ಹೈದರಾಬಾದ್ನಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ಬುಲ್ಡೋಜರ್ಸ್ ತಂಡ ಎರಡನೇ ಜಯ ದಾಖಲಿಸಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಅಮೋಘ ಸಂಘಟಿತ ಆಟದ ಪ್ರದರ್ಶನ ನೀಡಿದ ಕರ್ನಾಟಕ ತಂಡ ಮತ್ತೊಂದು ಜಯ ದಾಖಲಿಸಿದೆ. ಚೆನ್ನೈ ವಿರುದ್ಧ ಕರ್ನಾಟಕದ ಸ್ಟಾರ್ ಆಟಗಾರ ಡಾರ್ಲಿಂಗ್ ಕೃಷ್ಣ ಅಮೋಘ ಆಲ್ರೌಂಡರ್ ಪ್ರದರ್ಶನ ನೀಡಿ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು.
ಟಾಸ್ ಗೆದ್ದ ಚೆನ್ನೈ ರೈನೋಸ್ ಮೊದಲು ಬ್ಯಾಟ್ ಮಾಡಿತು. ಈ ವೇಳೆ ಚೆನ್ನೈ ತಂಡಕ್ಕೆ ಪೃಥ್ವಿ ಹಾಗೂ ವಿಕ್ರಾಂತ್ ತಂಡಕ್ಕೆ ಆಧಾರವಾದರು. ಪೃಥ್ವಿ 11 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 27 ರನ್ ಬಾರಿಸಿದರೆ, ನಾಯಕ ವಿಕ್ರಾಂತ್ 16 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 27 ರನ್ ಬಾರಿಸಿದರೆ ನಿವೃತ್ತರಾದರು. ಶರಣ್ ಶರಂಗ್, ರಮಣ ತಲಾ 18 ರನ್ ಸಿಡಿಸಿದರು. ಪರಿಣಾಮ ಚೆನ್ನೈ 10 ಓವರ್ಗಳಲ್ಲಿ 3 ವಿಕೆಟ್ಗೆ 108 ರನ್ ಸಿಡಿಸಿತು. ಕರ್ನಾಟಕದ ಪರ ಚಂದನ್ ಕುಮಾರ್ 2, ಗಣೇಶ್ 1 ವಿಕೆಟ್ ಪಡೆದರು.

ಕರ್ನಾಟಕದ ಪರ ಆರಂಭಿಕ ಡಾರ್ಲಿಂಗ್ ಕೃಷ್ಣ ತಮ್ಮ ನೈಜ ಆಟವನ್ನು ಮುಂದುವರಿಸಿದರು. ಇವರು 23 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 50 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಇವರನ್ನು ಬಿಟ್ಟರೆ ಕರಣ್ ಆರ್ಯನ್ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 44 ರನ್ ಸಿಡಿಸಿ ಔಟ್ ಆದರು. ಉಳಿದಂತೆ ಕರ್ನಾಟಕದ ಪರ ರಾಜೀವ್ ಹನು 11, ಚಂದನ್ ಕುಮಾರ್ 15 ರನ್ ಸಿಡಿಸಿದರು. ಪರಿಣಾಮ ಕರ್ನಾಟಕ 10 ಓವರ್ಗಳಲ್ಲಿ 4 ವಿಕೆಟ್ಗೆ 142 ರನ್ ಸಿಡಿಸಿತು.
ಎರಡನೇ ವೇಳೆ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡದ ಪರ ಪೃಥ್ವಿ 14 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ 30 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಕಲೈಅರಸನ್ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 24 ರನ್ ಸಿಡಿಸಿದರು. ವಿಕೆಟ್ ಕೀಪರ್ ಅಜಯ್ 14 ರನ್ಗಳಿಗೆ ಆಟ ಮುಗಿಸಿದರು.
ಸಾಧಾರಣ ಮೊತ್ತವನ್ನು ಹಿಂಬಾಲಿಸಿದ ಕರ್ನಾಟಕ ತಂಡದ ಆರಂಭ ಸಾಧಾರಣವಾಗಿತ್ತು. ಕಾರ್ತಿಕ್ ಜಯರಾಮ್, ನಾಯಕ ಕಿಚ್ಚ ಸುದೀಪ್ ದೊಡ್ಡ ಕಾಣಿಕೆಯನ್ನು ತಂಡಕ್ಕೆ ನೀಡಲಿಲ್ಲ. ಆರಂಭಿಕ ಕರಣ್ ಆರ್ಯನ್ 4 ಬೌಂಡರಿ ಸಹಾಯದಿಂದ 18 ರನ್ ಸಿಡಿಸಿದರು. ಮೊದಲು ಬ್ಯಾಟ್ ಮಾಡುವಾಗ ಅಜೇಯ ಅರ್ಧಶತಕ ಬಾರಿಸಿದ್ದ ಡಾರ್ಲಿಂಗ್ ಕೃಷ್ಣ, ತಮ್ಮ ಲಯವನ್ನು ಎರಡನೇ ವೇಳೆ ಬ್ಯಾಟಿಂಗ್ ಮಾಡುವಾಗಲೂ ಮುಂದುವರೆಸಿದರು. ಇವರು 12 ಎಸೆತಗಳಲ್ಲಿ ಅಜೇಯ 22 ರನ್ ಸಿಡಿಸಿದರು. ಉಳಿದಂತೆ ರಾಜೀವ ಹನು ಅಜೇಯ 17 ರನ್ ಸಿಡಿಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು.