ಭಾರತದಲ್ಲಿ ಕ್ರಿಕೆಟ್ ಬೆಳೆದ ಹಾದಿ ಬಲು ರೋಚಕ. 70, 80ರ ದಶಕದಲ್ಲಿ ಅಂಡರ್ಡಾಗ್ಸ್ ಎಂದು ಕರೆಸಿಕೊಳ್ಳುತ್ತಿದ್ದ ಭಾರತೀಯ ತಂಡ ಪ್ರಸ್ತುತ ವಿಶ್ವಶ್ರೇಷ್ಠ ತಂಡಗಳಲ್ಲಿ ಒಂದಾಗಿದೆ. ತವರಿನಲ್ಲಿ ಮಾತ್ರವಲ್ಲದೆ ತವರಿನಾಚೆಯೂ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡುವ ತಂಡ ಎನಿಸಿಕೊಂಡಿದೆ ಟೀಮ್ ಇಂಡಿಯಾ. ಆದರೆ ಆಟಗಾರರು ಸಹಜವಾಗಿಯೇ ಏರಿಳಿತಗಳನ್ನು ಕಾಣುತ್ತಿರುತ್ತಾರೆ. ಈ ವಿಚಾರವಾಗಿ ಇತ್ತೀಚೆಗೆ ಸುನಿಲ್ ಗವಾಸ್ಕರ್ ಮಾತನಾಡಿ ಈಗಿನ ಆಟಗಾರರು ಕಠಿಣ ಸಂದರ್ಭದಲ್ಲಿಯೂ ತಮ್ಮಲ್ಲಿ ಯಾವುದೇ ಸಹಾಯವನ್ನು ಕೂಡ ಪಡೆಯಲು ಸಂಪರ್ಕಿಸುವುದಿಲ್ಲ ಎಂದು ಟೀಕಿಸಿದ್ದರು. ಗವಾಸ್ಕರ್ ಅವರ ಈ ಮಾತಿಗೆ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಕೂಡ ಪ್ರತಿಕ್ರಿಯೆ ನೀಡಿದ್ದು ಕಠಿಣ ಪದಗಳ ಮೂಲಕ ಕಿಡಿಕಾರಿದ್ದಾರೆ.
'ದಿ ವೀಕ್' ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ದೇವ್ ಭಾರತೀಯ ಕ್ರಿಕೆಟಿಗರ ಪ್ರಸ್ತುತ ಹಾಲಿ ಮನಸ್ಥಿತಿಯ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ಕ್ರಿಕೆಟಿಗರು ತಮ್ಮ ಬಗ್ಗೆ ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿದ್ದಾರೆ ಆದರೆ ಋಣಾತ್ಮಕ ಅಂಶವೆಂದರೆ ಅವರು ತಮಗೆ ಎಲ್ಲಾ ತಿಳಿದಿದೆ ಎಂದು ಭಾವಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

"ಈಗಿನ ಆಟಗಾರರ ಒಳ್ಳೆಯ ಅಂಶವೆಂದರೆ ಅವರೆಲ್ಲಾ ಬಹಳ ಆತ್ಮವಿಶ್ವಾಸವನ್ನು ಹೊಂದಿದ್ದಾರೆ. ಋಣಾತ್ಮಕ ಅಂಶವೆಂದರೆ ತಮಗೆ ಎಲ್ಲಾ ತಿಳಿದಿದೆ ಎಂದು ಭಾವಿಸಿದ್ದಾರೆ. ಅದಕ್ಕಿಂತ ಹೆಚ್ಚಿನದನ್ನು ಅವರು ಹೇಗೆ ಸಾಧಿಸುತ್ತಾರೆ ಎನನ್ಉವುದು ನನಗೆ ತಿಳಿದಿಲ್ಲ. ಆದರೆ ಅವರು ಬಹಳ ಆತ್ಮವಿಶ್ವಾಸವನ್ನು ಹೊಂದಿದ್ದು ಬೇರೆ ಯಾರಲ್ಲಿಯೂ ಏನನ್ನೂ ಕೇಳಬಾರದು ಎಂದು ಕೊಂಡಿದ್ದಾರೆ. ನಾವು ಎಂದುಕೊಂಡಿದ್ದು ಏನೆಂದರೆ ಅನುಭವಿಗಳು ನಮಗೆ ಸಹಾಯ ಮಾಡುತ್ತಾರೆ ಎಂದು ಭಾವಿಸುತ್ತಿದ್ದೆವು" ಎಂದಿದ್ದಾರೆ ಕಪಿಲ್ದೇವ್.
1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಈಗಿನ ಆಟಗಾರರಲ್ಲಿ ಹಣ ಮತ್ತು ದುರಹಂಕಾರದ ಬಗ್ಗೆ ಟೀಕೆಗಳನ್ನು ಮಾಡಿದ್ದಾರೆ. ಆಟಗಾರರು ಭಾರತೀಯ ದಂತಕಥೆ ಸುನಿಲ್ ಗವಾಸ್ಕರ್ ಅವರಂತವರ ಮಾರ್ಗದರ್ಶನವನ್ನು ಏಕೆ ಪಡೆಯುವುದಿಲ್ಲ ಎಂದು ಪ್ರಶ್ನಿಸಿದರು.
"ಕೆಲ ಸಂದರ್ಭಗಳಲ್ಲಿ ಬಹಳ ಹಣ ಬಂದರೆ ಅದರ ಜೊತೆಗೆ ಅಹಂಕಾರವೂ ಬರುತ್ತದೆ. ಈ ಕ್ರಿಕೆಟಿಗರು ತಮಗೆ ಎಲ್ಲವೂ ಗೊತ್ತಿದೆ ಎಂದುಕೊಂಡಿದ್ದಾರೆ. ಅದುವೇ ಭಿನ್ನತೆ. ಸಹಾಯದ ಅಗತ್ಯವಿರುವ ಬಹಳ ಆಟಗಾರರು ಇದ್ದಾರೆ ಎಂದು ನಾನು ಹೇಳಬಲ್ಲೆ. ಸುನಿಲ್ ಗವಾಸ್ಕರ್ ಅವರಂಥಾ ಆಟಗಾರ ಇದ್ದಾಗ ಯಾಕೆ ನೀವು ಅವರಿಂದ ಸಹಾಯ ಕೇಳುವುದಿಲ್ಲ? ಅಹಂಕಾರ ಯಾಕೆ? ಅಷ್ಟು ಅಹಂಕಾರ ಇರಬಾರದು"
"ಅವರು ನಾವು ಸಾಕಷ್ಟು ತಿಳಿದುಕೊಂಡಿದ್ದೇವೆ ಎಂದು ಭಾವಿಸುತ್ತಾರೆ. ಬಹುಶಃ ಅವರು ಸಾಕಷ್ಟು ತಿಳಿದಿರಬಹುದು. ಆದರೆ ಕ್ರಿಕೆಟ್ನ 50 ಸೀಸನ್ಗಳನ್ನು ನೋಡಿದವರಿಂದ ಅವರು ಮತ್ತಷ್ಟು ವಿಚಾರಗಳನ್ನು ತಿಳಿದುಕೊಳ್ಳಬಹುದು. ಕೇಳುವುದು ಕೆಲವೊಮ್ಮೆ ನಮ್ಮ ಆಲೋಚನೆಗಳನ್ನು ಬದಲಾಯಿಸುತ್ತದೆ" ಎಂದಿದ್ದಾರೆ ಕಪಿಲ್ದೇವ್.
ಇದಕ್ಕೂ ಮುನ್ನ ಸುನಿಲ್ ಗವಾಸ್ಕರ್ ಈಗಿನ ಕ್ರಿಕೆಟಿಗರು ತಮ್ಮಿಂದ ಯಾವುದೇ ಸಲಹೆಗಳನ್ನು ಪಡೆಯಲು ಮುಂದೆ ಬರುವುದಿಲ್ಲ ಎಂದು ಬೇಸರ ಹೊರಹಾಕಿದ್ದರು. ಇದೇ ಸಂದರ್ಭದಲ್ಲಿ ಅವರು ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ್ ನಿರಂತರವಾಗಿ ಸಂಪರ್ಕದಲ್ಲಿದ್ದು ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದು ಹೊಸ ಪೀಳಿಗೆಯ ಆಟಗಾರರು ಯಾರು ಕೂಡ ತಮ್ಮ ಬಳಿ ಸಲಹೆಗಳನ್ನು ಪಡೆಯುವುದಿಲ್ಲ ಎಂದಿದ್ದರು.