ಭರವಸೆಯ ಬೌಲರ್ ವಾಸುಕಿ ಕೌಶಿಕ್ ಅವರ ಮಾರಕ ದಾಳಿಗೆ ಉತ್ತರ ಪ್ರದೇಶ ನಲಗಿದೆ. ರಣಜಿ ಟೂರ್ನಿಯ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ 89 ರನ್ಗಳಿಗೆ ಮೊದಲ ಇನಿಂಗ್ಸ್ನಲ್ಲಿ ಉತ್ತರ ಪ್ರದೇಶ ತಂಡವನ್ನು ಕಟ್ಟಿ ಹಾಕಿದೆ. ಮಯಾಂಕ್ ಪಡೆಯ ಪರ ವಾಸೂಕಿ ಕೌಶಿಕ್ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ್ದಾರೆ. ಇವರು 20 ರನ್ ನೀಡಿ ಐದು ಪ್ರಮುಖ ವಿಕೆಟ್ ಪಡೆದು ಬೀಗಿದ್ದಾರೆ.
ತವರಿನಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈ ಗೊಂಡಿತು. ಈ ವೇಳೆ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಆರಂಭಿಕರು ವಿಫಲರಾದರು. ಓಪನರ್ ಅಭಿಷೇಕ್ ಗೋಸ್ವಾಮಿ, ಮೇಧವಾ ಕೌಶಿಕ್ ಜವಾಬ್ದಾರಿ ಮರೆತರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಕರ್ನಾಟಕದ ವೇಗಿಗಳು ಕೊಡುಗೆ ನೀಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಿತುರಾಜ್ ಶರ್ಮಾ 12 ರನ್ಗಳಿಸಿ ಮುನ್ನುಗುತ್ತಿದ್ದಾಗ ಪ್ರತಾಪ್ ತೋಡಿದ ಖೆಡ್ಡಾಗೆ ಬಲಿಯಾದರು.

ನಾಯಕ ಆರ್ಯನ್ ಜುಯಲ್, ಆದಿತ್ಯ ಶರ್ಮಾ, ವಿಪ್ರಜ್ ಎನ್ ರನ್ ಕಲೆ ಹಾಕುವಲ್ಲಿ ಎಡವಿದರು. ಈಗಾಗಲೇ ತಮ್ಮ ಬ್ಯಾಟಿಂಗ್ನಿಂದ ಸದ್ದು ಮಾಡಿರುವ ಸಮೀರ್ ರಿಜ್ವಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ತಾವು ಎದುರಿಸಿದ 59 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 25 ರನ್ ಸಿಡಿಸಿ ಔಟ್ ಆದರು. ನಂತರ ಬ್ಯಾಟ್ ಮಾಡಿದ ಕೃತಗ್ಯ ಸಿಂಗ್ (13) ಹಾಗೂ ಸೌರಭ್ ಕುಮಾರ್ (13) ಕೊಂಚ ಕರ್ನಾಟಕದ ಬೌಲರ್ಗಳನ್ನು ಕಾಡಿದರು. ಉಳಿದಂತೆ ಕೆಳಕ್ರಮಾಂಕದ ಆಟಗಾರರು ಸೊನ್ನೆ ಸುತ್ತಿದರು.
ಕರ್ನಾಟಕದ ವೇಗದ ಬೌಲರ್ಗಳು ಸ್ಥಿರ ಪ್ರದರ್ಶನ ನೀಡಿದರು. ಭರವಸೆಯ ಬೌಲರ್ ವಾಸುಕಿ ಕೌಶಿಕ್ 16 ಓವರ್ ಬೌಲ್ ಮಾಡಿ 20 ರನ್ ನೀಡಿ 5 ವಿಕೆಟ್ ಕಬಳಿಸಿದರು. ವಿದ್ಯಾಧರ್ ಪಾಟೀಲ್ 22 ರನ್ ನೀಡಿ ಎರಡು ವಿಕೆಟ್ ಪಡೆದರು. ಉಳಿದಂತೆ ಯಶೋವರ್ಧನ್ ಪ್ರತಾಪ್ ಹಾಗೂ ಮೋಶ್ಸಿನ್ ಖಾನ್ ತಲಾ ಒಂದು ವಿಕೆಟ್ ಪಡೆದರು. ಟೂರ್ನಿಯಲ್ಲಿ ಕರ್ನಾಟಕ ಕೇವಲ ಒಂದೇ ಒಂದು ಗೆಲುವು ದಾಖಲಿಸಿದ್ದರಿಂದ, ಮುಂದಿನ ಎಲ್ಲ ಪಂದ್ಯಗಳನ್ನು ಗೆಲ್ಲುವ ಅನಿವಾರ್ಯತೆಯಲ್ಲಿದೆ. ಅಂದಾಗ ಮಾತ್ರ ನಾಕೌಟ್ ಕನಸು ನನಸಾಗುತ್ತದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಕರ್ನಾಟಕದ ಆರಂಭ ಕಳಪೆಯಾಗಿತ್ತು. ಭರವಸೆಯ ಬ್ಯಾಟರ್ ನಿಕಿನ್ ಜೋಸ್, ಆರ್ ಸ್ಮರಣ್ ಸೊನ್ನೆ ಸುತ್ತಿದರು. ನಾಯಕ ಮಯಾಂಕ್ ಅಗರ್ವಾಲ್ ಹಾಗೂ ಕೆ ಶ್ರೀಜೇತ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಮೂರನೇ ವಿಕೆಟ್ಗೆ 48 ರನ್ ಸೇರಿಸಿತು. ಮಯಾಂಕ್ 30 ರನ್ಗಳಿಸಿದ್ದಾಗ ಔಟ್ ಆದರು. ಐಪಿಎಲ್ನಲ್ಲಿ ಆಡಿದ ಅನುಭವ ಹೊಂದಿರುವ ಅಭಿನವ್ ಮನೋಹರ್, ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿ ಮನೀಷ್ ಪಾಂಡೆ ರನ್ ಬರ ಅನುಭವಿಸಿದರು. ಎರಡನೇ ದಿನದಾಟಕ್ಕೆ ಕೆ ಶ್ರೀಜೇತ್ (ಅಜೇಯ 68) ಹಾಗೂ ಆಲ್ರೌಂಡರ್ ಶ್ರೇಯಸ್ ಗೋಪಾಲ್ (ಅಜೇಯ 14) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕರ್ನಾಟಕ ದಿನದಾಟದಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 127 ರನ್ ಕಲೆ ಹಾಕಿದ್ದು, 38 ರನ್ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದೆ.