ಬೆಂಗಳೂರಿನಲ್ಲಿ ನಡೆದ ರಣಜಿ ಟ್ರೋಫಿ ಸಿ ಗುಂಪಿನ ಕರ್ನಾಟಕ ಹಾಗೂ ಬಂಗಳಾ ನಡುವಿನ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ. ಉಭಯ ತಂಡಗಳು ಈ ಪಂದ್ಯದಲ್ಲಿ ಅಂಕಗಳನ್ನು ಹಂಚಿಕೊಂಡಿವೆ. ಕರ್ನಾಟಕ ಆಡಿದ 4 ಪಂದ್ಯಗಳಲ್ಲಿ 1 ಗೆಲುವು, 3 ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, 9 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಬಂಗಾಳ ಇಷ್ಟೇ ಪಂದ್ಯದಲ್ಲಿ 8 ಅಂಕಗಳನ್ನು ಕಲೆ ಹಾಕಿದ್ದು, ಅಂಕ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಶನಿವಾರ ಎರಡನೇ ಇನಿಂಗ್ಸ್ನ್ನು 3 ವಿಕೆಟ್ 127 ರನ್ಗಳಿಂದ ಮುಂದುವರೆಸಿದ ಬಂಗಾಳ ತಂಡ 5 ವಿಕೆಟ್ಗೆ 283 ರನ್ ಸೇರಿಸಿ ಡಿಕ್ಲೇರ್ ಮಾಡಿಕೊಂಡಿತು. 364 ರನ್ಗಳ ಗುರಿಯನ್ನು ಹಿಂಬಾಲಿಸಿದ ಕರ್ನಾಟಕ 3 ವಿಕೆಟ್ಗಳಿಗೆ 110 ರನ್ಗಳಿಸಿ ಮುನ್ನುಗುತ್ತಿದ್ದಾಗ ಡಿಕ್ಲೇರ್ ಎಂದು ಘೋಷಿಸಲಾಯಿತು.

ಶನಿವಾರ ಎರಡನೇ ಇನಿಂಗ್ಸ್ ಮುಂದುವರೆಸಿದ ಬಂಗಾಳ ಸುದೀಪ್ ಕುಮಾರ್ ಘರಾಮಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ವೃದ್ಧಿಮನ್ ಸಹಾ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕಲು ಕರ್ನಾಟಕದ ಬೌಲರ್ಗಳು ವಿಫಲರಾದರು, ಕರ್ನಾಟಕದ ಬೌಲರ್ಗಳ ರಣ ತಂತ್ರವನ್ನು ಅರಿತು ಆಡಿದ ಈ ಜೋಡಿ ರನ್ ಕಲೆ ಹಾಕುತ್ತಾ ಸಾಗಿದರು. ಈ ಜೋಡಿ ಬಂಗಳಾ ಪರ ರನ್ ಕಲೆ ಹಾಕುತ್ತಾ ಸಾಗಿತು.
ಒಂದು ಹಂತದಲ್ಲಿ 160 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಸುದೀಪ್ ಕುಮಾರ್ ಘರಾಮಿ ಹಾಗೂ ಸಹಾ ಜೋಡಿ ಆಧಾರವಾಯಿತು. ಈ ಜೋಡಿ ಆರನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿತು. ಇದೇ ತನ್ನ ವೃತ್ತಿಜೀವನದ ಕೊನೆಯ ಟೂರ್ನಿ ಎಂದು ಈಗಾಗಲೇ ಘೋಷಿಸಿರುವ ವೃದ್ಧಿಮನ್ ಸಹಾ 7 ಬೌಂಡರಿ 1 ಸಿಕ್ಸರ್ ಸಹಾಯದಿಂದ ಅಜೇಯ 63 ರನ್ ಸಿಡಿಸಿದರು. ಇನ್ನು ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್ ಸುದೀಪ್ ಕುಮಾರ್ ಘರಾಮಿ 12 ಬೌಂಡರಿ, 2 ಸಿಕ್ಸರ್ ನೆರವಿನಿಂದ 101 ರನ್ ಬಾರಿಸಿ ಅಬ್ಬರಿಸಿದರು.
ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3, ಅಭಿಲಾಷ್ ಶೆಟ್ಟಿ ಹಾಗೂ ವಾಸೂಕಿ ಕೌಶಿಕ್ ತಲಾ ಒಂದು ವಿಕೆಟ್ ಪಡೆದರು.
ಗುರಿಯನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕಿಶನ್ ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಈ ಜೋಡಿ ತಂಡದ ಮೊತ್ತ 12 ಆಗಿದ್ದಾಗ ಪೆವಿಲಿಯನ್ ಸೇರಿತು. ಮೂರನೇ ವಿಕೆಟ್ಗೆ ಆರ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ ಜೊತೆಗೂಡಿ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿತು. ಗೋಪಾಲ್ 32 ರನ್ ಬಾರಿಸಿ ಔಟ್ ಆದರು. ಸ್ಮರಣ್ ಅಜೇಯ 35 ಹಾಗೂ ಮನೀಷ್ ಪಾಂಡೆ ಅಜೇಯ 35 ರನ್ ಸಿಡಿಸಿದ್ದಾಗ ಡ್ರಾ ಎಂದು ಘೋಷಿಸಲಾಯಿತು.