ಎಂಎಸ್ ಧೋನಿ ಐಪಿಎಲ್ನಿಂದ ನಿವೃತ್ತಿ ಪಡೆಯುವ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ 2020ರಲ್ಲಿ ನಿವೃತ್ತಿ ಘೋಷಿಸಿದ್ದರೂ ಐಪಿಎಲ್ನಲ್ಲಿ ಮಾಹಿ ಸಕ್ರಿಯವಾಗಿದ್ದಾರೆ. ಈ ಬಾರಿಯ ಐಪಿಎಲ್ ಧೋಣಿಯ ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿದೆಯಾದರೂ ಅದನ್ನು ಸ್ವತಃ ಧೋನಿ ಈವರೆಗೂ ಖಚಿತಪಡಿಸಿಲ್ಲ. ಮುಂದಿನ ಆವೃತ್ತಿಯಲ್ಲಿ ಆಡುವ ಬಗ್ಗೆ ನಿರ್ಧಾರರ ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಸಮಯಾವಕಾಶ ಇದೆ ಎಂದಿದ್ದಾರೆ ಎಂಎಸ್ ಧೋನಿ.
ಇದೀಗ ಧೋನಿ ಕ್ರಿಕೆಟ್ ಭವಿಷ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರಾಮಾಣಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಆಟದಲ್ಲಿ ಎಂಎಸ್ ಧೋನಿ ತನ್ನ ಕರ್ತವ್ಯವನ್ನು ಈಗಾಗಲೇ ನಿಭಾಯಿಸಿದ್ದಾರೆ ಎಂದು ಕಪಿಲ್ ದೇವ್ ಹೇಳಿಕೆ ನೀಡಿದ್ದು ಮತ್ತೊಂದು ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ಹಂತಕ್ಕೆ ಪ್ರವೇಶಿಸುವಂತೆ ಮಾಡಿದ್ದಕ್ಕೆ ಧೋನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2023ರ ಐಪಿಎಲ್ ಆವೃತ್ತಿಯಾದ್ಯಂತ ಧೋನಿ ನಿವೃತ್ತಿಯ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿದೆ. ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರು ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹರ್ಭಜನ್ ಸಿಂಗ್, ಮೈಕಲ್ ಹಸ್ಸಿ, ಡ್ವೇಯ್ನ್ ಬ್ರಾವೋ ಮೊದಲಾದ ಮಾಜಿ ಕ್ರಿಕೆಟಿಗರು ಧೋನಿ ಮುಂದಿನ ಆವೃತ್ತಿಯಲ್ಲಿಯೂ ಆಡಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಆದರೆ ಧೋನಿ ಈ ಬಗ್ಗೆ ತಾನಿನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಮುಂದಿನ ಆವೃತ್ತಿಗೆ ಸಾಕಷ್ಟು ಸಮಯ ಇರುವುದರಿಂದ 8-9 ತಿಂಗಳುಗಳ ಕಾಲ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಅವಕಾಶವಿದೆ ಎಂದ್ದರು ಧೋನಿ.
1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಈ ಬಾರಿಯ ಆವೃತ್ತಿಯಲ್ಲಿಯೂ ಮತ್ತೊಮ್ಮೆ ಎಂಎಸ್ ಧೋಣಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಫೈನಲ್ ಹಂತಕ್ಕೆ ಮುನ್ನಡೆಸಿರುವ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಅವರು 15 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ. ಆದರೆ ನಾವು ಕೇವಲ ಧೋನಿ ಬಗ್ಗೆ ಮಾತ್ರವೇ ಯಾಕೆ ಚರ್ಚಿಸುತ್ತೇವೆ. ಅವರು ಊಗಾಗಲೇ ತಮ್ಮ ಕರ್ತವ್ಯ ನಿಭಾಯಿಸಿದ್ದಾರೆ. ಆತನಿಂದ ನಾವು ಇನ್ನು ಏನನ್ನು ಬಯಸುತ್ತಿದ್ದೇವೆ. ಆತ ತನ್ನ ಜೀವನದುದ್ದಕ್ಕೂ ಕ್ರಿಕೆಟ್ ಆಡುತ್ತಲೇ ಇರಬೇಕು ಎಂದು ನಾವು ಬಯಸುತ್ತಿದ್ದೇವಾ? ಅದು ಸಾಧ್ಯವಿಲ್ಲ. ಅದರ ಬದಲಿಗೆ ನಾವು ಆತ ಕಳೆದ 15 ವರ್ಷಗಳಿಂದ ಆಡುತ್ತಿರುವದಕ್ಕೆ ಧನ್ಯವಾದ ಸಲ್ಲಿಸಬೇಕು" ಎಂದಿದ್ದಾರೆ ಕಪಿಲ್ ದೇವ್
"ಆತ ಮುಂದಿನ ಆವೃತ್ತಿಯಲ್ಲಿ ಆಡುತ್ತಾರೀ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಕ್ರಿಕೆಟಿಂಗ್ ದೂರವಾಗುವ ಮುನ್ನ ಅದ್ಭುತವಾಗಿ ಆಡಿದ್ದಾರೆ. ಅವರಿಂದ ದೊಡ್ಡ ಮೊತ್ತದ ರನ್ ಬಾರದಿರಬಹುದು. ಆದರೆ ಅವರು ತಂಡವನ್ನು ಫೈನಲ್ ಹಂತಕ್ಕೆ ಮುನ್ನಡೆಸಿದ್ದಾರೆ. ಇದು ಕ್ರಿಕೆಟ್ನಲ್ಲಿ ತಂಡದ ನಾಯಕನ ಪ್ರಾಮುಖ್ಯತೆಯನ್ನು ಹೇಳುತ್ತದೆ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್.
ಈ ಬಾರಿಯ ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಭಾನುವಾರ ನಡೆಯಬೇಕಿದ್ದ ಪಂದ್ಯ ಮಳೆಯ ಕಾರಣದಿಂದಾಗಿ ಸೋಮವಾರಕ್ಕೆ ಮುಂದೂಡಿಕೆಯಾಗಿದ್ದು ಯಾರು ಚಾಂಪಿಯನ್ ಎಂಬ ಕುತೂಹಲ ಹಾಗೆಯೇ ಉಳಿದುಕೊಂಡಿದೆ.