ಆರ್ಸಿಬಿ ಐಪಿಎಲ್ ಮೆಗಾ ಹರಾಜಿನಲ್ಲಿ ಸದ್ದು ಮಾಡಬೇಕಿತ್ತು. ಆದರೆ ಸೌದಿಯಲ್ಲಿ ಸದ್ದು ಮಾಡದೇ ಹರಾಜು ಮುಗಿದ ಮೇಲೆ ಭಾರೀ ಚರ್ಚೆ ಆಗುತ್ತಿದೆ. ಹರಾಜು ಮುಗಿಯುತ್ತಿದ್ದಂತೆ ಆರ್ಸಿಬಿ ಮ್ಯಾನೇಜ್ಮೆಂಟ್ ಸಾಮಾಜಿಕ ತಾಣದಲ್ಲಿ ಹಿಂದಿ ಪೇಜ್ ಒಂದನ್ನು ಆರಂಭಿಸಿತು. ಈ ಪೇಜ್ ಓಪನ್ ಆಗುತ್ತಿದ್ದಂತೆ ಭಾರೀ ಜನಾಕ್ರೋಶಕ್ಕೆ ಕಾರಣವಾಗಿದೆ. ಬಿಡ್ಡಿಂಗ್ನಲ್ಲಿ ಸರಿಯಾಗಿ ಕನ್ನಡದವರಿಗೆ ಮಣೆ ಹಾಕುತ್ತಿಲ್ಲ ಎಂಬ ಆಕ್ರೋಶ, ಒಂದು ಕಡೆ ಆದರೆ ಈಗ ಆರ್ಸಿಬಿ ಮ್ಯಾನೇಜ್ಮೆಂಟ್ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.
ಈ ಎಡವಟ್ಟು ಸಾಮಾಜಿಕ ತಾಣದಲ್ಲಿ ಕಿಚ್ಚು ಹಚ್ಚಿಸಿದೆ. ಆರ್ಸಿಬಿ ಹಿಂದಿ ಪೇಜ್ ಓಪನ್ ಮಾಡಿದಕ್ಕೆ ಸಾಮಾಜಿಕ ತಾಣದಲ್ಲಿ ಹಲವು ಚರ್ಚೆಗಳು ಆರಂಭವಾದವು. ಈಗ ಕನ್ನಡಪರ ಸಂಘಗಳು ಸಹ ಇದಕ್ಕೆ ಕೈ ಜೋಡಿಸಿವೆ. ಬೆಂಗಳೂರು ಫ್ರಾಂಚೈಸಿ ಹಿಂದಿ ಪೇಜ್ ಯಾವ ಕಾರಣಕ್ಕೆ ತೆರೆದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿಎ ನಾರಾಯಣ ಗೌಡ ಕಿಡಿಕಾರಿದ್ದಾರೆ. ಹಿಂದಿ ಗುಲಮಗಿರಿಯನ್ನು ಹೇರುವುದೇ ನಿಮ್ಮ ಉದ್ದೇಶವಾಗಿದ್ದರೆ ಕರ್ನಾಟಕ ಬಿಟ್ಟು ತೊಲಗಿ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸುತ್ತಾ ಬಂದಿದ್ದಾರೆ. ಆರ್ಸಿಬಿಗೆ ಇರುವಷ್ಟು ಅಭಿಮಾನಿಗಳು ಬೇರೆ ತಂಡಗಳಿಗೆ ಇಲ್ಲ. ಹೀಗಾಗಿ ಈ ತಂಡದ ಬ್ರ್ಯಾಂಡ್ ವ್ಯಾಲ್ಯೂ ಸಹ ದಿನೇ ದಿನೇ ಏರಿಕೆ ಆಗುತ್ತಿದೆ. ಐಪಿಎಲ್ನ ಅತ್ಯಂತ ಶ್ರೀಮಂತ ತಂಡಗಳಲ್ಲಿ ಆರ್ಸಿಬಿಗೂ ಸ್ಥಾನವಿದೆ. ಈ ಸ್ಥಾನ ನೀಡುವಲ್ಲಿ ಕನ್ನಡಿಗರ ಪಾತ್ರವೂ ಮುಖ್ಯ ಎಂದು ನಾರಾಯಣಗೌಡ ತಿಳಿಸಿದ್ದಾರೆ.
ಆರ್ಸಿಬಿ ತಂಡಕ್ಕೆ ದೇಶದ ವಿವಿಧ ಭಾಗಗಳಲ್ಲೂ ಅಭಿಮಾನಿಗಳು ಇದ್ದಾರೆ. ಹಾಗಂದ ಮಾತ್ರಕ್ಕೆ ಹಿಂದಿಯಲಷ್ಟೇ ಪೇಜ್ ಏಕೆ ಮಾಡಿದ್ದೀರಿ. ನೀವು ಬೇರೆ ಭಾಷೇಗಳಲ್ಲೂ ಮಾಡಬಹುದಿತ್ತು. ಆದರೆ ಅದನ್ನು ಬಿಟ್ಟು ನೀವು ಹಿಂದಿ ಪೇಜ್ ಓಪನ್ ಮಾಡಿದ್ದು ಏಕೆ ಎಂಬ ಪ್ರಶ್ನೆಯನ್ನು ಕರವೆ ಅಧ್ಯಕ್ಷರು ಕೇಳಿದ್ದಾರೆ.
ಈ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಸಿಬಿಯ ಪ್ರತಿ ಚಲನವಲನಗಳ ಬಗ್ಗೆ ನಾವು ಗಮನ ಹರಿಸುತ್ತೇವೆ. ಆರ್ಸಿಬಿ ತಂಡವನ್ನು ನಾವು ಬಹಳ ಗೌರವಿಸುತ್ತೇವೆ. ಆರ್ಸಿಬಿ ಬೆಂಗಳೂರು ತಂಡ ಎನ್ನುವ ಕಾರಣಕ್ಕೆ ನಮ್ಮ ಗೌರವವಿದೆ. ಇನ್ನು ಆ ತಂಡ ಎಷ್ಟೇ ಸಾರಿ ಸೋತರೂ ಸಹ ನಮ್ಮ ತಂಡದ ಮೇಲಿನ ಜನರ ಪ್ರೀತಿ ಕಡಿಮೆ ಆಗಿಲ್ಲ. ಈ ಬಗ್ಗೆ ಈಗಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ತಿಳಿಸಲಾಗಿದ್ದು, ಕನ್ನಡಿಗರ ಬಗ್ಗೆ ನಿಮಗೆ ಅಭಿಮಾನ ಇರಲಿ. ಕನ್ನಡಿಗರಿಗೆ ನೋವು ಮಾಡಬೇಡಿ ಎಂದಿದ್ದಾರೆ. ಆರ್ಸಿಬಿ ಬದಲಾವಣೆ ಮಾಡದೇ ಇದಲ್ಲಿ ಕಾರ್ಯದರ್ಶಿಯನ್ನು ಕರೆದು ನೋಟೀಸ್ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಆರ್ಸಿಬಿ ಈ ಬಾರಿ ಐಪಿಎಲ್ ಹರಾಜಿನಲ್ಲಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಿದೆ. ಈ ಮೂಲಕ ಚೊಚ್ಚಲ ಪ್ರಶಸ್ತಿ ಗೆಲುವಿನ ಕನಸು ಕಣುತ್ತಿದೆ.