು ಬಿಸಿಸಿಐ 45 ದಿನಗಳಿಗೆ ವಿಸ್ತರಿಸಿತ್ತು. ಈ ಸರಣಿ ಬಳಿಕ ಟೀಮ್ ಇಂಡಿಯಾದ ನೂತನ ಕೋಚ್ ನೇಮಕದ ಕಾರ್ಯ ಚುರುಕಾಗಲಿದೆ.
ಈಗಾಗಲೇ ಹಲವು ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟಿಗರು ಭಾರತ ತಂಡದ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾಸ್ತ್ರಿ ಮತ್ತು ಬಳಗವೂ ಕೂಡ ಮರಳಿ ಕೋಚ್ ಹುದ್ದೆಗೆ ನೇರವಾಗಿ ಸ್ಪರ್ಧಿಸಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ 1983ರ ವಿಶ್ವಕಪ್ ವಿನ್ನರ್ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಮುಂದಾಳತ್ವದ ಕ್ರಿಕೆಟ್ ಸಲಹಾ ಸಮಿತಿಯು ನೂತನ ಕೋಚ್ ನೇಮಕ ಪ್ರಕ್ರಿಯೆ ನಡೆಸಿಕೊಡಲಿದೆ. ಅಂದಹಾಗೆ ಈಗಾಲೇ ಮುಖ್ಯ ಕೋಚ್ ಹುದ್ದೆಗೆ ಶ್ರೀಲಂಕಾದ ದಿಗ್ಗಜ ಮಹೇಲಾ ಜಯವರ್ಧನೆ ಕೂಡ ಅರ್ಜಿ ಹಾಕಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications