
ಬೆಂಗಳೂರು, ಸೆಪ್ಟೆಂಬರ್ 8: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕನ್ನಡ ಚಲನಚಿತ್ರ ಕಪ್ (ಕೆಸಿಸಿ) ಕ್ರಿಕೆಟ್ ಪಂದ್ಯಾಟದ ನಾಲ್ಕನೇ ಪಂದ್ಯದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕತ್ವದ ವಿಜಯನಗರ್ ಪ್ಯಾಟ್ರಿಯೋಟ್ಸ್ ತಂಡ ಗಂಗ ವಾರಿಯರ್ಸ್ ಎದುರು 7 ವಿಕೆಟ್ ಭರ್ಜರಿ ಜಯ ಸಾಧಿಸಿದೆ.
ಸ್ಟಾರ್ ಆಟಗಾರ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ ಕ್ರಿಸ್ಟ್ ಭರ್ಜರಿ ಬ್ಯಾಟಿಂಗ್ ನೆರವಿನೊಂದಿಗೆ ಪ್ಯಾಟ್ರಿಯೋಟ್ಸ್ ತಂಡ ವಾರಿಯರ್ಸ್ ಎದುರು ಸುಲಭ ಜಯ ಗಳಿಸಿತು. ಕ್ರಿಕೆಟ್ ದಂತಕತೆ ಗಿಲ್ ಕ್ರಿಸ್ಟ್ ಅವರು 13 ಎಸೆತಗಳಲ್ಲಿ ಅಜೇಯ 38 ರನ್ ಸಿಡಿಸಿ ತಂಡದ ಗೆಲುವನ್ನು ಬರೆದರು. ಪಂದ್ಯ ಶ್ರೇಷ್ಠ ಪ್ರಶಸ್ತಿ ಗಿಲ್ ಕ್ರಿಸ್ಟ್ ಪಾಲಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕತ್ವದ ಗಂಗಾ ವಾರಿಯರ್ಸ್ ತಂಡ 10 ಓವರ್ ಗಳಲ್ಲಿ 7 ವಿಕೆಟ್ ಕಳೆದು ಕೇವಲ 64 ರನ್ ಪೇರಿಸಿ ಪ್ಯಾಟ್ರಿಯೋಟ್ಸ್ ಗೆ 65 ರನ್ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಪ್ಯಾಟ್ರಿಯೋಟ್ಸ್ ಕೇವಲ 5.1 ಓವರ್ ನಲ್ಲೇ 3 ವಿಕೆಟ್ ಕಳೆದು 65 ರನ್ ಪೇರಿಸಿತು.