ಕರ್ನಾಟಕದ ಸ್ಟಾರ್ ಆಟಗಾರ ಕೃಷ್ಣಪ್ಪಾ ಗೌತಮ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಇವರು ದೇಶೀಯ ಹಾಗೂ ಭಾರತದ ಪರ ಆಡಿರುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ತಮ್ಮ ಆಲ್ರೌಂಡರ್ ಪ್ರದರ್ಶನದಿಂದ ಕೆ.ಗೌತಮ್ ಗಮನ ಸೆಳೆದಿದ್ದರು. ಆಪ್ ಸ್ಪಿನ್ ಬೌಲಿಂಗ್ ಹಾಗೂ ಬ್ಯಾಟಿಂಗ್ನಲ್ಲಿ ಕಮಾಲ್ ಮಾಡಿದ್ದ ಕೆ ಗೌತಮ್ ದೇಶೀಯ ಟೂರ್ನಿಯಲ್ಲಿ ಮೆರೆದಿದ್ದಾರೆ. ಅಲ್ಲದೆ ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುವ ಅನುಭವ ಹೊಂದಿದ್ದು, ಮುಂದೆ ಯೂ ಕ್ರಿಕೆಟ್ಗೆ ಕೊಡುಗೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಇವರು ಕ್ರಿಕೆಟ್ಗೆ ಯಾವ ರೀತಿ ಕಾಣಿಕೆ ನೀಡಲಿದ್ದಾರೆ ಎಂಬುದನ್ನು ಮಾತ್ರ ಬಹಿರಂಗ ಪಡಿಸಲಿಲ್ಲ.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವೆಂಕಟೇಶ್ ಪ್ರಸಾದ್ ಮಾತನಾಡಿ, ದೇಶೀಯ ಕ್ರಿಕೆಟ್ಗೆ ಗೌತಮ್ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಅಲ್ಲದೆ ಇವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು.

ಕಾರ್ಯದರ್ಶಿ ಸಂತೋಶ್ ಮೆನನ್ ಮಾತನಾಡಿ, ಗೌತಮ್ ಅವರು ಯುವಕರಾಗಿದ್ದಾಗಿನ ಕ್ಷಣವನ್ನು ನೆನಪಿಸಿಕೊಂಡರು. ಅಲ್ಲದೆ ಹಂತ ಹಂತವಾಗಿ ಅವರು ಬೆಳೆದ ರೀತಿಯನ್ನು ಸ್ಮರಿಸಿದರು. ದೇಶೀಯ ಕ್ರಿಕೆಟ್ನಲ್ಲಿ ಗೌತಮ್ ಭರ್ಜರಿ ಪ್ರದರ್ಶನ ನೀಡಿದ್ದರಿಂದ ಭಾರತ ತಂಡ ಪ್ರವೇಶಿಸಿದರು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೆಎಸ್ಸಿಎ ಉಪಾಧ್ಯಕ್ಷ ಸುಜಿತ್ ಸೋಮಸುಂದರ್ ಸಹ ಉಪಸ್ಥಿತರಿದ್ದರು.
37 ವರ್ಷದ ಅನುಭವಿ ಆಟಗಾರ ಗೌತಮ್ ಭಾರತದ ಪರ ಏಕೈಕ ಏಕದಿನ ಪಂದ್ಯವನ್ನು ಆಡಿದ್ದು 1 ವಿಕೆಟ್ ಕಬಳಿಸಿದ್ದಾರೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇವರು 59 ಪಂದ್ಯಗಳಲ್ಲಿ 1419 ರನ್ ಬಾರಿಸಿದ್ದು, 1 ಶತಕ ಹಾಗೂ 5 ಅರ್ಧಶತಕವನ್ನು ಬಾರಿಸಿದ್ದಾರೆ. ಇನ್ನು ತಮ್ಮ ಆಪ್ ಸ್ಪಿನ್ ಮೂಲಕ ಗೌತಮ್ 224 ವಿಕೆಟ್ ಕಬಳಿಸಿದ್ದಾರೆ. ಇನ್ನು ಲೀಸ್ಟ್ ಎ ಕ್ರಿಕೆಟ್ನಲ್ಲಿ 68 ಪಂದ್ಯಗಳನ್ನು ಆಡಿದ್ದು 96 ವಿಕೆಟ್ ಪಡೆದು ಬೀಗಿದ್ದಾರೆ. ಅಲ್ಲದೆ ಈ ವೇಳೆ 630 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸಹ ಸೇರಿದೆ. ಐಪಿಎಲ್ನಲ್ಲಿ ಇವರು ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್, ಲಕ್ನೋ ಸೂಪರ್ ಜೈಂಟ್ಸ್ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಇವರು ಆಡಿದ 36 ಪಂದ್ಯಗಳಲ್ಲಿ 21 ವಿಕೆಟ್ ಪಡೆದು ಬೀಗಿದ್ದಾರೆ. ಈ ವೇಳೆ 247 ರನ್ ಸಿಡಿಸಿದ್ದಾರೆ. ಇವರನ್ನು ಚೆನ್ನೈ ಸೂಪರ್ ಕಿಂಗ್ಸ್ 2021ರಲ್ಲಿ 9.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿತ್ತು.