ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ರೋಚಕ ತಿರುವು ಪಡೆದುಕೊಂಡಿದೆ. ರಾಜ್ಕೋಟ್ನಲ್ಲಿ ನಡೆದ ಮೂರನೇ ಟಿ20 ಪಂದ್ಯದ ಫಲಿತಾಂಶ ನಿರೀಕ್ಷೆಗೆ ವಿರುದ್ಧವಾಗಿತ್ತು. ಇಂಗ್ಲೆಂಡ್ ವಿರುದ್ದ ಭಾರತ 26 ರನ್ಗಳ ಸೋಲನ್ನು ಎದುರಿಸಬೇಕಾಯಿತು. ಇಂಗ್ಲೆಂಡ್ ತಂಡದಿಂದ ಜೇಮಿ ಓವರ್ಟನ್ 3 ವಿಕೆಟ್ ಕಬಳಿಸಿದರಾದರೂ ನಾಯಕ ಜೋಸ್ ಬಟ್ಲರ್ ಗೆಲುವಿನ ಕ್ರೆಡಿಟ್ ಅನ್ನು ಬೇರೆಯವರಿಗೆ ನೀಡಿದ್ದಾರೆ. ಕೇವಲ ಒಂದು ವಿಕೆಟ್ ಪಡೆದ ಬೌಲರ್ಗೆ ಗೆಲುವಿನ ಶ್ರೇಯವನ್ನು ಬಟ್ಲರ್ ನೀಡಿದ್ದಾರೆ.
ರಾಜ್ಕೋಟ್ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗ ಕಳಪೆ ಪ್ರದರ್ಶನ ನೀಡಿತು. ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಭಾರತಕ್ಕೆ ಉತ್ತಮ ಆರಂಭ ನೀಡುವಲ್ಲಿ ವಿಫಲವಾದರು. ನಂತರ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಟೀಮ್ ಇಂಡಿಯಾ ಆರಂಭಿಕ ಬ್ಯಾಟರ್ಗಳು ಔಟಾದ ಬಳಿಕ ಎಲ್ಲರ ಕಣ್ಣುಗಳು ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೇಲೆ ಇತ್ತು. ಸೂರ್ಯಕುಮಾರ್ ಫ್ಲಾಪ್ ಶೋ ಮುಂದುವರೆ, ತಿಲಕ್ ವರ್ಮಾ ತಂಡಕ್ಕೆ ಗೆಲುವು ತಂದುಕೊಡುವುದರಲ್ಲಿ ಎಡುವಿದರು. ತಿಲಕ್ ವರ್ಮಾ ಅವರಿಗೆ ಇಂಗ್ಲೆಂಡ್ ಸ್ಪಿನ್ ಮಾಸ್ಟರ್ ಆದಿಲ್ ರಶೀದ್ ಪೆವಿಲಿಯನ್ ಹಾದಿ ತೋರಿಸಿದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಬ್ರೇಕ್ ಥ್ರೂ ನೀಡಿದ ಆದಿಲ್ ರಶೀದ್ ಭಾರತ ರನ್ಗಾಗಿ ಹಾತೊರೆಯುವಂತೆ ಮಾಡಿದರು. ಹೀಗಾಗಿ ಆದಿಲ್ ರಶೀದ್ ಅವರನ್ನು ಬಟ್ಲರ್ ಸಾಕಷ್ಟು ಹೊಗಳಿದ್ದಾರೆ.
ಆದಿಲ್ ರಶೀದ್ ನಮಗೆ ಅತ್ಯಂತ ಪ್ರಮುಖ ಆಟಗಾರ. ಅವರು ಯಾವಾಗಲೂ ಉತ್ತಮವಾಗುತ್ತಿದ್ದಾರೆ. ಅವರು ತಮ್ಮ ಬೌಲಿಂಗ್ನಲ್ಲಿ ವಿವಿಧ ಶೈಲಿಗಳನ್ನು ಹೊಂದಿದ್ದಾರೆ. ಅವರ ಒಂದು ದೊಡ್ಡ ಗುಣವೆಂದರೆ, ಮೊದಲು ಕೆಲವು ಎಸೆತಗಳನ್ನು ಬೌಲಿಂಗ್ ಮಾಡುತ್ತಾರೆ. ನಂತರ ಆ ಪಿಚ್ನಲ್ಲಿ ಹೇಗೆ ಬೌಲ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಹೌದು, ಅವರು ನಾಯಕನಾಗಿ ಅತ್ಯುತ್ತಮ ಆಟಗಾರ. ಅದಕ್ಕಾಗಿಯೇ ಕಳೆದ ಕೆಲವು ಪಂದ್ಯಗಳಲ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಆದಿಲ್ ರಶೀದ್ ಅವರನ್ನು ಜೋಸ್ ಬಟ್ಲರ್ ಗುಣಗಾನ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯ ಜನವರಿ 31 ರಂದು ಮುಂಬೈನಲ್ಲಿ ನಡೆಯಲಿದೆ. ಈ ಪಂದ್ಯ ಕೂಡ ಆಂಗ್ಲರ ಪಾಲಿಗೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಈ ಪಂದ್ಯದಲ್ಲೂ ಆಂಗ್ಲ ತಂಡ ಗೆದ್ದರೆ ಸರಣಿಯ ಕೊನೆಯ ಪಂದ್ಯ ನಿರ್ಣಾಯಕವಾಗಲಿದೆ. ಆದರೆ, ಸೂರ್ಯಕುಮಾರ್ ಯಾದವ್ ನಾಯಕತ್ವದ ತಂಡ ಸರಣಿ ಗೆಲ್ಲುವ ಹಂಬಲದಲ್ಲಿದೆ.