
ನವದೆಹಲಿ, ಜುಲೈ 17: ಟೀಮ್ ಇಂಡಿಯಾ ಮಾಜಿ ನಾಯಕ, ಮೊದಲ ವಿಶ್ವಕಪ್ ಕಪ್ ಗೆದ್ದ ತಂಡವನ್ನು ಮುನ್ನಡೆಸಿದ್ದ ಕಪಿಲ್ ದೇವ್ ಸೇರಿ, ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಅಂಶುಮಾನ್ ಗಾಯಕ್ವಾಡ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರಿರುವ ತಂಡ ಭಾರತದ ಮುಖ್ಯ ಕೋಚ್ ಆರಿಸಲಿದೆ.
ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ಭಾನುವಾರ (ಜುಲೈ 14) ಮುಕ್ತಾಯಗೊಂಡ ಐಸಿಸಿ ಕ್ರಿಕೆಟ್ ವಿಶ್ವಕಪ್ ಬೆನ್ನಲ್ಲೇ, ಮುಖ್ಯ ಕೋಚ್ ರವಿಶಾಸ್ತ್ರಿ ಅವರ ಜವಾಬ್ದಾರಿಯ ಅವಧಿ ಮುಕ್ತಾಯಗೊಂಡಿದೆ. ಮುಂದಿನ ಅವಧಿಗೆ ಹೊಸ ಆಯ್ಕೆ ನಡೆಯಲಿದ್ದು, ಆಯ್ಕೆ ಹೊಣೆಗಾರಿಕೆ ಮಾಜಿ ಕ್ರಿಕೆಟಿಗರ ಮೇಲಿದೆ.
ವಿಶ್ವಕಪ್ ಸೆಮಿಫೈನಲ್ನಲ್ಲಿ ವಿರಾಟ್ ಕೊಹ್ಲಿ ಬಳಗ ಹೊರಬಿದ್ದ ನಂತರ ಭಾರತದ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಮತ್ತು ಕಂಡೀಷನಿಂಗ್ ಕೋಚ್ ಶಂಕರ್ ಬಸು ರಾಜೀನಾಮೆ ನೀಡಿದ್ದರು. ಹೀಗಾಗಿ ಬಿಸಿಸಿಐಯು ಮಂಗಳವಾರ (ಜುಲೈ 16) ಮುಖ್ಯ ಕೋಚ್ ಸೇರಿ, ಬ್ಯಾಟಿಂಗ್, ಬೌಲಿಂಗ್, ಫಿಸಿಯೋ ಮತ್ತು ಕಂಡೀಷನಿಂದ ಕೋಚ್ ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ.
ಹೊಸ ಕೋಚ್ ಸ್ಥಾನಗಳಿಗೆ ಅರ್ಜಿ ಕರೆಯಲು ಸುಪ್ರೀಮ್ ಕೋರ್ಟ್ ನೇಮಿತ ಸಮಿತಿ ನಿರ್ಧರಿಸಿತ್ತು. ಹೀಗಾಗಿ ಈಗಿರುವ ಸ್ಟಾಫ್ಗಳಲ್ಲಿ ಶಾಸ್ತ್ರಿ, ಭರತ್ ಅರುಣ್ (ಬೌಲಿಂಗ್ ಕೋಚ್), ಸಂಜಯ್ ಬಾಂಗರ್ (ಸಹ ಬ್ಯಾಟಿಂಗ್ ಕೋಚ್) ಕೂಡ ಅಭ್ಯರ್ಥಿಗಳ ಬಣದಲ್ಲಿದ್ದಾರೆ.
ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿ.ವಿ.ಎಸ್. ಲಕ್ಷ್ಮಣ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯನ್ನು ಹಿತಾಸಕ್ತಿ ಸಂಘರ್ಷದ ಕಾರಣದಿಂದ ನಿಷ್ಕ್ರಿಯಗೊಳಿಸಲಾಗಿದ್ದು, ನೂತನ ಸಲಹಾ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರು ಕಾಣಿಸಿಕೊಂಡಿದ್ದಾರೆ.