
ಡಿಸೆಂಬರ್ 30ರಂದು ನಡೆದ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ. ಸದ್ಯ ಚೇತರಿಕೆಯ ಹಾದಿಯಲ್ಲಿದ್ದು, ಇತ್ತೀಚೆಗಷ್ಟೆ ಇನ್ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದರು.
ಮಾಜಿ ಭಾರತ ವಿಶ್ವಕಪ್ ವಿಜೇತ ನಾಯಕ ಮತ್ತು ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಪಂತ್ ಬಗ್ಗೆ ವಿಶೇಷವಾದ ಪ್ರೀತಿ ತೋರಿದ್ದಾರೆ. ಪಂತ್ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅವರ ಕೆನ್ನೆಗೆ ಬಾರಿಸುತ್ತೇನೆ ಎಂದು ಹೇಳಿದ್ದಾರೆ.
ಪಂತ್ ಮೇಲೆ ವಿಶೇಷ ಪ್ರೀತಿ ಹೊಂದಿರುವುದನ್ನು ತೋರ್ಪಡಿಸಿದ ಕಪಿಲ್ ದೇವ್, ಪಂತ್ ಕಾರು ಅಪಘಾತದ ಬಗ್ಗೆ ಅಸಹನೆ ವ್ಯಕ್ತಪಡಿಸಿದರು. ವಿಕೆಟ್ ಕೀಪರ್ ಗಾಯಗೊಂಡಿರುವುದು ತಂಡದಲ್ಲಿ ಅಸಮತೋಲನ ಉಂಟುಮಾಡಿದೆ ಎಂದು ಹೇಳಿದರು.
ಮಕ್ಕಳು ತಪ್ಪು ಮಾಡಿದಾಗ ಕೆನ್ನೆಗೆ ಬಾರಿಸುವ ಅಧಿಕಾರ ಪೋಷಕರಿಗೆ ಇರುತ್ತದೆ. ಪಂತ್ ಸಂಪೂರ್ಣವಾಗಿ ಗುಣಮುಖರಾದ ನಂತರ ಕಪಿಲ್ ದೇವ್ ಅವರಿಗೆ ಕೆನ್ನೆಗೆ ಬಾರಿಸಿ ಬುದ್ದಿ ಹೇಳಬೇಕು ಎಂದು ಬಯಸುತ್ತಾರೆ.

ಆತನ ತಪ್ಪಿನಿಂದ ತಂಡಕ್ಕೆ ಹಿನ್ನಡೆಯಾಗಿದೆ
"ನನಗೆ ಪಂತ್ ಮೇಲೆ ವಿಶೇಷವಾದ ಪ್ರೀತಿಯಿದೆ. ಆತ ಚೇತರಿಸಿಕೊಳ್ಳುತ್ತಿದ್ದಂತೆ ನಾನು ಹೋಗಿ ಆತನಿಗೆ ಕಪಾಳಮೋಕ್ಷ ಮಾಡುತ್ತೇನೆ. ನೀನು ಅಪಘಾತದಲ್ಲಿ ಗಾಯಗೊಂಡಿದ್ದರಿಂದ ಇಡೀ ತಂಡವೇ ನಲುಗಿಹೋಗಿದೆ. ನಾನು ಆತನನ್ನು ಪ್ರೀತಿಸುತ್ತೇನೆ, ಆತನ ಮೇಲೆ ಕೋಪಗೊಂಡಿದ್ದೇನೆ. ಇಂದಿನ ಯುವಜನತೆ ಏಕೆ ಇಂತಹ ತಪ್ಪುಗಳನ್ನು ಮಾಡುತ್ತಾರೆ? ಅದಕ್ಕೆ ಆತನಿಗೆ ಕಪಾಳಕ್ಕೆ ಹೊಡೆಯಬೇಕು" ಎಂದು ಹೇಳಿದರು.
"ಆತನಿಗೆ ಮೊದಲು ಆಶೀರ್ವಾದ ಸಿಗುತ್ತದೆ. ಆತನಿಗೆ ಪ್ರಪಂಚದ ಎಲ್ಲಾ ಪ್ರೀತಿಯನ್ನು ಪಡೆಯುತ್ತಾರೆ. ದೇವರು ಆತನಿಗೆ ಉತ್ತಮ ಆರೋಗ್ಯ ನೀಡಲಿ. ಆದರೆ, ಮಕ್ಕಳು ತಪ್ಪು ಮಾಡಿದಾಗ, ಕಪಾಳಕ್ಕೆ ಹೊಡೆದು ಬುದ್ದಿ ಹೇಳುವ ಜವಾಬ್ದಾರಿ ಪೋಷಕರ ಮೇಲಿದೆ" ಎಂದು ಹೇಳಿದರು.

ಇನ್ಸ್ಟಾಗ್ರಾಂನಲ್ಲಿ ರಿಷಬ್ ಪಂತ್ ಪೋಸ್ಟ್
ರಿಷಬ್ ಪಂತ್ ಸದ್ಯ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಭಿಮಾನಿಗಳಿಗಾಗಿ ಪೋಸ್ಟ್ ಹಂಚಿಕೊಂಡಿದ್ದರು. ಹೊರಗಡೆ ಕುಳಿತು ತಂಪಾದ ಗಾಳಿಯನ್ನು ಉಸಿರಾಡುವುದು ಎಷ್ಟು ಸುಂದರವಾಗಿದೆ" ಎಂದು ಪೋಸ್ಟ್ ಮಾಡಿದ್ದರು.
ಡಿಸೆಂಬರ್ 30ರಂದು ನಡೆದ ಕಾರು ಅಪಘಾತದಲ್ಲಿ ರಿಷಬ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಡೆಹ್ರಾಡೂನ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆದುಕೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಮೊಣಕಾಲು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಈ ವರ್ಷ ಕ್ರಿಕೆಟ್ ಆಡುವುದು ಅನುಮಾನ ಎನ್ನಲಾಗಿದೆ. ಫೆಬ್ರವರಿ 9ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಪಂತ್ರನ್ನು ಭಾರತ ತಂಡ ಮಿಸ್ ಮಾಡಿಕೊಳ್ಳುತ್ತಿದೆ.