ಹುಬ್ಬಳ್ಳಿ: ರಣಜಿ ಟ್ರೋಫಿಯ ಲೀಗ್ ಹಂತದ ಪಂದ್ಯಗಳಲ್ಲಿ ಕರ್ನಾಟಕ ತನ್ನ ಸಂಘಟಿತ ಆಟದ ಪ್ರದರ್ಶನವನ್ನು ಮುಂದುವರೆಸಿದೆ. ಚಂಡೀಗಢ್ ವಿರುದ್ಧದ ಎಲೈಟ್ "ಬಿ" ಗುಂಪಿನ ಪಂದ್ಯದಲ್ಲಿ ಮಯಾಂಕ್ ಪಡೆ ಇನಿಂಗ್ಸ್ ಹಾಗೂ 185 ರನ್ ಜಯ ದಾಖಲಿಸಿದೆ.
ಮಂಗಳವಾರ ಚಂಡೀಗಡ್ ತಂಡ 4 ವಿಕೆಟ್ಗೆ 72 ರನ್ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿತು. ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಮನನ್ ವೋಹ್ರಾ ಅವರನ್ನು ಹೊರತು ಪಡಿಸಿದರೆ, ಚಂಡೀಗಢ್ ಪರ ಯಾವೊಬ್ಬ ಬ್ಯಾಟರ್ ಸ್ಥಿರ ಪ್ರದರ್ಶನ ನೀಡಲಿಲ್ಲ. ಗೌರವವ ಪುರಿ (32) ಮೊದಲ ಇನಿಂಗ್ಸ್ನಲ್ಲಿ ಕೊಂಚ ಕರ್ನಾಟಕದ ಬೌಲರ್ಗಳನ್ನು ಕಾಡಿದರು. ಆದರೆ ಇವರ ಕಾಟ ತಂಡವನ್ನು ಫಾಲೋ ಆನ್ನಿಂದ ಬಚಾವ್ ಮಾಡಲು ಸಾಧ್ಯವೇ ಆಗಲಿಲ್ಲ. ಕರ್ನಾಟಕದ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಅವರ ಮೊನಚಾದ ದಾಳಿಗೆ ಉತ್ತರಿಸುವಲ್ಲಿ ಚಂಡೀಗಢ್ ತಂಡ ಕಂಗಾಲಾಯಿತು.

ಮಧ್ಯಮ ಕ್ರಮಾಂಕದ ಮನನ್ ವೋಹ್ರಾ 161 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಬಾರಿಸಿ ಮಿಂಚಿದರು. ಆದರೆ ಇನ್ನೊಂದು ಬದಿಯಲ್ಲಿ ಪಟಪಟನೇ ವಿಕೆಟ್ಗಳು ಬೀಳುತ್ತಲೇ ಇದ್ದವು.
ಪ್ರಸಕ್ತ ರಣಜಿ ಋತುವಿನಲ್ಲಿ ಕ್ಲಾಸಿಕ್ ಲೆಗ್ ಸ್ಪಿನ್ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಶ್ರೇಯಸ್ ಗೋಪಾಲ್ ಮತ್ತೊಮ್ಮೆ ತಮ್ಮ ಸ್ಪಿನ್ ಜಾದು ತೋರಿಸಿದರು. ಇವರು 23 ಓವರ್ ಬೌಲಿಂಗ್ ಮಾಡಿ 73 ರನ್ ನೀಡಿ 7 ವಿಕೆಟ್ ಕಬಿಸಿದರು. ಶಿಖರ್ ಶೆಟ್ಟಿ 2 ವಿಕೆಟ್ ಕಬಳಿಸಿದರು.
325 ಹಿನ್ನಡೆಯನ್ನು ಅನುಭವಿಸಿದ ಚಂಡೀಗಢ ತಂಡಕ್ಕೆ ಕರ್ನಾಟಕ ಫಾಲೋ ಆನ್ ನೀಡಿತು. ಎರಡನೇ ಇನಿಂಗ್ಸ್ ಆರಂಭಿಸಿದ ಚಂಡೀಗಢ್ ಎರಡನೇ ಇನಿಂಗ್ಸ್ನಲ್ಲೂ ನೆಲಕಚ್ಚಿ ಬ್ಯಾಟ್ ಮಾಡುವಲ್ಲಿ ವಿಫಲವಾಯಿತು. ಆರಂಭಿಕ ಶಿವಂ ಭಾಂಬ್ರಿ ಕೊಂಚ ಕರ್ನಾಟಕದ ಬೌಲರ್ಗಳನ್ನು ಕಾಡಿದರು. ಮಧ್ಯಮ ಕ್ರಮಾಂಕದಲ್ಲಿ ನಿಖಿಲ್ ಠಾಕೂರ್ (19), ರಾಜ್ ಬಾವಾ (27), ಗೌರವ್ ಪುರಿ (13) ಮಾತ್ರ ಎರಡನೇ ಇನಿಂಗ್ಸ್ನಲ್ಲಿ ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್ಗಳು ಒಂದಂಕಿಯಲ್ಲಿ ಆಟ ಮುಗಿಸಿದರು.
ಎರಡನೇ ಇನಿಂಗ್ಸ್ನಲ್ಲೂ ಕರ್ನಾಟಕದ ಸ್ಪಿನ್ ಬೌಲರ್ಗಳು ಅಮೋಘ ಬೌಲಿಂಗ್ ದಾಳಿ ನಡೆಸಿದರು. ಶಿಖರ್ ಶೆಟ್ಟಿ 12.5 ಓವರ್ ಬೌಲಿಂಗ್ ಮಾಡಿ 61 ರನ್ ನೀಡಿ 5 ವಿಕೆಟ್ ಕಬಳಿಸಿದರು. ಶ್ರೇಯಸ್ ಗೋಪಾಲ್ 45 ರನ್ಗೆ 3 ವಿಕೆಟ್ ಕಬಳಿಸಿದರು.