ಬೆಂಗಳೂರು: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದ ಖುಷಿಯ ಬೆನ್ನಲ್ಲೇ ಕನ್ನಡಿಗರಿಗೂ ಖುಷಿಯ ಸಂಗತಿಯೊಂದಿದೆ. ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ರಾಜ್ಯ ತಂಡ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದೆ. ಕರ್ನಾಟಕ ರಣಜಿ ಟ್ವೀಟ್ ಖಾತೆ ಈ ವಿಚಾರವನ್ನು ಖಾತರಿಪಡಿಸಿದೆ.
'ಗಬ್ಬಾ'ದಲ್ಲಿ ಮನಗೆದ್ದ ಭಾರತೀಯ ಬಡ ಆಟಗಾರರ ಮನಮುಟ್ಟುವ ಕತೆ!
ಕರುಣ್ ನಾಯರ್ ನಾಯಕತ್ವದಲ್ಲಿರುವ ಕರ್ನಾಟಕ ತಂಡ ಕೊನೇ ಲೀಗ್ ಪಂದ್ಯ ಆಡಿದ್ದು ಜನವರಿ 18ರ ಸೋಮವಾರ ಉತ್ತರಪ್ರದೇಶದ ವಿರುದ್ಧ. ಈ ಪಂದ್ಯದಲ್ಲಿ ಕರ್ನಾಟಕ 5 ವಿಕೆಟ್ ಸುಲಭ ಗೆಲುವು ಕಂಡಿತ್ತು. ಇದರೊಂದಿಗೆ ರಾಜ್ಯ ತಂಡ ಎಲೈಟ್ ಗ್ರೂಪ್ 'ಎ'ಯಲ್ಲಿ ಪಂಜಾಬ್ ಬಳಿಕ ದ್ವಿತೀಯ ಸ್ಥಾನದಲ್ಲಿ ಲೀಗ್ ಹಂತದ ಸ್ಪರ್ಧೆ ಮುಗಿಸಿತ್ತು.
ಗ್ರೂಪ್ 'ಎ'ಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ 5ರಲ್ಲಿ 5 ಪಂದ್ಯ ಗೆದ್ದು 20 ಪಾಯಿಂಟ್ಸ್ ಕಲೆ ಹಾಕಿದೆ. ದ್ವಿತೀಯ ಸ್ಥಾನದಲ್ಲಿರುವ ಕರ್ನಾಟಕ ತಂಡ 5ರಲ್ಲಿ 4 ಪಂದ್ಯ ಗೆದ್ದು 16 ಪಾಯಿಂಟ್ಸ್ ಕಲೆ ಹಾಕಿದೆ. ತಮಿಳುನಾಡು ತಂಡ ಕೂಡ ಈಗಾಗಲೇ ಕ್ವಾರ್ಟರ್ ಫೈನಲ್ ಪ್ರವೇಶ ಖಾತರಿಪಡಿಸಿಕೊಂಡಿದೆ.
ಭಾರತ vs ಆಸ್ಟ್ರೇಲಿಯಾ: ಅಂತಿಮ ಟೆಸ್ಟ್ ಪಂದ್ಯ ಗೆಲ್ಲಲು ಕಾರಣವಾದ ಐದು ಅಂಶಗಳು
ಕ್ವಾರ್ಟರ್ ಫೈನಲ್ ಎಲ್ಲಾ ಪಂದ್ಯಗಳು ಅಹ್ಮದಾಬಾದ್ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಕೂಡ ಇದೇ ಸ್ಟೇಡಿಯಂನಲ್ಲಿ ನಡೆಯಲಿದೆ. ಜನವರಿ 26ರಂದು ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳು, ಜನವರಿ 27ರಂದು ಎರಡು ಕಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ.