
ಈ ವರ್ಷಾಂತ್ಯದಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು ಇದಕ್ಕಾಗಿ ಎಲ್ಲಾ ತಂಡಗಳು ಕೂಡ ಈಗಾಗಲೇ ಸಿದ್ಧತೆಯನ್ನು ಆರಂಭಿಸಿದೆ. ಸುದೀರ್ಘ ಕಾಲದಿಂದ ಭಾರತ ಕೂಡ ಐಸಿಸಿ ಟೂರ್ನಿಯಲ್ಲಿ ಸತತವಾಗಿ ವೈಫಲ್ಯವನ್ನು ಅನುಭವಿಸಿಕೊಂಡು ಬರುತ್ತಿರುವ ಕಾರಣ ಭಾರತದ ಮೇಲೆ ಈ ಬಾರಿಯೂ ಸಾಕಷ್ಟು ಒತ್ತಡವಿದೆ. ಅಲ್ಲದೆ ತವರಿನಲ್ಲಿಯೇ ನಡೆಯುವ ಸರಣಿ ಎಂಬ ಕಾರಣಕ್ಕೆ ಅಭಿಮಾನಿಗಳ ನಿರೀಕ್ಷೆಯೂ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಕ್ರಿಷ್ಣಮಾಚಾರಿ ಶ್ರೀಕಾಂತ್ ಟೀಮ್ ಇಂಡಿಯಾ ಹಾಗೂ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ವಿರಾಟ್ ಕೊಹ್ಲಿ ಈ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ ಎಂದು ಶ್ರೀಕಾಂತ್ ಹೇಳಿಕೆ ನೀಡಿದ್ದಾರೆ. 2011ರ ವಿಶ್ವಕಪ್ನಲ್ಲಿ ಗೌತಮ್ ಗಂಭೀರ್ ಪ್ರದರ್ಶಿಸಿದ ಅಮೋಘ ಪ್ರದರ್ಶನದ ರೀತಿಯಲ್ಲಿಯೇ ಈ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ನೀಡಲಿದ್ದಾರೆ ಎಂದಿದ್ದಾರೆ ಶ್ರೀಕಾಂತ್.
2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆಲ್ಲಲು ಕಾರಣವಾದ ತಾರೆಯರ ಪೈಕಿ ಗೌತಮ್ ಗಂಭೀರ್ ಕೂಡ ಪ್ರಮುಖ ಸ್ಥಾನ ಪಡೆಯುತ್ತಾರೆ. ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಗಂಭೀರ್ ಅಮೀಘ 97 ರನ್ಗಳಿಸಿ ಮಹತ್ವದ ಕೊಡುಗೆ ನೀಡಿದ್ದರು. ಅದಾದ ಬಳಿಕ ಮತ್ತೆ ವಿಶ್ವಕಪ್ ಗೆಲ್ಲಲು ವಿಫಲವಾಗಿರುವ ಭಾರತ ತಂಡ 12 ವರ್ಷಗಳ ಬಳಿಕ ಮತ್ತೆ ವಿಶ್ವಕಪ್ ಗೆಲ್ಲಬೇಕಾದರೆ ಕೊಹ್ಲಿ ಪಾತ್ರ ಮಹತ್ವವಾಗಿರಲಿದೆ ಎಂದು ಬಿಂಬಿತವಾಗಿದೆ.
ಸ್ಪೋರ್ಟ್ಸ್ ಕೀಡಾಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಕ್ರಿಸ್ ಶ್ರೀಕಾಂತ್ ಮಾತನಾಡಿದ್ದು 2011ರಲ್ಲಿ ಗೌತಮ್ ಗಂಭೀರ್ ನೀಡಿದ ಪ್ರದರ್ಶನವನ್ನು ಪ್ರಶಂಸಿಸಿದ್ದಾರೆ. ಬಳಿಕ ಈ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅಂದು ಗಂಭೀರ್ ಮಾಡಿದ ಸಾಧನೆಯನ್ನು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.
"ಅಂದು ಗೌತಮ್ ಗಂಭೀರ್ ನಿರ್ವಹಿಸಿದ ಪಾತ್ರವನ್ನು ಈ ಬಾರಿ ವಿರಾಟ್ ಕೊಹ್ಲಿ ನಿರ್ವಹಿಸಲಿದ್ದಾರೆ. ಈ ಮೂಲಕ ಇಶಾನ್ ಕಿಶನ್ ಅವರಂತಾ ಆಟಗಾರರಿಗೆ ಅವರು ಬೆಂಬಲವಾಗಿ ನಿಲ್ಲಲಿದ್ದಾರೆ. ಇತ್ತೀಚೆಗೆ ಇಶಾನ್ ಕಿಶನ್ ದ್ವಿಶತಕ ಗಳಿಸಿದಾಗ ಕೊಹ್ಲಿ ಶತಕ ಸಿಡಿಸಿದಂತೆಯೇ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ" ಎಂದಿದ್ದಾರೆ ಕ್ರಿಸ್ ಶ್ರೀಕಾಂತ್.
"ಇದು ಆಟಗಾರರಿಗೆ ನೀವು ನೀಡುವ ಸ್ವಾತಂತ್ರ್ಯದ ಮೇಲೆ ನಿಂತಿರುತ್ತದೆ. ಅವರು ಬಯಸಿದಂತೆ ಆಡುವ ಅವಕಾಶ ನೀಡಬೇಕು. ಔಟಾದರೂ ಪರವಾಗಿಲ್ಲ ನಿಮ್ಮ ಆಟವನ್ನು ನೀಡಬೇಕು. ಅಂಥಾ ಮನಸ್ಥಿತಿಯೊಂದಿಗೆ ತಂಡ ಆಡಲು ಇಳಿಯಬೇಕಿದೆ" ಎಂದಿದ್ದಾರೆ ಭಾರತದ ಮಾಜಿ ಆಟಗಾರ ಹಾಗೂ ಮಾಜಿ ಆಯ್ಕೆಗಾರ ಕ್ರಿಸ್ ಶ್ರೀಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.