ಬಿಸಿಸಿಐ ಸಂವಿಧಾನ: ಸುಪ್ರೀಂಕೋರ್ಟ್ ನಿರ್ಧಾರಕ್ಕೆ ನ್ಯಾ. ಲೋಧಾ ಅತೃಪ್ತಿ
ನವದೆಹಲಿ, ಆಗಸ್ಟ್ 10: ಬಿಸಿಸಿಐನ ನೂತನ ಸಂವಿಧಾನದ ಕರಡು ಪ್ರತಿಯಲ್ಲಿ ಬದಲಾವಣೆಗಳನ್ನು ಸೂಚಿಸಿರುವ ಸುಪ್ರೀಂಕೋರ್ಟ್ ಕ್ರಮಕ್ಕೆ ನಿವೃತ್ತ ನ್ಯಾಯಮೂರ್ತಿ ಆರ್ ಎಂ ಲೋಧಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಸಿಸಿಐ ರಚನೆ, ಆಡಳಿತದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆ ತರುವ ಜತೆಗೆ ಅದನ್ನು ಹೆಚ್ಚು ಸ್ವತಂತ್ರವಾಗಿಸುವ ಮಹತ್ವ ಶಿಫಾರಸುಗಳನ್ನು ನೀಡಲಾಗಿತ್ತು. ಅಲ್ಲದೆ, ಸದಸ್ಯರ ನಡುವೆ ಅಧಿಕಾರ ಹಂಚಿಕೆಯ ಸಮತೋಲನ ಸಾಧಿಸುವ ಅಂಶವೂ ಇತ್ತು. ಆದರೆ, ಅದರ ಉದ್ದೇಶವನ್ನೇ ಕೆಡಿಸಲಾಗಿದೆ ಎಂದು ಲೋಧಾ ಹೇಳಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಆಡಳಿತದಲ್ಲಿ ಸುಧಾರಣೆಗಳನ್ನು ತರುವ ಹೊಸ ಸಂವಿಧಾನದ ಕರಡು ಪ್ರತಿಯನ್ನು ನ್ಯಾ. ಲೋಧಾ ಸಮಿತಿ ಸುಪ್ರೀಂಕೋರ್ಟ್ಗೆ ಸಲ್ಲಿಸಿತ್ತು. ಈ ಕರಡು ಪ್ರತಿಗೆ ಕೆಲವು ತಿದ್ದುಪಡಿಗಳನ್ನು ಸೂಚಿಸಿ ಸುಪ್ರೀಂಕೋರ್ಟ್ ಅನುಮೋದನೆ ನೀಡಿತ್ತು.
ಸುಪ್ರೀಂಕೋರ್ಟ್ ನೀಡಿರುವ ಬದಲಾವಣೆಯ ಶಿಫಾರಸುಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಲೋಧಾ ಅವರ ಕೆಲವು ಅಭಿಪ್ರಾಯಗಳು ಇಲ್ಲಿವೆ.

ಉದ್ದೇಶವೆಲ್ಲ ಹದಗೆಟ್ಟಿತು
ಈ ಸುಧಾರಣೆಗಳನ್ನು ಶಿಫಾರಸು ಮಾಡುವ ಮೂಲಕ ಅದರಲ್ಲಿನ ಲೋಪಗಳನ್ನು ನಿರ್ಮೂಲನೆ ಮಾಡಲು ನಾವು ಬಯಸಿದ್ದೆಲ್ಲವೂ ಹದೆಗೆಟ್ಟಿತು. ಇದು ಸುಧಾರಣೆಯ ಸಂಪೂರ್ಣ ಪ್ಯಾಕೇಜ್ ಆಗಿತ್ತು. ಬಿಸಿಸಿಐಗೆ ಬಲವಾದ ಆಡಳಿತಾತ್ಮಕ ಹಾಗೂ ಕಾರ್ಯನಿರ್ವಹಣಾ ರಚನೆಯನ್ನು ನೀಡುವ ಉದ್ದೇಶ ಹೊಂದಿತ್ತು. ಗಟ್ಟಿಯಾದ ಕಟ್ಟಡವೊಂದರಿಂದ ಕೆಲವು ಮುಖ್ಯವಾದ ಇಟ್ಟಿಗೆಗಳನ್ನು ತೆಗೆದುಹಾಕಿದರೆ ಅದರ ಶಕ್ತಿಗೆ ಹಾನಿಯುಂಟು ಮಾಡುತ್ತದೆ. ಈಗ ಅದೇ ಆಗಿರುವುದು ಎಂದು ಲೋಧಾ ಹೇಳಿದ್ದಾರೆ.
ತೀರ್ಪು ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ ಅನುರಾಗ್ ಠಾಕೂರ್

ಹಿಂಬಾಗಿಲ ಪ್ರವೇಶ
ಸರ್ಕಾರವು ಹಿಂಬಾಗಿಲಿನ ಮೂಲಕ ಬಿಸಿಸಿಐ ಒಳಗೆ ಪ್ರವೇಶಿಸುತ್ತಿರುವುದು ಬೇಸರದ ಸಂಗತಿ. ಬಿಸಿಸಿಐ ಸ್ವಾಯತ್ತವಾಗಿದ್ದು, ಈ ಸ್ವಾಯತ್ತ ಸಂಸ್ಥೆಗಳಲ್ಲಿ ಸರ್ಕಾರ ಯಾವುದೇ ಪಾತ್ರ ನಿಭಾಯಿಸಬಾರದು ಎಂಬುದನ್ನು ಖಾತರಿಪಡಿಸಿಕೊಳ್ಳಲು ನಾವು ಅಪೇಕ್ಷಿಸಿದ್ದೇವೆ ಎಂದು ಲೋಧಾ ತಿಳಿಸಿದ್ದಾರೆ.

ಚುನಾವಣೆ ವೇಳೆ ತಂತ್ರಗಳಿಗೆ ಅವಕಾಶ
ಈಗ ರೈಲ್ವೇಸ್, ಸರ್ವೀಸಸ್ ಮತ್ತು ವಿಶ್ವವಿದ್ಯಾಲಯ ತಂಡಗಳು ಮತ ಚಲಾಯಿಸುವ ಅವಕಾಶ ಪಡೆದುಕೊಂಡಿದ್ದು, ಬಿಸಿಸಿಐ ವ್ಯವಹಾರದಲ್ಲಿ ಭಾರಿ ಪರಿಣಾಮ ಉಂಟುಮಾಡಲಿದೆ. ಜಿದ್ದಾಜಿದ್ದಿನ ಪೈಪೋಟಿ ನಡೆದಾಗ ಈ ಮತಗಳು ಇಲ್ಲಿ ಪ್ರಮುಖವಾಗಲಿವೆ. ಇದು ತಂತ್ರ, ಕುತಂತ್ರಗಳಿಗೆ ಎಡೆಮಾಡಿಕೊಡಲಿದೆ.

ಉದ್ದೇಶವೇ ದುರ್ಬಲ
ಬಿಸಿಸಿಐನ ಏಕಸ್ವಾಮ್ಯವನ್ನು ಅಂತ್ಯಗೊಳಿಸಲು ತಾವು ಬಯಸಿದ್ದಾಗಿ ಹೇಳಿದ ಲೋಧಾ, ವಾಸ್ತವವಾಗಿ ಈ ಅಧಿಕಾರಿಗಳ ಏಕಸ್ವಾಮ್ಯವನ್ನು ನಿರ್ಮೂಲನೆ ಮಾಡುವ ಉಪಾಯವಿತ್ತು. ಆದರೆ, ಈಗ ಅಧಿಕಾರಿಗಳು ಎರಡು ಸತತ ಅವಧಿಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದರಿಂದ ಆ ಉದ್ದೇಶವೇ ದುರ್ಬಲವಾದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆರು ಸಂಸ್ಥೆಗಳದ್ದೇ ಮೇಲುಗೈ ಆಗಲಿದೆ
ಒಂದು ರಾಜ್ಯ ಒಂದು ಮತ ನೀತಿಯಡಿ ಎಲ್ಲ ಇತರೆ ಸಂಸ್ಥೆಗಳನ್ನೂ ಮತದಾನದಿಂದ ದೂರವಿಡಬೇಕಿತ್ತು. ಈಗ ಮಹಾರಾಷ್ಟ್ರ ಮತ್ತು ಗುಜರಾತ್ನ ಎಲ್ಲ ತಲಾ ಮೂರು ಸಂಸ್ಥೆಗಳು ಸೇರಿ ಒಟ್ಟು ಆರು ಮತಗಳು ಇಡೀ ಚುನಾವಣಾ ಪ್ರಕ್ರಿಯೆಗೇ ಬೇರೆ ಬಣ್ಣ ನೀಡಲಿವೆ. ಅವರು ಆರು ಮತಗಳ ಶಕ್ತಿಯಿರುವುದರಿಂದ ಚುನಾವಣೆಯಲ್ಲಿ ಅವರದೇ ಮೇಲುಗೈ ಉಂಟಾಗುವುದರ ಜತೆಗೆ ಚೌಕಾಸಿ ನಡೆಸುವ ಅಧಿಕಾರವನ್ನೂ ಪಡೆದುಕೊಳ್ಳುತ್ತಾರೆ ಎಂದಿದ್ದಾರೆ.

ಬಿಸಿಸಿಐಗೆ ಹೊಸ ಮುಖಗಳು
ಹೊಸ ಸಂವಿಧಾನದ ಕರಡು ಪ್ರತಿ ಪ್ರಕಾರ ಬಿಸಿಸಿಐನ ಹಾಲಿ ಅಧಿಕಾರಿಗಳಲ್ಲಿ ಕೆಲವರು ಮಾತ್ರ ಮತ್ತೆ ಸ್ಪರ್ಧಿಸಲು ಅವಕಾಶವಿದೆ. ಹೀಗಾಗಿ ಮಂಡಳಿಗೆ ಹೊಸ ಮುಖಗಳು ಬರಬೇಕಾಗಲಿದೆ. ಆದರೆ, ಅಧಿಕಾರಿಗಳ ಆಡಳಿತಾವಧಿ ವಿಚಾರವಾಗಿ ಕೋರ್ಟ್ ಮರುಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ರಾಜ್ಯ ಅಥವಾ ರಾಷ್ಟ್ರೀಯ ಮಂಡಳಿಯಲ್ಲಿ ಆರು ವರ್ಷಗಳವರೆಗೆ ಎರಡು ಅವಧಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿರ್ವಹಿಸಲು ಹೊಸ ಸಂವಿಧಾನ ಅವಕಾಶ ನೀಡಲಿದೆ.
ಹೊಸ ಸಂವಿಧಾನವು ನಾಲ್ಕು ವಾರಗಳಲ್ಲಿ ಅಳವಡಿಕೆಯಾಗಬೇಕಿದ್ದು, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ, ಹಂಗಾಮಿ ಕಾರ್ಯದರ್ಶಿ ಅಮಿತಾಭ್ ಚೌಧರಿ ಮತ್ತು ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಳ್ಳಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications