ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಕರ್ನಾಟಕದ ಕೆಎಲ್ ರಾಹುಲ್ ಇತ್ತೀಚಿಗೆ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಆದರೆ ಕಳೆದ ಕೆಲವು ತಿಂಗಳ ಹಿಂದೆ ರಾಹುಲ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುತ್ತಾರಾ ಎಂಬ ಪ್ರಶ್ನೆಗಳು ಎದ್ದಿದ್ದವು. ರಾಹುಲ್ ತಮ್ಮ ಮೇಲೆ ಎದ್ದಿದ್ದ ಟೀಕೆಗೆ ಸರಿಯಾಗಿ ಉತ್ತರ ನೀಡಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಬಳಿಕ ರಾಹುಲ್ ನೀಡುತ್ತಿರುವ ಪ್ರದರ್ಶನ ಬೇರೆ ಆಟಗಾರರಿಗೆ ಮಾದರಿ.
ಇಂಗ್ಲೆಂಡ್ ವಿರುದ್ಧ ಹೈದರಾಬಾದ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಕೆಎಲ್ ರಾಹುಲ್ 86 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅಲ್ಲದೆ 14 ರನ್ ಗಳಿಂದ ಶತಕ ವಂಚಿತರಾದರು. ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೂ ರಾಹುಲ್ ಬ್ಯಾಟ್ ಅಬ್ಬರಿಸಿತ್ತು. ಆದರೆ ಕೆಲ ಸಮಯದ ಹಿಂದೆಯಷ್ಟೇ ಗಾಯಕ್ಕೆ ತುತ್ತಾಗಿದ್ದ ಕೆಎಲ್ ರಾಹುಲ್ ಬಗ್ಗೆ, ಇವರ ಕೆರಿಯರ್ ಮುಗಿದಿದೆ ಎಂಬ ಮಾತುಗಳು ಕೇಳಿ ಬಂದಿದ್ದವು.

ಐಪಿಎಲ್ 2023 ರ ಸಮಯದಲ್ಲಿ ಕೆಎಲ್ ಗಾಯಗೊಂಡರು. ಮೇ 1, 2023ರಂದು ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ರಾಹುಲ್ ಗಾಯಕ್ಕೆ ತುತ್ತಾಗಿದ್ದರು. ನಂತರ ಅವರು ಐಪಿಎಲ್ ಸೇರಿದಂತೆ ಕ್ರಿಕೆಟ್ನಿಂದ ದೂರ ಉಳಿದಿದ್ದರು. ಗಾಯಗೊಳ್ಳುವ ಮೊದಲು ರಾಹುಲ್ ಫಾರ್ಮ್ ಇಲ್ಲದೆ ಬಳಲುತ್ತಿದ್ದರು. ಆದರೆ, ನಂತರ ಅವರ ವೃತ್ತಿಜೀವನದ ಅಂತ್ಯ ಮತ್ತು ಭಾರತ ತಂಡದಿಂದ ಅವರನ್ನು ಕೈಬಿಡಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು.
ಮೇ ತಿಂಗಳಲ್ಲಿ ಗಾಯಗೊಂಡಿದ್ದ ರಾಹುಲ್, ಸೆಪ್ಟೆಂಬರ್ನಲ್ಲಿ ಏಷ್ಯಾ ಕಪ್ 2023 ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರಳಿದರು ಮತ್ತು ಅಲ್ಲಿಂದ ಅವರು ತಮ್ಮ ಅದ್ಭುತ ಪ್ರದರ್ಶನದಿಂದ ಎಲ್ಲರನ್ನೂ ಸುಮ್ಮನಾಗಿಸಿದರು. ಏಷ್ಯಾ ಕಪ್ ನಂತರ ರಾಹುಲ್ 2.0 ವರ್ಷನ್ ಅನಾವರಣವಾಗಿದೆ. ಮೊದಲನೆಯದಾಗಿ, ಪಾಕಿಸ್ತಾನ ವಿರುದ್ಧ ಆಡಿದ ರಿಟರ್ನ್ ಪಂದ್ಯದಲ್ಲಿಯೇ ಶತಕ ಬಾರಿಸಿದ್ದರು. ಇದಾದ ನಂತರವೂ ಅವರ ಬ್ಯಾಟ್ ನಿಲ್ಲಲಿಲ್ಲ.
2023ರ ಏಷ್ಯಾಕಪ್ನಿಂದ ರಾಹುಲ್ 24 ಪಂದ್ಯಗಳನ್ನು ಆಡಿದ್ದಾರೆ, 22 ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ, ಅವರು 64.56 ಸರಾಸರಿ ಮತ್ತು 83.71 ಸ್ಟ್ರೈಕ್ ರೇಟ್ನಲ್ಲಿ 1033 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು 3 ಶತಕಗಳು ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಕೆ.ಎಲ್ ರಾಹುಲ್ ಗಾಯದಿಂದ ಚೇತರಿಸಿಕೊಂಡ ಬಳಿಕ ಭರ್ಜರಿ ಫಾರ್ಮ್ಗೆ ಮರಳಿದ್ದಾರೆ. ಇದರಂತೆ ಟೀಮ್ ಇಂಡಿಯಾದ ಇನ್ನೊಬ್ಬ ಬ್ಯಾಟರ್ ಸಹ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಮೇಲೆ ವಿಕೆಟ್ ಪಡೆಯುವ ದಾಹವನ್ನು ಹೆಚ್ಚಿಸಿಕೊಂಡಿದ್ದಾರೆ. ಗಾಯಕ್ಕೆ ತುತ್ತಾಗಿ ತಂಡದಿಂದ ಹಲವು ತಿಂಗಳು ಕಾಲ ದೂರವಿದ್ದ ಸ್ಟಾರ್ ಸ್ಪಿನ್ ಬೌಲರ್ ಕುಲ್ದೀಪ್ ಯಾದವ್ ಸಹ ಕಮ್ಬ್ಯಾಕ್ ಭರ್ಜರಿಯಾಗಿ ಮಾಡಿದ್ದಾರೆ. ಚೇತರಿಕೆ ಸಮಯದಲ್ಲಿ ತಾವು ಈ ಹಿಂದೆ ಮಾಡಿದ್ದ ತಪ್ಪನ್ನು ಮನಗೊಂಡಿದ್ದ ಕುಲ್ದೀಪ್ ಆ ತಪ್ಪುಗಳ ಮೇಲೆ ಕೆಲಸ ಮಾಡಿದರು. ಅಲ್ಲದೆ ಮೈದಾನಕ್ಕೆ ಒಮ್ಮೆ ಎಂಟ್ರಿ ನೀಡಲು ಚಡಪಡಿಸುತ್ತಿದ್ದರು. ಮೈದಾನಕ್ಕೆ ಎಂಟ್ರಿ ನೀಡುತ್ತಿದ್ದಂತೆ ವಿಕೆಟ್ ಬೇಟೆ ಆರಂಭವಾಯಿತು. ಹಂತ ಹಂತವಾಗಿ ತಂಡದಲ್ಲಿ ಸ್ಥಾನವನ್ನು ಭದ್ರ ಪಡಿಸಿಕೊಂಡ ಕುಲ್ದೀಪ್ ವೈಟ್ ಬೌಲ್ ಕ್ರಿಕೆಟ್ನಲ್ಲಿ ತಂಡದ ಪ್ರಮುಖ ಬೌಲರ್ ಅದರು. ಅಲ್ಲದೆ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು.