
ಬೆಂಗಳೂರು, ಡಿಸೆಂಬರ್ 6: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಲೀಗ್ನಲ್ಲಿ ಬಳ್ಳಾರಿ ಟಸ್ಕರ್ಸ್ ಪರ, ಶಿವಮೊಗ್ಗ ಲಯನ್ಸ್ ವಿರುದ್ಧ ಅಜೇಯ 134 ರನ್ ಮತ್ತು 15 ರನ್ಗೆ 8 ವಿಕೆಟ್ ಪಡೆದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶಿಷ್ಠ ದಾಖಲೆ ನಿರ್ಮಿಸಿದ್ದ ಕರ್ನಾಟಕ ತಂಡದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್, ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಅರ್ಚನಾ ಸುಂದರ್ ಒಂದಿಗೆ ಗೌತಮ್ ಶುಕ್ರವಾರ (ಡಿಸೆಂಬರ್ 6) ಒಂಟಿ ಜೀವನದಿಂದ ಜಂಟಿ ಜೀವನಕ್ಕೆ ಬದಲಾಗಿದ್ದಾರೆ. ನವ ವಧು-ವರರಿಗೆ ಕರ್ನಾಟಕ ರಣಜಿ ತಂಡ ಅಧಿಕೃತ ಟ್ವಿಟರ್ ಖಾತೆ ಶುಭ ಕೋರಿದೆ. ಡಿಸೆಂಬರ್ 2ರಂದು ಕರ್ನಾಟಕ ತಂಡದ ನಾಯಕ ಮನೀಶ್ ಪಾಂಡೆ ಮದುವೆ ಬಂಧನಕ್ಕೆ ಒಳಗಾಗಿದ್ದರು.
ಈ ಬಾರಿಯ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ತಮಿಳುನಾಡು ವಿರುದ್ಧದ ಫೈನಲ್ ಪಂದ್ಯದಲ್ಲಿ ಗೌತಮ್ಗೆ ಬ್ಯಾಟಿಂಗ್ಗೆ ಅವಕಾಶ ಲಭಿಸದಿದ್ದರೂ, ಬೌಲಿಂಗ್ನಲ್ಲಿ 31 ರನ್ಗೆ 1 ವಿಕೆಟ್ ಕೆಡವಿದ್ದರು.
31ರ ಹರೆಯದ ಆಲ್ ರೌಂಡರ್ ಕೃಷ್ಣಪ್ಪ ಗೌತಮ್, 2018ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ಗೆ ಪಾದಾರ್ಪಣೆ ಮಾಡಿದ್ದರು. ಈ ಬಾರಿಯ ಐಪಿಎಲ್ ಸೀಸನ್ನಲ್ಲಿ ಗೌತಮ್, ರಾಯಲ್ಸ್ಗೆ ಬದಲಾಗಿ ಕಿಂಗ್ಸ್ XI ಪಂಜಾಬ್ ಪರ ಆಡುತ್ತಿದ್ದಾರೆ. ಒಟ್ಟು 17 ಐಪಿಎಲ್ ಇನ್ನಿಂಗ್ಸ್ಗಳಲ್ಲಿ ಗೌತಮ್ 144 ರನ್, 22 ಇನ್ನಿಂಗ್ಸ್ಗಳಲ್ಲಿ 12 ವಿಕೆಟ್ ಪಡೆದಿದ್ದಾರೆ.