ಇಂದೋರ್ ನ ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್ನಲ್ಲಿ ನಡೆದ 2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಕನಾ೯ಟಕ ಗೆಲುವಿನ ನಗೆ ಬೀರಿದೆ. ಈ ಗೆಲುವಿನೊಂದಿಗೆ ಕರ್ನಾಟಕ ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದೆ. ಮಯಾಂಕ್ ಅರ್ಗವಾಲ್ ಮುನ್ನಡೆಸುತ್ತಿರುವ ಕನಾ೯ಟಕ ತಂಡದ ಉರಿ ಬೌಲಿಂಗ್ ದಾಳಿಗೆ ತಮಿಳುನಾಡು ತತ್ತರಿಸಿ ಹೋಯಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿದ ಮನೀಷ್ ಪಾಂಡೆ ಕರ್ನಾಟಕ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದು ಕೊಟ್ಟರು.
ಟಾಸ್ ಗೆದ್ದ ತಮಿಳುನಾಡು ತಂಡದ ನಾಯಕ ಶಾರುಖ್ ಖಾನ್ ಅವರು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ತಮಿಳುನಾಡಿನ ಲೆಕ್ಕಚಾರವನ್ನು ಕರ್ನಾಟಕದ ಬೌಲರ್ಗಳು ಉಲ್ಟಾ ಮಾಡಿದರು. ಕರ್ನಾಟಕದ ಬೌಲರ್ಗಳ ಸಂಘಟಿತ ಬೌಲಿಂಗ್ ದಾಳಿಗೆ ಸಿಲುಕಿದ ತಮಿಳುನಾಡು 20 ಓವರ್ ಗಳಲ್ಲಿ 90 ರನ್ ಗಳಿಗೆ ಆಲೌಟ್ ಆಯಿತು. ತಮಿಳುನಾಡು ಪರ ವರುಣ್ ಚಕ್ರವರ್ತಿ 24 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದರು.

ವರುಣ್ ಚಕ್ರವರ್ತಿ ಹೊರೆತಾಗಿ ತಮಿಳುನಾಡು ತಂಡಕ್ಕೆ ಯಾವೊಬ್ಬ ಬ್ಯಾಟರ್ ಕೂಡ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಬಾಬಾ ಇಂದ್ರಜಿತ್ 5 ರನ್ ಗಳಿಸಿದರೆ, ಎನ್ ಜಗದೀಶನ್ ಮತ್ತು ವಿಜಯ್ ಶಂಕರ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ನಿರಾಸೆ ಮೂಡಿಸಿದರು. ನಂತರ ಕ್ರೀಸ್ಗೆ ಬಂದ
ಶರತ್ ಕುಮಾರ್ 19, ಮೊಹಮ್ಮದ್ ಅಲಿ 15, ರಿತಿಕ್ ಈಶ್ವರನ್ 12 ರನ್ ಗಳಿಸಿದರು. ಕರ್ನಾಟದ ಪರ ಮಿಂಚಿನಿ ಬೌಲಿಂಗ್ ಪ್ರದರ್ಶನ ನೀಡಿದ ವಾಸುಕಿ ಕೌಶಿಕ್ 3 ಮತ್ತು ಮನೋಜ್ ಭಾಂಡಗೆ ತಲಾ ವಿಕೆಟ್ ಕಬಳಿಸಿ ಸಂಭ್ರಮಿಸಿದರು. ವಿದ್ಯಾದರ್ ಪಾಟೀಲ್ 2 ವಿಕೆಟ್ ಪಡೆದರೆ, ವಿಜಯ್ಕುಮಾರ್ ವೈಶಾಖ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
ತಮಿಳುನಾಡು ನೀಡಿದ 91 ರನ್ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಕೇವಲ 11.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ತಮಿಳುನಾಡು ಬೌಲರ್ಗಳ ಬೆಂಡೆತ್ತಿದ ಮನೀಷ್ ಪಾಂಡೆ 29 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ನೆರವಿನಿಂದ 42 ರನ್ ಕಲೆ ಹಾಕಿದರು. ಮತ್ತೊಂದೆಡೆ ನಾಯಕ ಮಯಾಂಕ್ ಅಗರ್ವಾಲ್ 27 ಎಸೆತಗಳಲ್ಲಿ 30 ರನ್ ಬಾರಿಸಿದರು.
ಕರ್ನಾಟಕ ತಂಡ ಬಿ ಗುಂಪಿನಲ್ಲಿದ್ದು, ಇದುವರೆಗೆ ಆಡಿದ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. ಇದರೊಂದಿಗೆ 12 ಅಂಕಗಳನ್ನು ಹೊಂದಿದ್ದು, 3ನೇ ಸ್ಥಾನದಲ್ಲಿದೆ.