ಜೂನ್ 26 ಬುಧವಾರ, ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ಮಾಜಿ ದಿಗ್ಗಜ ಕ್ರಿಕೆಟಿಗ ಕಪಿಲ್ ದೇವ್ ಅವರು ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಭಾರತೀಯ ಗಾಲ್ಫ್ನಲ್ಲಿ ಹೊಸ ಯುಗವನ್ನು ಪ್ರಾರಂಭಿಸಲು ಕಪಿಲ್ ದೇವ್ ಸಜ್ಜಾಗಿದ್ದಾರೆ.
ಕಪಿಲ್ ದೇವ್ ಅವರಿಗೆ ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾ ಪ್ರಶಸ್ತಿಯನ್ನು ಸರ್ವಾನುಮತದಿಂದ ನೀಡಲಾಗಿದೆ. ಜೊತೆಗೆ ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾದ (ಪಿಜಿಟಿಐ) ಅಧ್ಯಕ್ಷರಾಗಿಯೂ ಕಪಿಲ್ ದೇವ್ ಆಯ್ಕೆಯಾಗಿದ್ದಾರೆ.

2021ರಲ್ಲಿ ಪಿಜಿಟಿಐ ಮಂಡಳಿಯ ಸದಸ್ಯರಾದ ಕಪಿಲ್ ದೇವ್ ಬಳಿಕ ಉಪಾಧ್ಯಕ್ಷರಾಗಿದ್ದರು. ಇದೀಗ ಎಚ್ಆರ್ ಶ್ರೀನಿವಾಸನ್ ಅವರ ಅಧಿಕಾರಾವಧಿ ಕೊನೆಗೊಂಡಿದ್ದು, ಅವರ ಸ್ಥಾನಕ್ಕೆ ಕಪಿಲ್ ದೇವ್ ಆಯ್ಕೆಯಾಗಿದ್ದಾರೆ.
65 ವರ್ಷದ ಕಪಿಲ್ ದೇವ್, 'ಕೆಲವು ವರ್ಷಗಳಿಂದ ಭಾರತೀಯ ವೃತ್ತಿಪರ ಗಾಲ್ಫ್ ಆಟಗಾರರಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇಂದು ನಾವು ಹೆಚ್ಚಿನ ಪ್ರಮುಖ ಪ್ರವಾಸಗಳಲ್ಲಿ ಭಾರತೀಯ ವೃತ್ತಿಪರರನ್ನು ಹೊಂದಿದ್ದೇವೆ.
ಅಲ್ಲದೆ, ಸತತ ಮೂರನೇ ಬಾರಿಗೆ ನಾವು ಒಲಿಂಪಿಕ್ಸ್ನಲ್ಲಿ ಇಬ್ಬರು ಗಾಲ್ಫ್ ಆಟಗಾರರನ್ನು ಹೊಂದಿದ್ದೇವೆ. ನಮ್ಮ ಪ್ರವಾಸವು ಪ್ರಬಲವಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ನಾವು ಗಾಲ್ಫ್ ಕ್ರೀಡೆಯಲ್ಲಿ ಬಲಗೊಳ್ಳುವ ಭರವಸೆ ಇದೆ.
ಸುಮಾರು 2 ಕೋಟಿ ರೂ. (ಸುಮಾರು $240,000) ವೆಚ್ಚದ ಗಾಲ್ಫ್ ಈವೆಂಟ್ (ಗ್ರಾಂಟ್ ಥಾರ್ನ್ಟನ್ ಇನ್ವಿಟೇಶನಲ್ ಟೂರ್ನಮೆಂಟ್) ಕಪಿಲ್ ದೇವ್ ಪರಿಚಯಿಸಿದ್ದರು. ಇದು ಪಿಜಿಟಿಐ ಕ್ಯಾಲೆಂಡರ್ನಲ್ಲಿ ಅತ್ಯಂತ ಲಾಭದಾಯಕ ಈವೆಂಟ್ಗಳಲ್ಲಿ ಒಂದಾಗಿದೆ.
1983ರಲ್ಲಿ ಭಾರತ ತಂಡದ ವಿಶ್ವಕಪ್ ಗೆಲ್ಲಲು ನಾಯಕ ಕಪಿಲ್ ದೇವ್ ಪ್ರಮುಖ ಪಾತ್ರವಹಿಸಿದ್ದರು. ಭಾರತವು ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್ನ ಮುಖವನ್ನು ಬದಲಾಯಿಸಿತು.
ಆ ಬಳಿಕ 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತ್ತು. ಆದರೆ ಅದಕ್ಕೂ ಮುನ್ನ 2007ರಲ್ಲಿ ಭಾರತ ಮೊದಲ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಇದಾದ ನಂತರ ಯಾವುದೇ ಐಸಿಸಿ ಟ್ರೋಪಿಯನ್ನು ಟೀಮ್ ಇಂಡಿಯಾ ಗೆದ್ದಿಲ್ಲ.