ದೇಶೀಯ ಏಕದಿನ ಸರಣಿ ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಅಮೋಘ ಪ್ರದರ್ಶನ ನೀಡಿ ಎರಡನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಮುಂಬೈ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿ ಅಬ್ಬರಿಸಿದ್ದ ಕರ್ನಾಟಕ ತಂಡ, ಅಮೋಘ ಜಯ ಸಾಧಿಸಿತ್ತು. ಪುದುಚರಿ ವಿರುದ್ಧ ಎರಡನೇ ಪಂದ್ಯದಲ್ಲಿ ಮಯಾಂಕ್ ಪಡೆ ಮೂರು ವಿಕೆಟ್ಗಳಿಂದ ಗೆಲುವು ಸಾಧಿಸಿ ಅಬ್ಬರಿಸಿದೆ.
ಮೊದಲು ಬ್ಯಾಟ್ ಮಾಡಿದ ಪುದುಚೇರಿ ತಂಡ 50 ಓವರ್ಗಳಲ್ಲಿ 9 ವಿಕೆಟ್ಗೆ 211 ರನ್ ಸಿಡಿಸಿದರು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕರ್ನಾಟಕ 40.5 ಓವರ್ಗಳಲ್ಲಿ 7 ವಿಕೆಟ್ಗೆ 214 ರನ್ ಬಾರಿಸಿ ಜಯ ಸಾಧಿಸಿತು. ಈ ಮೂಲಕ ಆಡಿದ ಎರಡೂ ಪಂದ್ಯ ಗೆದ್ದಿದ್ದು ಸಿ ಗುಂಪಿನಲ್ಲಿ ಅಗ್ರ ಸ್ಥಾನವನ್ನು ಪಡೆದಿದೆ.

ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪುದುಚೇರಿಯ ಟಾಪ್ ಆರ್ಡರ್ ಬ್ಯಾಟರ್ಗಳು ಸಿಂಗಲ್ ಡಿಜಿಟ್ನಲ್ಲಿ ಆಟ ಮುಗಿಸಿದರು. ಗಂಗಾ ಶ್ರೀಧರ್ ರಾಜು, ಅಜಯ್ ರೋಹೆರಾ, ಮೋಹಿತ್ ಕಾಳೆ, ಫಬೀದ್ ಅಹಮದ್, ಆಕಾಶ ಕರಗಾವೆ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 31 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅರುಣ್ ಕಾರ್ತಿಕ್, ಅಮನ್ ಖಾನ್ ಆಧಾರವಾದರು. ಈ ಜೋಡಿ ತಂಡವನ್ನು ಅಪಾಯದಿಂದ ಪಾರು ಮಾಡಿತು. ಅಲ್ಲದೆ ಕರ್ನಾಟಕದ ಬೌಲರ್ಗಳ ತಂತ್ರವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡಿತು.
ಆರನೇ ವಿಕೆಟ್ಗೆ 86 ರನ್ ಗಳನ್ನು ಸೇರಿಸಿದ ಅರುಣ್ ಕಾರ್ತಿಕ್, ಅಮನ್ ಖಾನ್ ಅಬ್ಬರಿಸಿತು. ಅಮನ್ ಖಾನ್ 65 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಸಿಡಿಸಿದರು. ಅರುಣ್ ಕಾರ್ತಿಕ್ 106 ಎಸೆತಗಳಲ್ಲಿ 71 ರನ್ಗಳಿಸಿದರು. ಉಳಿದಂತೆ ಅಂಕಿತ್ ಶರ್ಮಾ 14, ಸಾಗರ್ ಉದೇಶಿ 21, ಗೌರವ್ ಯಾದವ್ ಅಜೇಯ 14 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.
ಕರ್ನಾಟಕದ ವೇಗದ ಬೌಲರ್ ವಿದ್ಯಾಧರ್ ಪಾಟಿಲ್ 27 ರನ್ಗಳಿಗೆ 4 ವಿಕೆಟ್ ಪಡೆದರು. ಶ್ರೇಯಸ್ ಗೋಪಾಲ್ 2 ಉಳಿದಂತೆ ಕೌಶಿಕ್ ವಿ, ವಿಜಯ್ ಕುಮಾರ್ ವೈಶಾಖ್ ತಲಾ ಒಂದು ವಿಕೆಟ್ ಕಬಳಿಸಿದರು.
ಕರ್ನಾಟಕದ ಆರಂಭಿಕ ಆಟಗಾರರು ಬಿಗ್ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಿಕಿನ್ ಜೋಸ್, ಮಯಾಂಕ್ ಅಗರ್ವಾಲ್ 42 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿ ಆಗಿತ್ತು. ಅನೀಶ್ ಕೆವಿ ಸಹ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಕೆಎಲ್ ಶ್ರೀಜೆತ್ ನಿರಾಸೆ ಅನುಭವಿಸಿದರು.
78 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರ್ ಸ್ಮರಣ್ ಹಾಗೂ ಶ್ರೇಯಸ್ ಗೋಪಾಲ್ (40) ಜೋಡಿ ಆಧಾರವಾಯಿತು. ಈ ಜೋಡಿ ಐದನೇ ವಿಕೆಟ್ಗೆ ಶತಕದ ಜೊತೆಯಾಟವನ್ನು ನೀಡಿ ತಂಡವನ್ನು ಗೆಲುವಿನ ದಡದತ್ತ ತಂದು ನಿಲ್ಲಿಸಿತು. ಆರ್ ಸ್ಮರಣ್ 87 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 100 ರನ್ ಸಿಡಿಸಿ ಆರ್ಭಟಿಸಿತು. ಈ ಮೂಲಕ ಕರ್ನಾಟಕ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.