
ರಣಜಿ ಟ್ರೋಫಿಯ ಛತ್ತೀಸ್ಗಡದ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ಮೊದಲನೇ ಇನ್ನಿಂಗ್ಸ್ನಲ್ಲಿ 1 ವಿಕೆಟ್ ಕಳೆದುಕೊಂಡು 202 ರನ್ ಗಳಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಛತ್ತೀಸ್ಗಢ ಮೊದಲ ಇನ್ನಿಂಗ್ಸ್ನಲ್ಲಿ 311 ರನ್ಗಳಿಗೆ ಆಲೌಟ್ ಆಯಿತು. ಛತ್ತೀಸ್ಗಢದ ಪರವಾಗಿ ಆಶುತೋಷ್ 135 ರನ್ ಗಳಿಸಿದರು, ಅಮನ್ದೀಪ್ ಖರೆ 93 ರನ್ ಗಳಿಸಿದರು. ಕರ್ನಾಟಕದ ಪರವಾಗಿ ವಿದ್ವತ್ ಕಾವೇರಪ್ಪ 5 ವಿಕೆಟ್ ಪಡೆದು ಮಿಂಚಿದರು. ವಾಸುಕಿ ಕೌಶಿಕ್ 4 ವಿಕೆಟ್ ಪಡೆದರು, ವಿಜಯ್ ಕುಮಾರ್ ವೈಶಾಕ್ 1 ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅದ್ಭುತ ಫಾರ್ಮ್ ಪ್ರದರ್ಶಿಸುತ್ತಿರುವ ರವಿಕುಮಾರ್ ಸಮರ್ಥ್ ಮತ್ತೊಂದು ಉತ್ತಮ ಇನ್ನಿಂಗ್ಸ್ ಆಡಿದರು. ನಾಯಕ ಮಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ್ ಜೋಡಿ ಮೊದಲನೇ ವಿಕೆಟ್ಗೆ 163 ಕಲೆಹಾಕಿದರು.

ಮಯಾಂಕ್ ಅಗರ್ವಾಲ್ ಅಜೇಯ ಶತಕ
ರವಿಕುಮಾರ್ ಸಮರ್ಥ್ 81 ರನ್ ಗಳಿಸಿ ಔಟಾದರು, ನಂತರ ವಿಶಾನ್ ಓನತ್ ಜೊತೆ ಆಟ ಮುಂದುವರೆಸಿದ ಮಯಾಂಕ್ ಅಗರ್ವಾಲ್ ತಮ್ಮ ಶತಕ ಪೂರೈಸಿದರು. 191 ಎಸೆತಗಳಲ್ಲಿ ಅಜೇಯ 102 ರನ್ ಗಳಿಸಿರುವ ಅಗರ್ವಾಲ್ ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ಅವರ ಈ ಅದ್ಭುತ ಇನ್ನಿಂಗ್ಸ್ನಲ್ಲಿ 9 ಬೌಂಡರಿ 5 ಸಿಕ್ಸರ್ ಸೇರಿವೆ.
2ನೇ ದಿನಾದಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 202 ರನ್ ಗಳಿಸಿರುವ ಕರ್ನಾಟಕ 109 ರನ್ಗಳ ಹಿನ್ನಡೆಯಲ್ಲಿದ್ದು, 3ನೇ ದಿನದಲ್ಲಿ ಉತ್ತಮ ಮುನ್ನಡೆ ಪಡೆಯುವ ವಿಶ್ವಾಸದಲ್ಲಿದೆ. ರಣಜಿ ಟ್ರೋಫಿಯಲ್ಲಿ ಸಿ ಗುಂಪಿನಲ್ಲಿರುವ ಕರ್ನಾಟಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇದುವರೆಗೂ 3 ಪಂದ್ಯಗಳನ್ನು ಆಡಿರುವ ಕರ್ನಾಟಕ 1 ಪಂದ್ಯದಲ್ಲಿ ಜಯ ಸಾಧಿಸಿದ್ದು 2 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.
ಉಭಯ ತಂಡಗಳ ಆಡುವ ಬಳಗ
ಕರ್ನಾಟಕ: ರವಿಕುಮಾರ್ ಸಮರ್ಥ್, ಮಯಾಂಕ್ ಅಗರ್ವಾಲ್ (ನಾಯಕ), ವಿಶಾಲ್ ಓನತ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಬಿಆರ್, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ವಾಸುಕಿ ಕೌಶಿಕ್, ವಿಜಯ್ಕುಮಾರ್ ವೈಶಾಕ್, ವಿದ್ವತ್ ಕಾವೇರಪ್ಪ.
ಛತ್ತೀಸ್ಗಢ: ಅವನೀಶ್ ಧಲಿವಾಲ್, ಅನುಜ್ ತಿವಾರಿ, ಅಶುತೋಷ್ ಸಿಂಗ್, ಅಜಯ್ ಜಾದವ್ ಮಂಡಲ್, ಹರ್ಪ್ರೀತ್ ಸಿಂಗ್ ಭಾಟಿಯಾ(ನಾಯಕ), ಅಮನ್ದೀಪ್ ಖರೆ, ಶಶಾಂಕ್ ಸಿಂಗ್, ಮಯಾಂಕ್ ವರ್ಮಾ, ಸುಮಿತ್ ರುಯಿಕರ್, ರವಿಕಿರಣ್, ಸೌರಭ್ ಮಜುಂದಾರ್.