ಈ ಬಾರಿಯ ಐಪಿಎಲ್ನಲ್ಲಿ ಭಾರತದ ಹಲವು ಯುವ ಆಟಗಾರರು ಅಮೋಘ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ದಿಗ್ಗಜ ಆಟಗಾರರು ಕೂಡ ಪುಳಕಿತಗೊಳ್ಳುವಂತೆ ಮಾಡಿದ್ದಾರೆ. ಅದರಲ್ಲೂ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಆಟಗಾರ ಶುಬ್ಮನ್ ಗಿಲ್ ನೀಡುತ್ತಿರುವ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಸಾಕಷ್ಟು ಮೆಚ್ಚುಗೆಯ ಸುರಿಮಳೆಯೇ ವ್ಯಕ್ತವಾಗುತ್ತಿದೆ. ಈ ಸಾಲಿಗೆ ಇದೀಗ ಭಾರತದ ಮಾಜಿ ನಾಯಕ ಕಪಿಲ್ದೇವ್ ಕೂಡ ಸೇರಿದ್ದಾರೆ
1983ರ ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಕಪಿಲ್ ದೇವ್ ಯುವ ಆಟಗಾರ ಶುಬ್ಮನ್ ಗಿಲ್ ಆಟಕ್ಕೆ ತಲೆದೂಗಿದ್ದಾರೆ. ಅಲ್ಲದೆ ಶುಬ್ಮನ್ ಗಿಲ್ ಕ್ರಿಕೆಟ್ ಭವಿಷ್ಯದ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿದ್ದು ಭಾರತದ ದಿಗ್ಗಜ ಆಟಗಾರರ ಸಾಲಿಗೆ ಸೇರಿಕೊಳ್ಳಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ನ ದಿಗ್ಗಜ ಆಟಗಾರರು ಎನಿಸಿಕೊಂಡ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯ ಹಾದಿಯಲ್ಲಿ ಶುಬ್ಮನ್ ಗಿಲ್ ಇದ್ದಾರೆ ಎಂದು ಬಣ್ಣಿಸಿದ್ದಾರೆ ಕಪಿಲ್ದೇವ್.

ಶುಬ್ಮನ್ ಗಿಲ್ ಕಳೆದ ಶುಕ್ರವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಕ್ವಾಲಿಫಯರ್ ಪಂದ್ಯದಲ್ಲಿ ಕೇವಲ 60 ಎಸೆತಗಳಲ್ಲಿ ಅಮೋಘ 129 ರನ್ ಬಾರಿಸಿದ್ದರು. ಈ ಪ್ರದರ್ಶನದಿಂದಾಗಿ ಗುಜರಾತ್ ಟೈನಟ್ಸ್ ತಂಡ ಮುಂಬೈ ಇಮಡಿಯನ್ಸ್ ವಿರುದ್ಧ ಬೃಹತ್ ಗೆಲುವು ದಾಖಲಿಸಿ ಫೈನಲ್ಗೆ ಪ್ರವೇಶಿಸಲು ಸಾಧ್ಯವಾಗಿದೆ. ಇನ್ನು ಗಿಲ್ ಕಳೆದ ನಾಲ್ಕು ಪಂದ್ಯಗಳಲ್ಲಿ ಸಿಡಿಸಿದ ಮೂರನೇ ಶತಕ ಇದಾಗಿದೆ.
ಎಬಿಪಿ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕಪಿಲ್ ದೇವ್ ಶುಬ್ಮನ್ ಗಿಲ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಸುನಿಲ್ ಗವಾಸ್ಕರ್ ಬಂದರು, ನಂತರ ಸಚಿನ್ ತೆಂಡೂಲ್ಕರ್ ಬಂದರು., ಅದಾದ ಬಳಿಕ ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ವೀರೇಂದರ ಸೆಹ್ವಾಗ್, ವಿರಾಟ್ ಕೊಹ್ಲಿ ಬಂದಿದ್ದಾರೆ. ಈಗ ನೀಡುತ್ತಿರುವ ಬ್ಯಾಟಿಂಗ್ ಪ್ರದರ್ಶನವನ್ನು ನೋಡಿದರೆ ಶುಬ್ಮನ್ ಗಿಲ್ ಈ ದಿಗ್ಗಜ ಆಟಗಾರರ ಹಾದಿಯಲ್ಲಿ ಮುಂದುವರಿಯುತ್ತಿರುವಂತೆ ಕಾಣಿಸುತ್ತಿದೆ" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಕಪಿಲ್ದೇವ್.
ಮುಂದುವರಿದಸು ಮಾತನಾಡಿದ ಕಪಿಲ್ ದೇವ್ ಶುಬ್ಮನ್ ಗಿಲ್ ಬಗ್ಗೆ ಈಗಲೇ ದೊಡ್ಡ ಮಟ್ಟದ ನಿರೀಕ್ಷೆ ಸರಿಯಲ್ಲ ಎಂದಿದ್ದಾರೆ. "ಶುಬ್ಮನ್ ಗಿಲ್ ಅವರ ಬಗ್ಗೆ ದೊಡ್ಡ ನಿರೀಕ್ಷೆ ವ್ಯಕ್ತಪಡಿಸುವ ಮುನ್ನ ಅವರಿಗೆ ಇನ್ನೊಂದು ಆವೃತ್ತಿಯನ್ನು ನೀಡಲು ಬಯಸುತ್ತೇನೆ. ಆತನಲ್ಲಿ ಖಂಡಿತವಾಗಿಯೂ ಪ್ರತಿಭೆಯಿದೆ ಹಾಗೂ ಸಾಮರ್ಥ್ಯವಿದೆ. ಆದರೆ ಅವರಲ್ಲಿ ಪ್ರಬುದ್ಧತೆ ಮತ್ತಷ್ಟು ಬೆಳೆಯಬೇಕು" ಎಂದಿದ್ದಾರೆ ಕಪಿಲ್ದೇವ್.
"ಶುಬ್ಮನ್ ಗಿಲ್ ಇನ್ನೊಂದು ಕ್ರಿಕೆಟ್ ಆವೃತ್ತಿಯಲ್ಲಿಯೂ ಇಂಥಾದ್ದೇ ಪ್ರದರ್ಶನ ನೀಡಲು ಸಾಧ್ಯವಾದರೆ ಆತ ದಿಗ್ಗಜ ಆಟಗಾರರ ಸಾಲಿಗೆ ಸೇರಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈಗಲೇ ಅವರನ್ನು ಆ ದಿಗ್ಗಜ ಆಟಗಾರರ ಪಟ್ಟಿಯಲ್ಲಿ ನೋಡಲು ಬಯಸುವುದಿಲ್ಲ. ಆತನಿಗೆ ಇನ್ನೊಂದು ವರ್ಷವನ್ನು ನೀಡಬೇಕು. ಈಗಲೇ ಹೇಳಿದರೆ ಆತುರಪಟ್ಟಂತಾಗುತ್ತದೆ" ಎಂದಿದ್ದಾರೆ ಕಪಿಲ್ ದೇವ್.