
ಕಳೆದ ಕೆಲ ವರ್ಷಗಳಿಂದ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿ ಮಂಕಾಗಿದ್ದ ಕರುಣ್ ನಾಯರ್ ಐಪಿಎಲ್ನಲ್ಲಿಯೂ ಅವಕಾಶ ಕಳೆದುಕೊಂಡಿದ್ದರು. ನಂತರ ಬದಲಿ ಆಟಗಾರನಾಗಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೇರ್ಪಡೆಯಾಗುವ ಮೂಲಕ ಮತ್ತೊಂದು ಅವಕಾಶ ಪಡೆದುಕೊಂಡಿದ್ದರು. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಮಹಾರಾಜ ಟ್ರೋಫಿಯಲ್ಲಿ ಈ ಬಾರಿ ಕರುಣ್ ನಾಯರ್ ಅತ್ಯಮೋಘ ಪ್ರದರ್ಶನ ನೀಡುವ ಮೂಲಕ ಮತ್ತೆ ತನ್ನ ಲಯಕ್ಕೆ ಮರಳಿರುವುದಾಗಿ ಘೋಷಿಸಿದ್ದರು. ಇದೀಗ ಕೌಂಟಿ ಚಾಂಪಿಯನ್ಶಿಪ್ನಲ್ಲಿಯೂ ಅದೇ ಫಾರ್ಮ್ಅನ್ನು ಕರುಣ್ ಮುಂದುವರಿಸಿದ್ದಾರೆ.
ಕರುಣ್ ನಾಯರ್ ಅವರ ಕ್ರಿಕೆಟ್ ಪ್ರಯಾಣ ಸಾಕಷ್ಟು ಏರಿಳಿತಗಳಿಂದ ಕೂಡಿದೆ. ದೇಶೀಯ ಕ್ರಿಕೆಟ್ನಲ್ಲಿ ನೀಡಿದ ಸ್ಥಿರ ಪ್ರದರ್ಶನದ ಕಾರಣದಿಂದಾಗಿ 2016ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾರತ ಏಕದಿನ ತಂಡಕ್ಕೆ ಮೊದಲ ಬಾರಿಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಟೆಸ್ಟ್ ಮಾದರಿಯಲ್ಲಿಯೂ ಅವಕಾಶ ಗಿಟ್ಟಿಸಿಕೊಂಡ ಕರುನ್ ನಾಯರ್ ಇಂಗ್ಲೆಂಡ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಜೇಯ 303 ರನ್ಗಳನ್ನು ಗಳಿಸಿ ಅಬ್ಬರಿಸಿದ್ದರು.
ಈ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟ್ನಲ್ಲಿ ತ್ರಿಶತಕ ಬಾರಿಸಿದ ಕೇವಲ ಎರಡನೇ ಆಟಗಾರ ಎಂಬ ಹೆಗ್ಗಳಿಕೆನ್ನು ತನ್ನದಾಗಿಸಿಕೊಂಡಿದ್ದಾರೆ. ಆದರೆ ನಂತರ ಸ್ಥಿರ ಪ್ರದರ್ಶನ ನೀಡಲು ವಿಫಲವಾದ ಅವರು ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಕಳೆದುಕೊಂಡರು. ನಂತರ ಮತ್ತೆ ಅದನ್ನು ಗಳಿಸಲು ಈ ಪ್ರತಿಭಾನ್ವಿತ ಆಟಗಾರನಿಗೆ ಸಾಧ್ಯವಾಗಲೇ ಇಲ್ಲ.
ಇಷ್ಟೆಲ್ಲಾ ಹಿನ್ನಡೆಗಳ ಹೊರತಾಗಿಯೂ ಕರುಣ್ ನಾಯರ್ ತನ್ನ ಕ್ರಿಕೆಟ್ ಕೌಶಲ್ಯ ಪ್ರದರ್ಶಿಸುವುದನ್ನು ಮುಂದುವರಿಸಿದ್ದಾರೆ. ಸರ್ರೆ ವಿರುದ್ಧದ ಪಂದ್ಯದಲ್ಲಿ ನಾರ್ಥಾಂಪ್ಟನ್ಶೈರ್ ಪರವಾಗಿ ಕರುಣ್ ಚೊಚ್ಚಲ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ 144 ರನ್ಗಳಿಸಿರುವ ಕರುಣ್ ಬ್ಯಾಟಿಂಗ್ ಮುಂದುವರಿಸಿದ್ದು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.