ವಿಜಯ್ ಹಜಾರೆ ಏಕದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕರ್ನಾಟಕದ ಭರವಸೆಯ ಆಟಗಾರ ರವಿಚಂದ್ರನ್ ಸ್ಮರಣ್ ರಣಜಿ ಟ್ರೋಫಿಯಲ್ಲಿ ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮುಂದುವರೆಸಿದ್ದಾರೆ. ಬೆಂಗಳೂರಿನ ಎಂ ಚಿನಸ್ವಾಮಿ ಅಂಗಳದಲ್ಲಿ ಗುರವಾರದಿಂದ ಆರಂಭವಾಗಿರುವ ಸಿ ಗುಂಪಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ಸಂಘಟಿತ ಪ್ರದರ್ಶನ ನೀಡಿದ, ಪಂಜಾಬ್ ವಿರುದ್ಧ ಭಾರೀ ಮುನ್ನಡೆಯತ್ತ ದಾಪು ಗಾಲು ಇಟ್ಟಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಕರ್ನಾಟಕ, ಪಂಜಾಬ್ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿತು. ಪಂಜಾಬ್ ಮೊದಲ ಇನಿಂಗ್ಸ್ನಲ್ಲಿ 29 ಓವರ್ಗಳಲ್ಲಿ 55 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕ ತಂಡ ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ಗೆ 199 ರನ್ ಸಿಡಿಸಿ, 144 ರನ್ ಮುನ್ನಡೆ ಕಾಯ್ದುಕೊಂಡಿದೆ. ಶುಕ್ರವಾರದ ಆಟದಲ್ಲಿ ಕರ್ನಾಟಕ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿ ಮುನ್ನಡೆಯನ್ನು ಹೆಚ್ಚಿಸಿಕೊಳ್ಳುವ ಆಸೆಯನ್ನು ಹೊಂದಿದೆ.

ಮೊದಲು ಬೌಲಿಂಗ್ ಮಾಡುವ ನಾಯಕ ಮಯಾಂಕ್ ಅಗರ್ವಾಲ್ ನಿರ್ಧಾರವನ್ನು ಕರ್ನಾಟಕ ಬೌಲರ್ಗಳು ಸಮರ್ಥಿಸಿಕೊಂಡರು. ವಾಸುಕಿ ಕೌಶಿಕ್, ಅಭಿಲಾಶ್ ಶೆಟ್ಟಿ, ಪ್ರಸಿದ್ಧ ಕೃಷ್ಣ, ಇವರ ವೇಗದ ದಾಳಿಯನ್ನು ಎದುರಿಸುವಲ್ಲಿ ಹೆಣಗಾಟ ನಡೆಸಿದ ಪಂಜಾಬ್ ಬ್ಯಾಟರ್ಗಳು ಪೆವಿಲಿಯನ್ ಪರೆಡ್ ನಡೆಸಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದ ವಾಸುಕಿ ಹಾಗೂ ಅಭಿಲಾಶ್ ಅದೇ ಪ್ರದರ್ಶನವನ್ನು ಮುಂದುವರಿಸಿದರು. ಪರಿಣಾಮ ಪಂಜಾಬ್ 55 ರನ್ಗಳಿಗೆ ಸರ್ವಪತನ ಕಂಡಿತು.
ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡದ ಆರಂಭ ಉತ್ತಮಾಗಿತ್ತು. ಉತ್ತಮ ಟಚ್ನಲ್ಲಿರುವ ಮಯಾಂಕ್ ಅಗರ್ವಾಲ್ ಹಾಗೂ ಕೆವಿ ಅನೀಶ್ ಜೋಡಿ ತಂಡಕ್ಕೆ ಅರ್ಧಶತಕದ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 13.2 ಓವರ್ಗಳಲ್ಲಿ 55 ರನ್ ಸೇರಿಸಿತು. ಅನೀಶ್ 33, ಮಯಾಂಕ್ 20 ರನ್ ಸಿಡಿಸಿ ಔಟ್ ಆದರು. ಮೂರನೇ ವಿಕೆಟ್ಗೆ ದೇವದತ್ ಪಡಿಕ್ಕಲ್ ಹಾಗೂ ಆರ್.ಸ್ಮರಣ್ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ದೇವದತ್ 27 ರನ್ ಸಿಡಿಸಿದ್ದಾಗ ಔಟ್ ಆದರು.
ಆರ್. ಸ್ಮರಣ್ ತಮ್ಮ ಲಯವನ್ನು ಮುಂದುವರಿಸಿದರು. ಪಂಜಾಬ್ ತಂಡದ ಬೌಲರ್ಗಳನ್ನು ದಂಡಿಸುತ್ತಾ ಸಾಗಿದ ಸ್ಮರಣ್ ಅಬ್ಬರಿಸಿದರು. ದಿನದಾಟದಂತ್ಯಕ್ಕೆ ಅಜೇಯ 83 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರ ಕ್ಲಾಸಿಕ್ ಇನಿಂಗ್ಸ್ನಲ್ಲಿ 12 ಬೌಂಡರಿ, 1 ಸಿಕ್ಸರ್ಗಳು ಸೇರಿವೆ.
ಕರ್ನಾಟಕ ಎರಡನೇ ದಿನದಾಟದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿ 144 ರನ್ಗಳ ಮುನ್ನಡೆಯನ್ನು ಹಿಗ್ಗಿಸಿಕೊಳ್ಳಲು ಪ್ಲ್ಯಾನ್ ಮಾಡಿಕೊಂಡಿದೆ. ಎರಡನೇ ದಿನದಾಟದಲ್ಲಿ ಭರವಸೆಯ ಆಟಗಾರರು ಉತ್ತಮ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾಗಬೇಕಿದೆ. ಅಂದಾಗ ಮಾತ್ರ ಪಂಜಾಬ್ ವಿರುದ್ಧ ದೊಡ್ಡ ಗೆಲುವಿನ ಆಸೆ ಫಲಿಸುತ್ತದೆ.