
ಧರ್ಮಶಾಲಾ, ಮಾರ್ಚ್ 05: ದೇವಧರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಬಿ ತಂಡದ ವಿರುದ್ಧ ವಿಜಯ್ ಹಜಾರೆ ವಿಜೇತ ಕರ್ನಾಟಕ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಆರ್ ಸಮರ್ಥ್ ಅವರ ಅತ್ಯುತ್ತಮ ಶತಕದ ನೆರವಿನಿಂದಾಗಿ 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 296 ರನ್ ಕಲೆ ಹಾಕಿತು. ಭಾರತ ಬಿ ತಂಡ ಗೆಲ್ಲಲು 297 ರನ್ ಗಳಿಸಬೇಕಿದೆ.
7ನೇ ಓವರ್ನಲ್ಲಿ ಮೊದಲನೇ ಬ್ಯಾಟ್ಸ್ಮನ್ ಆಗಿ ಸ್ಕ್ರೀಸಿಗಿಳಿದ ಆರ್.ಸಮರ್ಥ್ ಅವರು 48 ಓವರ್ ಪೂರ್ಣಗೊಳ್ಳುವವರೆಗೂ ಸ್ಕ್ರೀಜಿನಲ್ಲಿ ನಿಂತಿದ್ದು, ಒಂದು ಹಂತದಲ್ಲಿ ಕುಸಿತ ಕಂಡಿದ್ದ ತಂಡವನ್ನು ಮೇಲಕ್ಕೆತ್ತಿದರು.
ವಿಜಯ್ ಹಜಾರೆ ಟ್ರೋಫಿಯಿಂದಲೂ ಅತ್ಯುತ್ತಮ ಫಾರ್ಮ್ನಲ್ಲಿರುವ ಮಯಂಕ್ ಅಗರ್ವಾಲ್ ಇಂದು ಸಹ ಉತ್ತಮ ಲಯದಲ್ಲಿ ಆಡುತ್ತಿದ್ದರಾದರೂ 44 ರನ್ ಗಳಿಸಿದ್ದಾಗ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದರು. ಮತ್ತೊಬ್ಬ ಆರಂಭಿಕ ಬ್ಯಾಟ್ಸ್ಮನ್ ಕರುಣ್ ನಾಯರ್ ಕೇವಲ 10 ಗಳಿಸಿ ಪೆವಿಲಿಯನ್ ಸೇರಿದರು.
ಆ ನಂತರ ಇನ್ನಿಂಗ್ಸ್ ಸಂಭಾಳಿಸಿದ ಆರ್.ಶರತ್ 115 ಎಸೆತದಲ್ಲಿ 117 ರನ್ ಗಳಿಸಿ ಮಿಂಚಿದರು. ಮೊದಲಿಗೆ ನಿಧಾನಗತಿಯ ಆಟಕ್ಕೆ ಮೊರೆ ಹೋದ ಸಮರ್ಥ್ ಶತಕದ ನಂತರ ಬಿರುಸಾದ ಆಟವಾಡಿದರು. ಅವರ ಇನ್ನಿಂಗ್ಸ್ನಲ್ಲಿ ಒಟ್ಟು 13 ಬೌಂಡರಿ ಮತ್ತು 1 ಸಿಕ್ಸರ್ ಇತ್ತು.
ಶರತ್ಗೆ ಉತ್ತಮ ಸಾಥ್ ನೀಡಿದ ಪವನ್ ದೇಶಪಾಂಡೆ 46 ರನ್ ಗಳಿಸಿದರು, ಅವರು ಎರಡು ಸಿಕ್ಸರ್ ಮತ್ತು 3 ಬೌಂಡರಿ ಭಾರಿಸಿದರು. ಸ್ಟುವರ್ಟ್ ಬಿನ್ನಿ ಕೇವಲ 2 ರನ್ ಗಳಿಸಿ ಔಟಾದರು. ಆ ನಂತರ ಆಗಮಿಸಿದ ಕೀಪರ್ ಗೌಥಮ್ 28 ರನ್ ಗಳಿಸಿದರು. ಶ್ರೇಯಸ್ ಗೋಪಾಲ್ 1 ರನ್ಗೆ ಪೆವಿಲಿಯನ್ ಸೇರಿದರೆ, ಗೌತಮ್ ಬಿರುಸಿನ ಆಟವಾಡಿ 17 ಎಸೆತದಲ್ಲಿ 20 ರನ್ ಗಳಿಸಿದರು.
ಭಾರತ ಬಿ ತಂಡದ ಪರ ಸಿದ್ದಾರ್ಥ್ ಕೌಲ್ 3 ವಿಕೆಟ್ , ಹರ್ಷಲ್ ಪಟೇಲ್, ಜಯಂತ್ ಯಾದವ್ ಅವರು ತಲಾ ಎರಡು ವಿಕೆಟ್ ಗಳಿಸಿದರು. ಉಮೇಶ್ ಯಾದವ್ ಒಂದು ವಿಕೆಟ್ ಗಳಿಸಿದರು.