ಬೆಂಗಳೂರು: ವಿಜಯ್ ಹಜಾರೆ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ನಲ್ಲಿ ಮುಂಬೈ ವಿರುದ್ಧ ಕಾದಾಟ ನಡೆಸಲಿದೆ. ಕರ್ನಾಟಕ ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದು ಸೆಮಿಫೈನಲ್ ಪ್ರವೇಶಿಸುವ ಕನಸು ಕಾಣುತ್ತಿದೆ. ಬಿಸಿಸಿಐ ಶ್ರೇಷ್ಠತಾ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಕರ್ನಾಟಕ ತಂಡ ಪ್ರಸಕ್ತ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನ ನೀಡಿದೆ. ಕರ್ನಾಟಕದ ಸ್ಟಾರ್ ಆಟಗಾರರಾದ ದೇವದತ್ ಪಡಿಕ್ಕಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇವರು ಆಡಿದ 7 ಪಂದ್ಯಗಳಲ್ಲಿ 4 ಶತಕ ಹಾಗೂ 1 ಅರ್ಧಶತಕ ಸಿಡಿಸಿದ್ದಾರೆ. ಇವರು ಮುಂಬೈ ವಿರುದ್ಧದ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಕನಸು ಕಾಣುತ್ತಿದ್ದಾರೆ. ಆರಂಭಿಕರಾಗಿ ದೇವದತ್ ಜೊತೆ ಇನಿಂಗ್ಸ್ ಆರಂಭಿಸುವ ಮಯಾಂಕ್ ಅಗರ್ವಾಲ್ ಸಹ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ.

ಭರವಸೆಯ ಆಟಗಾರರ ಕರುಣ್ ನಾಯರ್ ಸಹ ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಆಟಗಾರ. ಅಭಿನವ್ ಮನೋಹರ್ ಸಹ ರನ್ ವೇಗಕ್ಕೆ ಚುರುಕು ಮುಟ್ಟಿಸಬಲ್ಲ ಕ್ಷಮತೆ ಹೊಂದಿದ್ದಾರೆ. ಉಳಿದ ಬ್ಯಾಟರ್ಗಳು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರೆ ಗೆಲುವಿನ ಆಸೆ ಫಲಿಸುತ್ತದೆ.
ದೇವದತ್ ಪಡಿಕ್ಕಲ್, 7 ಪಂದ್ಯ, 640 ರನ್
ಮಯಾಂಕ್ ಅಗರ್ವಾಲ್, 7 ಪಂದ್ಯ, 399 ರನ್
ಕರುಣ್ ನಾಯರ್, 7 ಪಂದ್ಯ, 262 ರನ್
ಕರ್ನಾಟಕ ತಂಡದಲ್ಲಿ ಅನುಭವಿ ಹಾಗೂ ಯುವ ಬೌಲರ್ಗಳು ಇದ್ದಾರೆ. ಇವರು ರನ್ವೇಗಕ್ಕೆ ಕಡಿವಾಣ ಹಾಕಿ ವಿಕೆಟ್ ಬೇಟೆ ನಡೆಸಬಲ್ಲರು. ಅಭಿಲಾಷ್ ಶೆಟ್ಟಿ ಹಾಗೂ ಶ್ರೇಯಸ್ ಗೋಪಾಲ್ ಬಿಗುವಿನ ದಾಳಿಯ ಮೂಲಕ ಎದುರಾಳಿ ಬ್ಯಾಟರ್ಗಳನ್ನು ಕಾಡಬಲ್ಲರು.
ಅಭಿಲಾಷ್ ಶೆಟ್ಟಿ, 5 ಪಂದ್ಯ, 12 ವಿಕೆಟ್
ಶ್ರೇಯಸ್ ಗೋಪಾಲ್, 7 ಪಂದ್ಯ, 12 ವಿಕೆಟ್
ವಿದ್ಯಾಧರ್ ಪಾಟೀಲ್, 5 ಪಂದ್ಯ, 7 ವಿಕೆಟ್
ಮುಂಬೈ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಸರ್ಫರಾಜ್ ಖಾನ್ ಪ್ರಸಕ್ತ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು ಭರವಸೆ ಮೂಡಿಸಿದ್ದಾರೆ. ಉಳಿದಂತೆ ಮುಷೀರ್ ಖಾನ್, ಅಂಗ್ಕ್ರಿಶ್ ರಘುವಂಶಿ ಸಹ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಅನುಭವಿ ಶಾರ್ದೂಲ್ ಠಾಕೂರ್ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ.