ಶುಕ್ರವಾರ, ಜೂನ್ 2ರಂದು ವಿಂಡ್ಹೋಕ್ನ ವಾಂಡರರ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ 5 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ನಮೀಬಿಯಾ ರಾಷ್ಟ್ರೀಯ ಕ್ರಿಕೆಟ್ ತಂಡದ ವಿರುದ್ಧ ಕರ್ನಾಟಕ ರಾಜ್ಯ ತಂಡ ಭರ್ಜರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ರವಿಕುಮಾರ್ ಸಮರ್ಥ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆತಿಥೇಯ ನಮೀಬಿಯಾದ ಬ್ಯಾಟಿಂಗ್ ಪ್ರದರ್ಶನವು ನೀರಸವಾಗಿತ್ತು, ಇದರ ಪರಿಣಾಮವಾಗಿ ನಮೀಬಿಯಾ ಕೇವಲ 171 ರನ್ಗಳಿಗೆ ಆಲೌಟ್ ಆಯಿತು.

ಈ ಸುಲಭ ಗುರಿ ಬೆನ್ನತ್ತಿದ ಕರ್ನಾಟಕ ತಂಡ 35.5 ಓವರ್ನಲ್ಲಿ ಕೇವಲ ಒಂದು ವಿಕೆಟ್ ಕಳೆದುಕೊಂಡು 172 ರನ್ ಗಳಿಸಿ ಸುಲಭವಾಗಿ ಗುರಿ ಬೆನ್ನಟ್ಟಿತು.
ಮೊದಲ ಏಕದಿನ ಪಂದ್ಯದಲ್ಲಿ ನಮೀಬಿಯಾ ಕ್ರಿಕೆಟ್ ತಂಡ ಕರ್ನಾಟಕ ವಿರುದ್ಧ ಏಕಪಕ್ಷೀಯವಾಗಿ ಸೋಲು ಅನುಭವಿಸಲು ಮೊದಲು ಬ್ಯಾಟಿಂಗ್ಗೆ ಕಳಿಸಲ್ಪಟ್ಟ ನಮೀಬಿಯಾ ತಂಡ, ನಿರಾಶಾದಾಯಕ ಆರಂಭ ಪಡೆಯಿತು. ಆರಂಭಿಕ ಆಟಗಾರ ನಿಕೋಲಸ್ ಡಿವೈನ್ ಕೇವಲ 4 ರನ್ ಗಳಿಸಿ ಔಟಾದರೆ, ಮೈಕಲ್ ವ್ಯಾನ್ ಲಿಂಗನ್ ಕೇವಲ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಗೆರಾರ್ಡ್ ಎರಾಸ್ಮಸ್ 31 ರನ್ಗಳ ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಬಳಿಕ ಜಾನ್ ಫ್ರೈಲಿಂಕ್ 57 ರನ್ ಮತ್ತು ಆರಂಭಿಕ ಶಾನ್ ಫೌಚ್ 24 ರನ್ ಬಾರಿಸಿ ಮಿಂಚಿದರು. ಈ ಬ್ಯಾಟ್ಸ್ಮನ್ಗಳನ್ನು ಹೊರತುಪಡಿಸಿ ನಮೀಬಿಯಾ ತಂಡದ ಉಳಿದ ಆಟಗಾರರು 20 ರನ್ಗಳ ಗಡಿ ತಲುಪಲು ಪರದಾಡಿದರು.
ನಮೀಬಿಯಾ ತಂಡದ ಇನ್ನಿಂಗ್ಸ್ 42ನೇ ಓವರ್ನ ಮೊದಲ ಎಸೆತದಲ್ಲಿ ಒಟ್ಟು 171 ರನ್ ಗಳಿಸಿ ಸರ್ವಪತನ ಕಂಡಿತು. ಕರ್ನಾಟಕದ ಪರ ವಿದ್ವತ್ ಕೇವರಪ್ಪ 4 ವಿಕೆಟ್ ಪಡೆದರೆ, ರಿಷಿ ಬೋಪಣ್ಣ 3 ವಿಕೆಟ್ ಪಡೆದು ಮಿಂಚಿದರು.
50 ಓವರ್ಗಳಲ್ಲಿ 172 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡ, ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕ ಬ್ಯಾಟ್ಸ್ಮನ್ ಎಲ್ಆರ್ ಚೇತನ್ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 37 ರನ್ ಗಳಿಸಿ ಉತ್ತಮವಾಗಿ ಆಡಿದರು.
ಚೇತನ್ ಅಂತಿಮವಾಗಿ ಜಾನ್ ಫ್ರೈಲಿಂಕ್ ಅವರ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು ಅವರು ನಾಯಕ ರವಿಕುಮಾರ್ ಸಮರ್ಥ್ರೊಂದಿಗೆ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟದ ಕೊಡುಗೆ ನೀಡಿದರು.
ಆ ಬಳಿಕ ನಾಯಕ ರವಿಕುಮಾರ್ ಸಮರ್ಥ್ ಅವರು ನಿಕಿನ್ ಜೋಸ್ ಅವರೊಂದಿಗೆ ಮುರಿಯದ ಎರಡನೇ ವಿಕೆಟ್ಗೆ ಶತಕದ ಜೊತೆಯಾಟ ನೀಡಿದರು. ಅಲ್ಲದೆ ಕರ್ನಾಟಕ ತಂಡಕ್ಕೆ ಏಕಪಕ್ಷೀಯ ಗೆಲುವು ತಂದುಕೊಟ್ಟರು.
ರವಿಕುಮಾರ್ ಸಮರ್ಥ್ 100 ಎಸೆತಗಳಲ್ಲಿ 78 ರನ್ ಗಳಿಸಿದರೆ, ನಿಕಿನ್ ಜೋಸ್ 56 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲ ಏಕದಿನ ಪಂದ್ಯದ ಈ ಗೆಲುವಿನೊಂದಿಗೆ ಕರ್ನಾಟಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯವು ಭಾನುವಾರ, ಜೂನ್ 4ರಂದು ನಡೆಯಲಿದೆ.