ಕರ್ನಾಟಕ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಇನಿಂಗ್ಸ್ ಹಾಗೂ 207 ರನ್ಗಳಿಂದ ಮಣಿಸಿ ಅಬ್ಬರಿಸಿದೆ. ಈ ಗೆಲುವಿನ ಮೂಲಕ ಕರ್ನಾಟಕ ಸಿ ಗುಂಪಿನಲ್ಲಿ ಆಡಿದ ಆರು ಪಂದ್ಯಗಳಲ್ಲಿ ಎರಡನೇ ಗೆಲುವು, ನಾಲ್ಕು ಡ್ರಾ ಕಂಡಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿದೆ. ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಕರ್ನಾಟಕದ ಆಟಗಾರರು ಜಯದಲ್ಲಿ ಮಿಂಚಿದ್ದಾರೆ. ಎರಡನೇ ಇನಿಂಗ್ಸ್ನಲ್ಲಿ ಶತಕ ಬಾರಿಸಿದ ಶುಭಮನ್ ಗಿಲ್ ಏಕಾಂಗಿ ಹೋರಾಟ ವ್ಯರ್ಥವಾಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಮೊದಲ ಇನಿಂಗ್ಸ್ನಲ್ಲಿ 55 ರನ್ಗಳಿಗೆ ಆಲೌಟ್ ಆಯಿತು. ಮೊದಲ ಇನಿಂಗ್ಸ್ ಆರಂಭಿಸಿದ ಕರ್ನಾಟಕ 475 ರನ್ ಕಲೆ ಹಾಕಿ, ಮೊದಲ ಇನಿಂಗ್ಸ್ನಲ್ಲಿ 420 ರನ್ಗಳ ಮುನ್ನಡೆ ಸಾಧಿಸಿತ್ತು. ಇನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಪಂಜಾಬ್ 213 ರನ್ಗಳಿಗೆ ಆಲೌಟ್ ಆಯಿತು. ಕರ್ನಾಟಕ ಇನಿಂಗ್ಸ್ ಹಾಗೂ 207 ರನ್ ಜಯ ದಾಖಲಿಸಿದೆ.

ಎರಡನೇ ಇನಿಂಗ್ಸ್ನಲ್ಲೂ ಪಂಜಾಬ್ ಪರ ಶುಭಮನ್ ಗಿಲ್ ಅವರನ್ನು ಹೊರತು ಪಡಿಸಿದರೆ ಉಳಿದಂತೆ, ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಬರವನ್ನು ಅನುಭವಿಸಿದರು. 84 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶುಭಮನ್ ಗಿಲ್ ಹಾಗೂ ಮಯಾಂಕ್ ಮರ್ಕಂಡೇಯ ಆಧಾರವಾದರು. ಈ ಜೋಡಿ 53 ರನ್ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾಯಿತು. ಆದರೆ ಮಯಾಂಕ್ 27 ರನ್ ಗಳಿಸಿ ಔಟ್ ಆದರು.
ಶುಭಮನ್ ಗಿಲ್ ಅವರನ್ನು ಸೇರಿಕೊಂಡ ಸಂದೀಪ್ ಬಜ್ವಾ ತಂಡಕ್ಕೆ ಎಂಟನೇ ವಿಕೆಟ್ಗೆ 40 ರನ್ ಕಾಣಿಕೆ ನೀಡಿದರು. ಬಳಿಕ ತಾಳ್ಮೆ ಕಳೆದುಕೊಂಡ ಶುಭಮನ್ ಗಿಲ್ ಶ್ರೇಯಸ್ ಗೋಪಾಲ್ ತೋಡಿದ ಖೆಡ್ಡಾಗೆ ಬಲಿಯಾದರು. ಇವರು 171 ಎಸೆತಗಳಲ್ಲಿ, 14 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 102 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಕರ್ನಾಟಕದ ಪರ ಭರವಸೆಯ ಸ್ಟಾರ್ ಬೌಲರ್ಗಳು ಮಹತ್ವದ ಪಂದ್ಯದಲ್ಲಿ ಮೊನಚಾದ ದಾಳಿ ನಡೆಸಿ ಅಬ್ಬರಿಸಿದರು. ಎರಡನೇ ಇನಿಂಗ್ಸ್ನಲ್ಲಿ ಯಶೋವರ್ಧನ್, ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಪಡೆದರು. ಪ್ರಸಿದ್ಧ ಕೃಷ್ಣ ಎರಡು ವಿಕೆಟ್ ಕಬಳಿಸಿದರು. ಉಳಿದಂತೆ ಮೊದಲ ಇನಿಂಗ್ಸ್ನಲ್ಲಿ ಅಬ್ಬರ ನಡೆಸಿದ್ದ ವಾಸುಕಿ ಕೌಶಿಕ್ ಹಾಗೂ ಅಭಿಲಾಶ್ ಶೆಟ್ಟಿ ತಲಾ ಒಂದು ವಿಕೆಟ್ ಕಬಳಿಸಿದರು.
ಕರ್ನಾಟಕದ ಪರ ಮೊದಲ ಇನಿಂಗ್ಸ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ದ್ವಿಶತಕ ಬಾರಿಸಿದ ಸ್ಮರಣ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿದೆ. ಕರ್ನಾಟಕ ಲೀಗ್ ಹಂತದ ಕೊನೆಯ ಪಂದ್ಯವನ್ನು ಬೆಂಗಳೂರಿನಲ್ಲಿ ಹರಿಯಾಣ ವಿರುದ್ಧ ಆಡಲಿದೆ. ಈ ಪಂದ್ಯದಲ್ಲೂ ಅಮೋಘ ಜಯ ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸುವ ಕನಸು ಕರ್ನಾಟಕ ತಂಡದ್ದಾಗಿದೆ.