ಭರ್ಜರಿ ಫಾರ್ಮ್ನಲ್ಲಿರುವ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯಲ್ಲಿ ಮತ್ತೊಂದು ಗೆಲುವು ದಾಖಲಿಸಿದೆ. ಶುಕ್ರವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ 60 ರನ್ಗಳಿಂದ ಸೌರಾಷ್ಟ್ರ ತಂಡವನ್ನು ಮಣಿಸಿ ಮುನ್ನಡೆ ಸಾಧಿಸಿದೆ. ಕರ್ನಾಟಕ ಆಡಿದ 6 ಪಂದ್ಯಗಳಲ್ಲಿ 5 ಜಯ ದಾಖಲಿಸಿದ್ದು, 20 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಮಯಾಂಕ್ ಪಡೆ ಅಮೋಘ ಪ್ರದರ್ಶನ ನೀಡಿ ಗಮನ ಸೆಳೆಯಿತು.
ಮೊದಲು ಬ್ಯಾಟ್ ಮಾಡಿದ ಕರ್ನಾಟಕ 50 ಓವರ್ಗಳಲ್ಲಿ 7 ವಿಕೆಟ್ಗೆ 349 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸೌರಾಷ್ಟ್ರ 47.5 ಓವರ್ಗಳಲ್ಲಿ 289 ರನ್ಗಳಿಗೆ ಆಲೌಟ್ ಆಯಿತು. ಸೌರಾಷ್ಟ್ರ ಈ ಸರಣಿಯಲ್ಲಿ ಆಡಿದ 6 ಪಂದ್ಯಗಳಲ್ಲಿ 3 ಜಯ ದಾಖಲಿಸಿದ್ದು, 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕದ ಆರಂಭ ಸಾಧಾರಣವಾಗಿತ್ತು. ನಿಕ್ಕಿನ ಜೋಸ್ 34 ರನ್ಗಳಿಗೆ ಆಟ ಮುಗಿಸಿದರು. ಪ್ರಸಕ್ತ ಸರಣಿಯಲ್ಲಿ ಭರ್ಜರಿ ಫಾರ್ಮ್ನಲ್ಲಿರುವ ಮಯಾಂಕ್ ಅಗರ್ವಾಲ್ ಹಾಗೂ ಅನೀಶ್ ಕೆವಿ ಎರಡನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರಾದರು. ಮಯಾಂಕ್ 65 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ 69 ರನ್ ಸಿಡಿಸಿ ಔಟ್ ಆದರು.
ಮಧ್ಯಮ ಕ್ರಮಾಂಕದ ಆರ್ ಸ್ಮರಣ್ 40, ಕೆಎಲ್ ಶ್ರೀಜೇತ್ 29 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಐಪಿಎಲ್ನಲ್ಲಿ ಆಡಿರುವ ಅನುಭವ ಹೊಂದಿರುವ ಆಟಗಾರ ಅಭಿನವ್ ಮನೋಹರ್ ತಮ್ಮ ನೈಜ ಆಟವನ್ನು ಆಡಿದರು. ಇವರು 28 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 44 ರನ್ ಸಿಡಿಸಿದರು. ಯುವ ಆಟಗಾರ ಹಾರ್ದಿಕ್ ರಾಜ್ 27 ರನ್ ಬಾರಿಸಿದರು.
ಮಧ್ಯಮ ಕ್ರಮಾಂಕದ ಭರವಸೆಯ ಆಟಗಾರ ಅನೀಶ್ ಕೆ.ವಿ. 83 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ 93 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸುವಲ್ಲಿ ನೆರವಾದರು.
ಗುರಿಯನ್ನು ಬೆನ್ನಟ್ಟಿದ ಸೌರಾಷ್ಟ್ರ ತಂಡದ ಆರಂಭ ಉತ್ತಮಾಗಿತ್ತು. ಆರಂಭಿಕರಾದ ಹಾರ್ವಿಕ್ ದೇಸಾಯಿ ಹಾಗೂ ತರಂಗ್ ಗೋಹಿಲ್ (33) ಮೊದಲ ವಿಕೆಟ್ಗೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ವಿಕೆಟ್ಗೆ ಹಾರ್ವಿಕ್ ದೇಸಾಯಿ ಹಾಗೂ ಜಯ್ ಗೋಹಿಲ್ (40) ಉತ್ತಮ ಜೊತೆಯಾಟದ ಕಾಣಿಕೆ ನೀಡಿ, ಗೆಲುವಿನ ಆಸೆ ಚಿಗುರಿಸಿದರು. ಈ ಜೋಡಿ ಎರಡನೇ ವಿಕೆಟ್ಗೆ 102 ರನ್ ಸೇರಿಸಿತು.

ಮೂರನೇ ವಿಕೆಟ್ಗೆ ಹಾರ್ವಿಕ್ ಹಾಗೂ ಅರ್ಪಿತ್ ವಾಸವಾದ (40) ಮೂರನೇ ವಿಕೆಟ್ಗೆ 89 ರನ್ ಕಾಣಿಕೆ ನೀಡಿದರು. ಉಳಿದ ಯಾವ ಬ್ಯಾಟರ್ಗಳು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಆರಂಭಿಕ ಆಟಗಾರ ಹಾರ್ವಿಕ್ ದೇಸಾಯಿ 102 ಎಸೆತಗಳಲ್ಲಿ 10 ಬೌಂಡರಿ, 4 ಸಿಕ್ಸರ್ ಸಹಾಯದಿಂದ 114 ರನ್ ಸಿಡಿಸಿ ಔಟ್ ಆದರು.
ಕರ್ನಾಟಕದ ಸ್ಟಾರ್ ವೇಗದ ಬೌಲರ್ ವಾಸುಕಿ ಕೌಶಿಕ್ 51 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಸ್ಪಿನ್ನರ್ ಶ್ರೇಯಸ್ ಗೋಪಾಲ್ 63 ರನ್ ನೀಡಿ 4 ವಿಕೆಟ್ ಪಡೆದರು.