
ಬೆಂಗಳೂರು, ಸೆಪ್ಟೆಂಬರ್ 8: ಫಿಲ್ಮ್ ಸ್ಟಾರ್ ಗಳ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಪಂದ್ಯಾಟ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಇಂದು (ಸೆ. 8) ಮೂರನೇ ಪಂದ್ಯದಲ್ಲಿ ಹೊಯ್ಸಳ ಈಗಲ್ಸ್ ಎದುರು ಒಡೆಯರ್ ಚಾರ್ಜರ್ಸ್ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಉಪ್ಪಿ ನಾಯಕತ್ವದ ಹೊಯ್ಸಳ ಈಗಲ್ಸ್ 10 ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದು 88 ರನ್ ಪೇರಿಸಿ ಒಡೆಯರ್ ಚಾರ್ಜರ್ಸ್ ಗೆ 89 ರನ್ ಟಾರ್ಗೆಟ್ ನೀಡಿತ್ತು. ಗುರಿ ಬೆನ್ನತ್ತಿದ ಚಾರ್ಜರ್ಸ್ 5 ವಿಕೆಟ್ ನಷ್ಟಕ್ಕೆ ವಿಜಯದ ಗಡಿ ತಲುಪಿತು. ಈ ಜಯದೊಂದಿಗೆ ಒಡೆಯರ್ ಚಾರ್ಜರ್ಸ್ ಚಾರ್ಜರ್ಸ್ ಫೈನಲ್ ಪ್ರವೇಶಿಸಿದೆ.
ಗೋಲ್ಡನ್ ಸ್ಟಾರ್ ಗಣೇಶ್ ನಾಯಕತ್ವದ ಒಡೆಯರ್ಸ್ ಚಾರ್ಜರ್ಸ್ ನಲ್ಲಿ ಶಬ್ರೀಶ್ ಶೆಟ್ಟಿ, ಪವನ್ ಒಡೆಯರ್, ಸೈಯದ್ ನಶೀದ್, ರವಿಶಂಕರ್ ಗೌಡ, ರೋನಿತ್ ಮೋರೆ, ರಿತೇಶ್ ಭಟ್ಕಳ್, ನಿರೂಪ್ ಭಂಡಾರಿ, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ್, ಸಿಎಂ ಗೌತಮ್, ಚಂದ್ರ ಮಯೂರ, ಪೆಟ್ರೋಲ್ ಪ್ರಸನ್ನ ಇವರು ತಂಡದಲ್ಲಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ನಾಯಕತ್ವದ ಹೊಯ್ಸಳ ಈಗಲ್ಸ್ ನಲ್ಲಿ ಜಯರಾಮ್ ಕಾರ್ತಿಕ್, ರವಿ ಚೇತನ್, ಅನೂಪ್ ಭಂಡಾರಿ, ಪ್ರಶಾಂತ್, ರಕ್ಷಿತ್ ಕುಮಾರ್, ಸಂಜಯ್ ಕುಮಾರ್, ಸಿದ್ಧಾರ್ಥ್ ಮಹೇಶ್, ಸೂರಜ್ ಲೋಕ್ರೆ, ಪವನ್, ವಿನೋದ್, ಭವೇಶ್ ಗುಲೇಚ್ಚಾ ಮೊದಲಾದವರಿದ್ದಾರೆ.