ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೇರುವ ಕನಸಿನಲ್ಲಿದ್ದ ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರ್ವಾಲ್ಗೆ ನಿರಾಸೆ ಆಗಿದೆ. ಆದರೆ ಅವರು ಭಾರತ ತಂಡವನ್ನು ಸೇರಲು ಪೂರಕವಾಗಿರುವ ವೇದಿಕೆಯೊಂದು ಸಿದ್ಧವಾಗಿದೆ. ದುಲೀಪ್ ಟ್ರೋಫಿಯಲ್ಲಿ ಭಾರತ ಎ ಪರ ಕಾಣಿಸಿಕೊಂಡಿದ್ದ ಮಯಾಂಕ್, ಚಾಂಪಿಯನ್ ತಂಡದ ನಾಯಕ. ಈಗ ಇವರ ಹೆಗಲಿಗೆ ಕರ್ನಾಟಕ ರಣಜಿ ತಂಡದ ಜವಾಬ್ದಾರಿಯನ್ನು ಸಹ ನೀಡಲಾಗಿದೆ. ಮಧ್ಯಪ್ರದೇಶ ಹಾಗೂ ಕೇರಳ ವಿರುದ್ಧದ ಪಂದ್ಯಗಳಿಗೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಮಯಾಂಕ್ಗೆ ಪಟ್ಟ ಕಟ್ಟಲಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯಲಿವೆ. ಈ ಟೂರ್ನಿಯಲ್ಲಿ ಕರ್ನಾಟಕ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 11 ರಂದು ಮಧ್ಯಪ್ರದೇಶದ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಇಂದೋರ್ ಅಂಗಳ ಆತಿಥ್ಯ ನೀಡಲಿದೆ. ಅಕ್ಟೋಬರ್ 18 ರಂದು ಕರ್ನಾಟಕ ಹಾಗೂ ಕೇರಳ ತಂಡಗಳು ಬೆಂಗಳೂರಿನಲ್ಲಿ ಕಾದಾಟ ನಡೆಸಲಿವೆ.

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆಯಲು ಮಯಾಂಕ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇನ್ನು ಕರ್ನಾಟಕ ತಂಡ ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿದೆ. ದುಲೀಪ್ ಟ್ರೋಫಿಯಲ್ಲಿ ಚೇತೋಹಾರಿ ಪ್ರದರ್ಶನ ನೀಡಿದ್ದ ಪ್ರಸಿದ್ಧ ಕೃಷ್ಣ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಇಬ್ಬರೂ ಸ್ಟಾರ್ಗಳು ತಮ್ಮ ಪ್ರದರ್ಶನದಲ್ಲಿ ಸ್ಥಿರತೆಯನ್ನು ನೀಡುವ ಮೂಲಕ ಮತ್ತೆ ಭಾರತ ತಂಡವನ್ನು ಸೇರುವ ಕನಸು ಕಾಣುತ್ತಿದ್ದಾರೆ.
ಮಯಾಂಕ್ ಭಾರತದ ಪರ 21 ಟೆಸ್ಟ್ ಪಂದ್ಯಗಳಲ್ಲಿ 4 ಶತಕ ಮತ್ತು 6 ಅರ್ಧ ಶತಕಗಳನ್ನು ಒಳಗೊಂಡಂತೆ 1488 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಸೇರುವ ಕನಸಿನಲ್ಲಿರುವ ಮಯಾಂಕ್ ಅಗರ್ವಾಲ್, ರಣಜಿ ಟೂರ್ನಿಯಲ್ಲಿ ಅಬ್ಬರದ ಪ್ರದರ್ಶನವನ್ನು ನೀಡಿ ಆಯ್ಕೆದಾರರ ಮನ ಗೆಲ್ಲುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ (ನಾಯಕ), ನಿಕಿನ್ ಜೋಸ್, ದೇವದತ್ ಪಡಿಕ್ಕಲ್, ಆರ್ ಸ್ಮರಣ್, ಮನೀಶ್ ಪಾಂಡೆ, ಶ್ರೇಯಸ್ ಗೋಪಾಲ್, ಸುಜಯ್ ಸಾತೇರಿ, ಹಾರ್ದಿಕ್ ರಾಜ್, ವಿಜಯ್ ಕುಮಾರ್ ವೈಶಾಖ್, ಪ್ರಸಿದ್ಧ್ ಕೃಷ್ಣ, ವಾಸುಕಿ ಕೌಶಿಕ್, ಲವನೀತ್ ಸಿಸೋಡಿಯಾ, ಮೊಹ್ಸಿನ್ ಖಾನ್, ವಿದ್ಯಾಧರ್ ಪಾಟೀಲ್, ಕಿಶನ್ ಎಸ್. ಅಭಿಲಾಶ್ ಶೆಟ್ಟಿ,