ಕರ್ನಾಟಕ ಹಾಗೂ ಹರಿಯಾಣ ನಡುವಿನ ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಭಾನುವಾರ ನಡೆದ ಕೊನೆಯ ದಿನದಾಟದಲ್ಲಿ ಕರ್ನಾಟಕದ ಪರ ಆರ್ ಸ್ಮರಣ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಎರಡನೇ ಇನಿಂಗ್ಸ್ನಲ್ಲಿ ಸ್ಮರಣ್ ಅವರನ್ನು ಹೊರತು ಪಡಿಸಿದರೆ ಬೇರೆ ಯಾವ ಆಟಗಾರರು ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಕೊನೆಗೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಕರ್ನಾಟಕ ರಣಜಿ ಟೂರ್ನಿಯಲ್ಲಿ ನಾಕೌಟ್ ಹಂತ ತಲುಪ ಬೇಕಿದ್ದಲ್ಲಿ ಇನಿಂಗ್ಸ್ ಗೆಲುವು ಅಥವಾ 10 ವಿಕೆಟ್ಗಳಿಂದ ಜಯ ಸಾಧಿಸಿ ಬೋನಸ್ ಅಂಕವನ್ನು ಕಲೆ ಹಾಕಬೇಕಿತ್ತು. ಹರಿಯಾಣ ಫಾಲೋ ಆನ್ ಮಾರ್ಕ್ ದಾಟುತಿದ್ದಂತೆ ಈ ಕನಸು ನುಚ್ಚುನೂರಾಯಿತು. ವಿಜಯ್ ಹಜಾರೆ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಕರ್ನಾಟಕ, ಪ್ರಸಕ್ತ ರಣಜಿ ಟ್ರೋಫಿಯಲ್ಲಿ ಲೀಗ್ ಹಂತದಲ್ಲಿ ಗುಡ್ ಬೈ ಹೇಳಿದೆ. ಕರ್ನಾಟಕ ಆಡಿದ ಏಳು ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, 20 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಹೊಂದಿದೆ.

ಭಾನುವಾರ ಕರ್ನಾಟಕ 3 ವಿಕೆಟ್ಗೆ 108 ರನ್ಗಳಿಂದ ಆಟ ಮುದುವರೆಸಿತು. ಭರವಸೆಯ ಆಟಗಾರ ದೇವದತ್ ಪಡಿಕ್ಕಲ್ ಶನಿವಾರದ ಮೊತ್ತಕ್ಕೆ ಎರಡು ರನ್ ಸೇರಿಸಿ 43 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಒಂದು ಹಂತದಲ್ಲಿ ಕರ್ನಾಟಕ 164 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ತಂಡಕ್ಕೆ ಯುವ ಜೋಡಿ ಆಧಾರವಾಯಿತು. ಮಧ್ಯಮ ಕ್ರಮಾಂಕದ ಸ್ಮರಣ್ ಹಾಗೂ ಹಾರ್ದಿಕ್ ರಾಜ್ ಸಮಯೋಜಿತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 24 ಓವರ್ ವಿಕೆಟ್ ಬೀಳದಂತೆ ನೋಡಿಕೊಂಡಿತು. ಅಲ್ಲದೆ 98 ರನ್ಗಳ ಜೊತೆಯಾಟದ ಕಾಣಿಕೆ ನೀಡಿತು. ಹಾರ್ದಿಕ್ ರಾಜ್ 4 ಬೌಂಡರಿ ಸೇರಿದಂತೆ 40 ರನ್ ಬಾರಿಸಿ ಔಟ್ ಆದರು. ಉಳಿದಂತೆ ಕೆಳ ಕ್ರಮಾಂಕದ ಆಟಗಾರರು ಸ್ಥಿರ ಪ್ರದರ್ಶನ ನೀಡಲಿಲ್ಲ. 294 ರನ್ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದಾಗ ಅಂಪೈರ್ ಪಂದ್ಯವನ್ನು ಡ್ರಾ ಎಂದು ಘೋಷಿಸಿದರು.
ಕರ್ನಾಟಕದ ಪರ ಭರವಸೆಯ ಆಟಗಾರ ಆರ್ ಸ್ಮರಣ್ ತಮ್ಮ ಅಮೋಘ ಬ್ಯಾಟಿಂಗ್ ಕೊನೆಯ ಲೀಗ್ ಪಂದ್ಯದಲ್ಲೂ ಮುಂದುವರೆಸಿದರು. ಇವರು 217 ಎಸೆತಗಳನ್ನು ಎದುರಿಸಿದ 14 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 133 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಹರಿಯಾಣ ಪರ ಅಂಶುಲ್ ಕಾಂಬೋಜ್ 3, ಅನುಜ್ ತಕರಾಲ್ ಹಾಗೂ ಜಯಂತ್ ಯಾದವ್ ತಲಾ ಎರಡು ವಿಕೆಟ್ ಪಡೆದರು.
ರಣಜಿ ಟೂರ್ನಿಯ ಸಿ ಗುಂಪಿನಿಂದ ಹರಿಯಾಣ ಹಾಗೂ ಕೇರಳ ತಂಡಗಳು ನಾಕೌಟ್ ಹಂತವನ್ನು ಪ್ರವೇಶಿಸಿವೆ. ಹರಿಯಾಣ ಆಡಿದ 7 ಪಂದ್ಯಗಳಲ್ಲಿ 3 ಜಯ, 4 ಡ್ರಾ ಸಾಧಿಸಿದ್ದು 29 ಅಂಕಗಳನ್ನು ಕಲೆ ಹಾಕಿದೆ. ಇನ್ನು ಕೇರಳ ಆಡಿದ 7 ಪಂದ್ಯಗಳಲ್ಲಿ 3 ಜಯ ಸಾಧಿಸಿದಂತೆ 28 ಅಂಕಗಳನ್ನು ಕಲೆ ಹಾಕಿದೆ.