ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಐಪಿಎಲ್ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕರ್ನಾಟಕದ ಸ್ಟಾರ್ ಆಟಗಾರ ವಿಜಯ್ ಕುಮಾರ್ ವೈಶಾಖ್ ಅವರಿಗೆ ಅವಕಾಶ ನೀಡಲಾಗಿದೆ.
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿರುವ ವಿಜಯ್ ಕುಮಾರ್ ವೈಶಾಖ್ ಇದೇ ಮೊದಲ ಬಾರಿಗೆ ಬ್ಲ್ಯೂ ಜೆರ್ಸಿ ತೊಡಲು ಸಿದ್ಧರಾಗಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ವಿಜಯ್ ಕುಮಾರ್ ಹಂತ ಹಂತವಾಗಿ ಎಲ್ಲ ವಯೋಮಿತಿಯ ಕ್ರಿಕೆಟ್ನಲ್ಲಿ ಮಿಂಚಿದ್ದರು. ಈಗ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶವನ್ನು ಪಡೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಸಿಕ್ಕಾಗ ತಮ್ಮಲ್ಲಿರುವ ಕ್ಷಮತೆಗೆ ತಕ್ಕ ಆಟವನ್ನು ಆಡಿದರು. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲಿ ಬಿಗುವಿನ ದಾಳಿ ನಡೆಸುವ ವಿಜಯ್ ಕುಮಾರ್ ವೈಶಾಖ್ ಅಬ್ಬರಿಸಿದ್ದರು. ಅಲ್ಲದೆ ಯಾವುದೇ ಸನ್ನಿವೇಶದಲ್ಲಾದರೂ ಬೌಲ್ ನೀಡಿದರೆ ಎದುರಾಳಿಯನ್ನು ಕಾಡ ಬಲ್ಲ ಕ್ಷಮತೆಯನ್ನು ಸಾಬೀತು ಮಾಡಿದ್ದರು. ಇದರ ಫಲವಾಗಿಯೇ ಇವರಿಗೆ ಈಗ ಭಾರತ ತಂಡದಲ್ಲಿ ಸ್ಥಾನ ನೀಡಲಾಗಿದೆ. ಬಾಂಗ್ಲಾದೇಶದ ವಿರುದ್ಧ ಪದಾರ್ಪಣೆ ಮಾಡಿದ್ದ ಮಯಾಂಕ್ ಯಾದವ್ ಅವರು ಗಾಯಕ್ಕೆ ತುತ್ತಾಗಿದ್ದು, ವಿಜಯ್ ಕುಮಾರ್ಗೆ ಅವಕಾಶ ಸಿಕ್ಕಿದೆ.
2021ರಲ್ಲಿ ವಿಜಯ್ ಕುಮಾರ್ ವೈಶಾಖ್ ಅವರು ರಣಜಿ ಟೂರ್ನಿಯಲ್ಲಿ ಆಡುವ ಅವಕಾಶವನ್ನು ಪಡೆದಿದ್ದರು. ಈ ವೇಳೆ ಆಡಿದ ಎರಡು ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. 2022ರಲ್ಲಿ ವಿಜಯ್ಕುಮಾರ್ ವೈಶಖಾ ರಣಜಿ ಟೂರ್ನಿಯಲ್ಲಿ ಆಡಿದ 8 ಪಂದ್ಯಗಳಲ್ಲಿ 31 ವಿಕೆಟ್ ಕಬಳಿಸಿದ್ದಾರೆ. 2023ರ ರಣಜಿಯಲ್ಲಿ ವಿಜಯ್ ಕುಮಾರ್ ಅಮೋಘ ಪ್ರದರ್ಶನ ನೀಡಿದ್ದರು. ಇವರು 8 ಪಂದ್ಯಗಳ 16 ಇನಿಂಗ್ಸ್ಗಳಲ್ಲಿ 39 ವಿಕೆಟ್ ಪಡೆದಿದ್ದರು.

ವಿಜಯ್ ಕುಮಾರ್ ವೈಶಾಕ್ 2021ರಲ್ಲಿ ಮೊದಲ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದರು. ಇವರು 6 ಪಂದ್ಯಗಳಲ್ಲಿ 7 ವಿಕೆಟ್ ಪಡೆದು ಅಬ್ಬರಿಸಿದ್ದರು. ಇಲ್ಲಿಂದ ಸಿಕ್ಕ ಅವಕಾಶವನ್ನು ಬಳಸಿಕೊಂಡು ವಿಜಯ್ ಕುಮಾರ್ ಭರವಸೆ ಮೂಡಿಸಿದ್ದರು. ದೇಶೀಯ ಟೂರ್ನಿಯಲ್ಲಿ ಇವರು ನೀಡಿರುವ ಸ್ಥಿರ ಪ್ರದರ್ಶನದ ಫಲವಾಗಿ ಇವರಿಗೆ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಅವಕಾಶ ಪಡೆದರು.
2023ರಲ್ಲಿ ನಡೆದ ಐಪಿಎಲ್ನಲ್ಲಿ ರಜತ್ ಪಟಿದಾರ್ ಅವರ ಬದಲಿಗೆ ಆಡುವ ಅವಕಾಶವನ್ನು ವಿಜಯ್ ಕುಮಾರ್ ಪಡೆದರು. ಇವರು ಐಪಿಎಲ್ನಲ್ಲಿ ಏಪ್ರಿಲ್ 15 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪದಾರ್ಪಣೆ ಮಾಡಿದರು. ಇವರು ಆರ್ಸಿಬಿ ಪರ 11 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿ, ಟೀಮ್ ಇಂಡಿಯಾದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.