
ಬೆಂಗಳೂರು, ಜನವರಿ 03: ಭಾರತ ತಂಡದ ಮಾಜಿ ವೇಗದ ಬೌಲರ್, ಕರ್ನಾಟಕ ರಣಜಿ ತಂಡದ ಕೋಚ್ ಶ್ರೀನಾಥ್ ಅರವಿಂದ್ ಅವರಿಗೆ ಪೊಲೀಸರಿಂದ ಶುಭ ಸುದ್ದಿ ಸಿಕ್ಕಿದೆ.
ಕಳೆದ ಡಿಸೆಂಬರ್ ನಲ್ಲಿ ಹೊಚ್ಚ ಹೊಸ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸಿದ್ದ ಅರವಿಂದ್ ಅವರು ಕಳೆದ ಹಲವು ದಿನಗಳಿಂದ ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳುವಾಗಿರುವ ಬಗ್ಗೆ ದೂರು ನೀಡಿದ್ದರು. ಬೈಕ್ ಕದ್ದ ಕಳ್ಳರನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ರಣಜಿ ತಂಡದ ಮಾಜಿ ಆಟಗಾರ ಎಸ್ ಅರವಿಂದ್ ಅವರ ಬುಲೆಟ್ ಬೈಕ್ ಕಳವು ಮಾಡಿದ್ದ ಆಂಧ್ರಪ್ರದೇಶ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರ್ಟಿ ನಗರದಲ್ಲಿ ವಾಸವಿದ್ದ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಅಬ್ದುಲ್ ವಹೀದ್ ಹಾಗೂ ಅಬ್ರಾರ್ ಬಂಧಿತರು.
ಕೆಲ ದಿನಗಳ ಹಿಂದೆ ಮತ್ತಿಕೆರೆಯ ಈಶ್ವರ ದೇಗುಲದ ಸಮೀಪ ನಡೆದುಕೊಂಡು ಹೋಗುತ್ತಿದ್ದ ಗೀತಾ ಎಂಬುವವರ ಬಳಿ ಚಿನ್ನದ ಸರ ಕಿತ್ತುಕೊಂಡು ಹೋಗುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದಾಗ ಕ್ರಿಕೆಟಿಗ ಅರವಿಂದ್ ಬೈಕ್ ಇನ್ನಿತರೆ 20 ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.