ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್ಗೆ ಕರ್ನಾಟಕ ಅರ್ಹತೆ ಪಡೆದಿದೆ. ಲಕ್ನೋದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಪ್ರಶಸ್ತಿ ಸುತ್ತು ಪ್ರವೇಶಿಸಿದೆ. ಅಂತಿಮ ಪಂದ್ಯದಲ್ಲಿ ಕರ್ನಾಟಕ, ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿರುವ ಜಮ್ಮು ಕಾಶ್ಮೀರ ವಿರುದ್ಧ ಕಾದಾಟ ನಡೆಸಲಿದೆ. ಕರ್ನಾಟಕ 15ನೇ ಬಾರಿಗೆ ಟೂರ್ನಿಯ ಫೈನಲ್ ತಲುಪಿ ಇತಿಹಾಸ ನಿರ್ಮಿಸಿದೆ.
ಗುರುವಾರ ನಡೆದ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದ ಕೊನೆಯ ದಿನದಂದು ಕರ್ನಾಟಕ 6 ವಿಕೆಟ್ಗೆ 299 ರನ್ಗಳಿಂದ ಆಟ ಮುಂದುವರೆಸಿ 323 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 86 ರನ್ ಸಿಡಿಸಿದರು. ಉಳಿದಂತೆ ಕರ್ನಾಟಕದ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಉತ್ತರಾಖಂಡ ಪರ ಮಯಾಂಕ್ ಮಿಶ್ರಾ 4 ವಿಕೆಟ್ ಉರುಳಿಸಿದರು.

ಸವಾಲಿನ ಗುರಿಯನ್ನು ಬೆನ್ನಟ್ಟಿದ ಉತ್ತರಾಖಂಡ ಆರಂಭ ಕಳಪೆಯಾಗಿತ್ತು. ಆರಂಭಿಕ ಪ್ರಶಾಂತ್ ಚೋಪ್ರಾ (0) ರನ್ ಬರವನ್ನು ಅನುಭವಿಸಿದರು. ಎರಡನೇ ವಿಕೆಟ್ಗೆ ಭೂಪೇನ್ ಲಾಲ್ವಾನಿ (15 ) ಮತ್ತು ಅವನೀಶ್ ಸುಧಾ ಜೋಡಿ ಕೊಂಚ ತಂಡಕ್ಕೆ ಆಧಾರವಾಯಿತು. ಅವನೀಶ್ ಸುಧಾ 66 ರನ್ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಸೌರಭ್ ರಾವತ್ 53 ರನ್ ಬಾರಿಸಿದರೆ, ಅಭಯ್ ನೇಗಿ ಅಜೇಯ 57 ರನ್ ಸಿಡಿಸಿದರು. ಅಂತಿಮವಾಗಿ ಉತ್ತರಾಖಂಡ 2ನೇ ಇನಿಂಗ್ಸ್ನಲ್ಲಿ 6 ವಿಕೆಟ್ಗೆ 260 ರನ್ ಸಿಡಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ದ್ವಿಶತಕ ಬಾರಿಸಿದ ಕರ್ನಾಟಕ ತಂಡದ ನಾಯಕ ದೇವದತ್ ಪಡಿಕ್ಕಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿದೆ.
ಮೊದಲ ಇನಿಂಗ್ಸ್ನಲ್ಲಿ ಭಾರಿ ಮುನ್ನಡೆ ಸಾಧಿಸಿದ್ದ ಕರ್ನಾಟಕ ನಿರೀಕ್ಷೆಯಂತೆ ಫೈನಲ್ಗೆ ಪ್ರವೇಶ ಪಡೆದಿದೆ. ಬಿಸಿಸಿಐ ಮೂಲಗಳ ಪ್ರಶಸ್ತಿ ಸುತ್ತಿನ ಕಾದಾಟವನ್ನು ಉತ್ತರ ಕರ್ನಾಟಕದ ಭಾಗದಲ್ಲಿ ನಡೆಸಲು ಚಿಂತನೆ ನಡೆದಿದ್ದು, ಹುಬ್ಬಳ್ಳಿ ಈ ಪಂದ್ಯಕ್ಕೆ ಆತಿಥ್ಯ ನೀಡುವ ಸಾಧ್ಯತೆ ಇದೆ.
91ನೇ ರಣಜಿ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿದ್ದು ಕರ್ನಾಟಕ 15ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಅಲ್ಲದೆ ಕರ್ನಾಟಕ 8 ಬಾರಿ ಟ್ರೋಫಿ ಎತ್ತಿ ಸಂಭ್ರಮಿಸಿದೆ. ಕರ್ನಾಟಕ 2015ರಲ್ಲಿ ಕೊನೆಯ ಬಾರಿಗೆ ತಮಿಳುನಾಡನ್ನು ಮಣಿಸಿ ರಣಜಿ ಟ್ರೋಫಿಯನ್ನು ಎತ್ತಿ ಸಂಭ್ರಮಿಸಿದೆ. ಇನ್ನು ಕರ್ನಾಟಕ, ಜಮ್ಮು ಕಾಶ್ಮೀರ ವಿರುದ್ಧ ಆಡಿದ ನಾಲ್ಕು ಪಂದ್ಯಗಳನ್ನು ಗೆದ್ದು ಬೀಗಿದೆ. ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ನಡುವಣ ಫೈನಲ್ ಪಂದ್ಯ ಫೆಬ್ರವರಿ 24 ರಿಂದ ಆರಂಭವಾಗಲಿದೆ.