ವಿಜಯ್ ಹಜಾರೆ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಕರ್ನಾಟಕ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಶನಿವಾರ ವಡೋದರಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಯಾಂಕ್ ಪಡೆ 36 ರನ್ಗಳಿಂದ ವಿದರ್ಭ ತಂಡವನ್ನು ಮಣಿಸಿ ಐದನೇ ಬಾರಿಗೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಡುವ ವಿದರ್ಭ ಕನಸಿಗೆ ಪೆಟ್ಟು ಬಿದ್ದಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ನಿಗದತಿ 50 ಓವರ್ಗಳಲ್ಲಿ 6 ವಿಕೆಟ್ಗೆ 348 ರನ್ ಕಲೆ ಹಾಕಿತು. ಸವಾಲಿನ ಮೊತ್ತವನ್ನು ಹಿಂಬಾಲಿಸಿದ ವಿದರ್ಭ 48.2 ಓವರ್ಗಳಲ್ಲಿ 312 ರನ್ಗಳಿಗೆ ಸರ್ವಪತನ ಕಂಡಿತು.

ಸವಾಲಿನ ಗುರಿಯನ್ನು ಬೆನ್ನಟ್ಟಿದ ವಿದರ್ಭ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 32 ರನ್ ಆಗಿದ್ದಾಗ ಯಶ್ ರಾಥೋಡ್ ಔಟ್ ಆದರು. ಎರಡನೇ ವಿಕೆಟ್ಗೆ ಧ್ರುವ್ ಶೋರೆ ಜೊತೆ ಸೇರಿದ ನಾಯಕ ಕರುಣ್ ನಾಯರ್ ಎರಡನೇ ವಿಕೆಟ್ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಎರಡನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವನ್ನು ನೀಡಿತು.
ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕರುಣ್ ನಾಯರ್ ತವರಿನ ತಂಡದ ವಿರುದ್ಧ ಮಂಕಾದರು. ಕೇವಲ 27 ರನ್ ಬಾರಿಸಿ ಪ್ರಸಿದ್ಧ ಕೃಷ್ಣಾಗೆ ಬೋಲ್ಡ್ ಆದರು. ಜೀತೇಶ್ ಶರ್ಮಾ (34) ಕೊಂಚ ಕರ್ನಾಟಕದ ಬೌಲರ್ಗಳನ್ನು ಕಾಡಿದರು. ಹರ್ಷಾ ದುಬೆ (63) ಅರ್ಧಶತಕ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಬಿಟ್ಟರೆ ಉಳಿದ ಎಲ್ಲ ಬ್ಯಾಟರ್ಗಳು ಬಂದು ಹೋಗುವ ಸಂಪ್ರದಾಯ ಮುಗಿಸಿದರು.
ವಿದರ್ಭ ತಂಡದ ಆರಂಭಿಕ ಆಟಗಾರ ಧ್ರುವ್ ಶೋರೆ ಅಮೋಘ ಬ್ಯಾಟಿಂಗ್ ನಡೆಸಿದರು. ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿದ ಧ್ರುವ್ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 110 ರನ್ ಬಾರಿಸಿ ಔಟ್ ಆದರು.
ಕರ್ನಾಟಕದ ಪರ ವಾಸುಕಿ ಕೌಶಿಕ್, ಪ್ರಸಿದ್ಧ ಕೃಷ್ಣಾ, ಅಭಿಲಾಷ್ ಶೆಟ್ಟಿ ತಲಾ ಮೂರು ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಆರಂಭ ಸಹ ಕಳಪೆಯಾಗಿತ್ತು. ದೇವದತ್ ಪಡಿಕ್ಕಲ್ (8) ಬೇಗನೆ ಪೆವಿಲಿಯನ್ ಸೇರಿದರು. ಕೆವಿ ಅನೀಶ್ ಸಹ 21 ರನ್ಗಳಿಗೆ ಆಟ ಮುಗಿಸಿದರು. ನಾಯಕ ಮಯಾಂಕ್ ಅಗರ್ವಾಲ್ 32 ರನ್ಗಳಿಗೆ ತಾಳ್ಮೆ ಕಳೆದುಕೊಂಡರು.
67 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಕರ್ನಾಟಕ ತಂಡಕ್ಕೆ ಆರ್.ಸ್ಮರಣ್ ಹಾಗೂ ಕೃಷ್ಣಾ ಶ್ರೀಜೇತ್ ಆಧಾರವಾದರು. ಈ ಜೋಡಿ ನಾಲ್ಕನೇ ವಿಕೆಟ್ಗೆ 160 ರನ್ ಕಾಣಿಕೆ ನೀಡಿತು. ಶ್ರೀಜೇತ್ 9 ಬೌಂಡರಿ, 1 ಸಿಕ್ಸರ್ ನೆರವಿನಿಂದ 78 ರನ್ ಬಾರಿಸಿ ಔಟ್ ಆದರು.
5ನೇ ವಿಕೆಟ್ಗೂ ಸ್ಮರಣ್ ಹಾಗೂ ಭರವಸೆಯ ಆಟಗಾರ ಅಭಿನವ್ ಮನೋಹರ್ ಶತಕದ ಜೊತೆಯಾಟದ ಕಾಣಿಕೆ ನೀಡಿದರು. ಒತ್ತಡದ ಸನ್ನಿವೇಶದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಆರ್ ಸ್ಮರಣ್ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 101 ರನ್ ಬಾರಿಸಿ ಔಟ್ ಆದರು.
ಅಭಿನವ್ ಮನೋಹರ್ ಸಹ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 79 ರನ್ ಸಿಡಿಸಿದರು. ಪರಿಣಾಮ ಕರ್ನಾಟಕ ಸವಾಲಿನ ಮೊತ್ತ ಕಲೆ ಹಾಕುವಲ್ಲಿ ನೆರವಾದರು.