ಇತ್ತೀಚಿಗೆ ವಡೋದರಾದಲ್ಲಿ ನಡೆದ ವಿಜಯ್ ಹಜಾರೆ ಏಕದಿನ ಸರಣಿಯನ್ನು ಗೆದ್ದು ಉತ್ಸಾಹದಲ್ಲಿರುವ ಕರ್ನಾಟಕ ತಂಡ, ರಣಜಿ ಟ್ರೋಫಿಯಲ್ಲಿ ಗುರುವಾರ ಪಂಜಾಬ್ ವಿರುದ್ಧ ಕಾದಾಟ ನಡೆಸಲಿದೆ. ನಾಕೌಟ್ ಹಂತ ಪ್ರವೇಶಿಸಲು ಕರ್ನಾಟಕಕ್ಕೆ ಈ ಪಂದ್ಯ ಮಹತ್ವದಾಗಿದೆ. ಅಲ್ಲದೆ ತಂಡದ ಸ್ಟಾರ್ ಆಟಗಾರರು ಭರ್ಜರಿ ಫಾರ್ಮ್ನಲ್ಲಿದ್ದು ಗೆಲುವಿನ ವಿಶ್ವಾಸವನ್ನು ಮೂಡಿಸಿದ್ದಾರೆ. ರಣಜಿ ಟ್ರೋಫಿಯ ಸಿ ಗುಂಪಿನ ಪಂದ್ಯ ಎಲ್ಲರ ಗಮನ ಸೆಳೆದಿದೆ.
ಕರ್ನಾಟಕ ಸಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 5 ಪಂದ್ಯಗಳಲ್ಲಿ ಒಂದು ಜಯ, 4 ಡ್ರಾ ಸಾಧಿಸಿದ್ದು, 12 ಅಂಕ ಕಲೆ ಹಾಕಿದೆ. ಇನ್ನು ಪಂಜಾಬ್ ಆಡಿದ 5 ಪಂದ್ಯಗಳಲ್ಲಿ 1 ಜಯ, 2 ಡ್ರಾ, 2 ಸೋಲು ಕಂಡಿದ್ದು, 11 ಅಂಕ ಕಲೆ ಹಾಕಿ ಐದನೇ ಸ್ಥಾನದಲ್ಲಿದೆ. ಕರ್ನಾಟಕ ಬಿಹಾರ್ ವಿರುದ್ಧದ ಗೆಲುವು ಸಾಧಿಸಿದ್ದು ಬಿಟ್ಟರೆ, ಅಂಕಗಳನ್ನು ಹಂಚಿಕೊಳ್ಳುವಲ್ಲಿ ಮಾತ್ರ ಸಫಲವಾಗಿದೆ.

ಕರ್ನಾಟಕ ತಂಡದಲ್ಲಿರುವ ಸ್ಟಾರ್ ಆಟಗಾರರು ಸದ್ಯ ಅಮೋಘ ಟಚ್ನಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಈ ಆಟಗಾರರು ಮತ್ತೊಂದು ಪರೀಕ್ಷೆಗೆ ಸಜ್ಜಾಗಿದ್ದಾರೆ. ಏಕದಿನ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ ಆಟಗಾರರು ರಣಜಿ ಟ್ರೋಫಿಯಲ್ಲೂ ನೀಡುವ ಅನಿವಾರ್ಯತೆ ಇದೆ ಅಂದಾಗ ಮಾತ್ರ ಗೆಲುವಿನ ಆಸೆ ಈಡೇರುತ್ತದೆ. ಮಯಾಂಕ್ ಅಗರ್ವಾಲ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್, 5 ಪಂದ್ಯ, 203 ರನ್,
ನಿಕಿನ್ ಜೋಸ್, 5 ಪಂದ್ಯ, 191 ರನ್,
ಅಭಿನವ್ ಮನೋಹರ್, 3 ಪಂದ್ಯ, 146 ರನ್,
ಕರ್ನಾಟಕದ ಬೌಲಿಂಗ್ ವಿಭಾಗ ಸಹ ಬಲಾಢ್ಯವಾಗಿದೆ. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್ ಮಾಡುವ ಕಲೆಯನ್ನು ಬೌಲರ್ಗಳು ಕರಗತ ಮಾಡಿಕೊಂಡಿದ್ದಾರೆ. ಶ್ರೇಯಸ್ ಗೋಪಾಲ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿದ್ದರು. ಈ ಪ್ರದರ್ಶನವನ್ನೇ ಮುಂದುವರಿಸಬೇಕಿದೆ. ಇನ್ನು ವೇಗದ ಬೌಲರ್ಗಳ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬೌಲಿಂಗ್ ನಡೆಸಬೇಕಿದೆ.

ವಾಸುಕಿ ಕೌಶಿಕ್, 5 ಪಂದ್ಯ, 17 ವಿಕೆಟ್
ಶ್ರೇಯಸ್ ಗೋಪಾಲ್, 5 ಪಂದ್ಯ, 17 ವಿಕೆಟ್
ವಿದ್ಯಾಧರ್ ಪಾಟೀಲ್, 4 ಪಂದ್ಯ, 10 ವಿಕೆಟ್
ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಬಲವಾಗಿದೆ. ತಂಡದಲ್ಲಿರುವ ಸ್ಟಾರ್ ಆಟಗಾರರು ಬ್ಯಾಟಿಂಗ್ನಿಂದ ತಂಡಕ್ಕೆ ಆಧಾರವಾಗಿದ್ದಾರೆ. ಈ ತಂಡಕ್ಕೆ ಈ ಬ್ಯಾಟರ್ಗಳೇ ಆಧಾರ. ಜಸ್ಕರಣ್ವೀರ್ ಸಿಂಗ್ , ಅನ್ಮೋಲ್ ಪ್ರೀತ್ ಯಾವುದೇ ಬೌಲಿಂಗ್ ಲೈನ್ ಅಪ್ ನಿದ್ದೆ ಗೆಡಿಸಬಲ್ಲರು. ಆದರೆ ಈ ತಂಡಕ್ಕೆ ಬೌಲಿಂಗ್ ವಿಭಾಗದ್ದೇ ದೊಡ್ಡ ಚಿಂತೆಯಾಗಿದೆ.
ಜಸ್ಕರಣ್ವೀರ್ ಸಿಂಗ್ ಪೌಲ್, 4 ಪಂದ್ಯ, 332 ರನ್
ಅನ್ಮೋಲ್ ಪ್ರೀತ್ ಸಿಂಗ್, 5 ಪಂದ್ಯ, 324 ರನ್
ಸಲೀಲ್ ಅರೋರಾ, 2 ಪಂದ್ಯ, 274 ರನ್
ಗುರ್ನೂರ್ ಬ್ರಾರ್, 5 ಪಂದ್ಯ, 20 ವಿಕೆಟ್
ಮಾಯಾಂಕ್ ಮಾರ್ಕಂಡೆ, 5 ಪಂದ್ಯ, 18 ವಿಕೆಟ್
ಎಮನ್ಜೋತ್ ಸಿಂಗ್ ಚಾಹಲ್, 2 ಪಂದ್ಯ, 8 ವಿಕೆಟ್